ETV Bharat / state

ಮೀಸಲಾತಿ ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕು: ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Feb 9, 2024, 8:22 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಮ ಸಮಾಜ ಇದ್ದರೆ ರಾಮರಾಜ್ಯ ಆದಂತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇದೇ ಸಂದರ್ಭದಲ್ಲಿ ಮೀಸಲಾತಿ ಕುರಿತು ಮಾತನಾಡುತ್ತಾ, ಅದು ನಿಮ್ಮ ಹಕ್ಕು ಎಂದರು.

ಸಿಎಂ ಸಿದ್ದರಾಮಯ್ಯ ಭಾಷಣ

ದಾವಣಗೆರೆ: ಮೀಸಲಾತಿ ಎಂಬುದು ಭಿಕ್ಷೆ ಭಿಕ್ಷೆ ಕೊಡುವುದಲ್ಲ, ಅದು ನಿಮ್ಮ ಹಕ್ಕು ಎಂದು ಸಿಎಂ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿರುವ ವಾಲ್ಮೀಕಿ ಮಠದಲ್ಲಿ ಇಂದು ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತರು ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಎಂದರು.

2013ರಲ್ಲಿ ನಾನು ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಜಾತಿ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲು, ಅನುದಾನ ಮೀಸಲಿಡಲು ಕಾನೂನು ಮಾಡಿದ್ದೆ. ಇಡೀ ದೇಶದಲ್ಲಿ ಸಾಮಾಜಿಕ ನ್ಯಾಯ, ರಾಷ್ಟ್ರ ಭಕ್ತಿ, ಬದಲಾವಣೆ ಬಗ್ಗೆ ಭಾಷಣ ಹೊಡೀತರಲ್ಲಾ, ಈ ಕಾನೂನು ಇಡೀ ದೇಶದಲ್ಲಿ ಜಾರಿ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ವಾಲ್ಮೀಕಿ ರಾಮಾಯಣ ಬರೆದು ಮಹರ್ಷಿ ಆದರು: ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ಮಹರ್ಷಿಯಾದರು. ಸಮಾಜದಲ್ಲಿ ಅವರ ವಿಚಾರಗಳಿಂದ ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ರಾಮಾಯಣ ಒಂದು ಮಹಾನ್ ಗ್ರಂಥ. ನೂರಾರು ವರ್ಷಗಳ ಹಿಂದೆ ವಾಲ್ಮೀಕಿ ರಾಮಾಯಣ ಬರೆದರೆ, ವ್ಯಾಸ ಮಹಾಭಾರತ ಬರೆದರು. ಮಹಾನ್ ಗ್ರಂಥಗಳನ್ನು ರಚಿಸಬೇಕಾದ್ರೆ ಮೇಲ್ವರ್ಗದಲ್ಲಿ ಹುಟ್ಟಬೇಕೆಂಬ ಪ್ರತೀತಿ ಅಂದು ಇತ್ತು.‌ ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾಗಿದ್ದಲ್ಲ. ಆ ಕಾವಿ ಶಕ್ತಿ ಶೂದ್ರರಲ್ಲಿಯೂ ಇದೆ ಎಂದು ಸಾಬೀತು ಮಾಡಿದವರು ವಾಲ್ಮೀಕಿ ಎಂದು ತಿಳಿಸಿದರು.

ಸಮಸಮಾಜ ಇದ್ದರೆ ರಾಮರಾಜ್ಯ ಆದಂತೆ: ಶ್ರೀರಾಮಚಂದ್ರನ ಆಸ್ಥಾನ ವರ್ಗರಹಿತ, ಜಾತಿರಹಿತವಾಗಿತ್ತು. ಅಲ್ಲಿ ಎಲ್ಲರಿಗೂ ಸಮಾನ ಎಂಬಂತೆ ನಿಯಮ ಇತ್ತು. ಪ್ರಜೆಗಳೇ ಪ್ರಭುಗಳೆಂಬ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಈ ಪ್ರಜಾಪ್ರಭುತ್ವವನ್ನು ರಾಮಾಯಣ, ಮಹಾಭಾರತದಲ್ಲಿ ನೋಡಲು ಸಾಧ್ಯ. ಸರ್ವರಿಗೂ ಸಮಾನ ಅವಕಾಶ ಇರುವಂತಹ ಪ್ರಜಾಪ್ರಭುತ್ವ ಅಂದು ಇತ್ತು. ಸಮಸಮಾಜ ಇದ್ದರೆ ರಾಮರಾಜ್ಯ ಆದಂತೆ ಎಂದರು.

ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಬೇಕು. ಯಾರೂ ದ್ವೇಷಿಸಬಾರದು ಎಂದು ಹಿಂದೂ, ಇಸ್ಲಾಂ, ಕ್ರೈಸ್ತ ಧರ್ಮಗಳಲ್ಲೂ ಹೇಳಲಾಗಿದೆ. 'ದಯೆಯೇ ಧರ್ಮದ ಮೂಲವಯ್ಯ, ದಯೇ ಇಲ್ಲದ ಧರ್ಮವದಾವುದಯ್ಯ' ಎಂದು ಬಸವಣ್ಣ ಹೇಳಿದ್ದಾರೆ. ಧರ್ಮ ನಮಗೋಸ್ಕರ, ನಾವು ಧರ್ಮಗೋಸ್ಕರ ಅಲ್ಲ‌. ಮನುಷ್ಯರನ್ನು ಪ್ರೀತಿಸುವುದೇ ನಿಜವಾದ ಧರ್ಮ. ಆದರೆ ಇಂದು ಪಟ್ಟಭದ್ರ ಹಿತಾಸಕ್ತಿಗಳು ಒಂದು ಧರ್ಮ ಮತ್ತೊಂದು ಧರ್ಮದವರ ಮೇಲೆ, ಜಾತಿ ಜಾತಿ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಸಮಾಜದ ಎಲ್ಲಾ ಜಾತಿಗಳು ಧರ್ಮಗಳು ಸಹಬಾಳ್ವೆಯಿಂದ ಇರಬೇಕು. ಸಾಮಾಜಿಕ, ಆರ್ಥಿಕವಾಗಿ ಶಕ್ತಿ ಬಂದರೆ ಸಮ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: 'ಅನ್ಯಾಯವಾದರೆ ಪ್ರತಿಭಟಿಸಬಾರದಾ? ಯಡಿಯೂರಪ್ಪನವರಂತೆ ಬಾಯಿ ಮುಚ್ಚಿಕೊಂಡಿರಬೇಕಾ?'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.