ETV Bharat / state

ಎಸ್‌ಎಸ್‌ಎಲ್‌ಸಿ ಟಾಪರ್​ ಅಂಕಿತಾಗೆ ₹5 ಲಕ್ಷ, ನವನೀತ್​ಗೆ ₹3 ಲಕ್ಷ ನೆರವು ಘೋಷಿಸಿದ ಸಿಎಂ - SSLC Toppers

author img

By ETV Bharat Karnataka Team

Published : May 15, 2024, 7:15 AM IST

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಹಣಕಾಸು ನೆರವು ಘೋಷಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸಿಎಂ ಸನ್ಮಾನ
ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸಿಎಂ ಸನ್ಮಾನ (ETV Bharat)

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗು ತೃತೀಯ ಸ್ಥಾನಗಳಿಸಿದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದರು.

ಅಂಕಿತ ಮತ್ತು ನವನೀತ್ ಸಾಧನೆಗೆ ಮೆಚ್ವುಗೆ ವ್ಯಕ್ತಪಡಿಸಿದ ಸಿಎಂ, ವಿದ್ಯಾರ್ಥಿಗಳ ಪೋಷಕರನ್ನೂ ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು.‌ ಇದೇ ಸಂದರ್ಭದಲ್ಲಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗು ನವನೀತ್​ಗೆ 3 ಲಕ್ಷ ರೂ.ಗಳ ಹಣಕಾಸು ನೆರವು ಪ್ರಕಟಿಸಿದರು.

ಗ್ರಾಮೀಣ ಮಕ್ಕಳು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಲಿ. ಈ ಮಕ್ಕಳು ಓದಿದ ಶಾಲೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿ ತುಂಬಲಿ ಎಂದು ತಿಳಿಸಿದ ಸಿಎಂ, ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದರು.

ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅಂಕಿತ, "ಸರ್,​​ ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವು" ಎಂದರು. ಇದೇ ವೇಳೆ, ಐಎಎಸ್ ಅಧಿಕಾರಿ ಆಗುವ ಬಯಕೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಅಂಕಿತಾ ಮತ್ತು ನವನೀತ್ ಅವರನ್ನು ಅಭಿನಂದಿಸಿದ್ದು, 5 ಹಾಗೂ 2 ಲಕ್ಷ ರೂ ಪ್ರೋತ್ಸಾಹಧನ ಘೋಷಿಸಿದ್ದಾರೆ.

ಇದನ್ನೂ ಓದಿ: SSLC ಟಾಪರ್ ಅಂಕಿತಾಗೆ 5 ಲಕ್ಷ, 3ನೇ ಸ್ಥಾನ ಪಡೆದ ನವನೀತ್​ಗೆ 2 ಲಕ್ಷ ರೂ. ಉಡುಗೊರೆ ನೀಡಿದ ಡಿಸಿಎಂ - SSLC TOPPERS RECIVED BUMPER GIFT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.