ETV Bharat / state

'ಶೋಭಾ ಕರಂದ್ಲಾಜೆಗೆ ಟಿಕೆಟ್​ ನೀಡಬಾರದು': ಚಿಕ್ಕಮಗಳೂರಿನಲ್ಲಿ ಬಿಜೆ‍ಪಿ ಕಾರ್ಯಕರ್ತರ ಆಗ್ರಹ

author img

By ETV Bharat Karnataka Team

Published : Mar 10, 2024, 6:42 PM IST

Updated : Mar 10, 2024, 7:05 PM IST

ಈ ಬಾರಿ ಚಿಕ್ಕಮಗಳೂರು ಜಿಲ್ಲೆಯವರಿಗೇ ಬಿಜೆಪಿ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

chikkamagaluru-bjp-activists-demanded-not-give-ticket-to-mp-shobha-karandlaje
ಶೋಭಾ ಕರಂದ್ಲಾಜೆಗೆ ಟಿಕೆಟ್​ ನೀಡಬೇಡಿ: ಚಿಕ್ಕಮಗಳೂರಿನಲ್ಲಿ ಬಿಜೆ‍ಪಿ ಕಾರ್ಯಕರ್ತರ ಆಗ್ರಹ

ಚಿಕ್ಕಮಗಳೂರಿನಲ್ಲಿ ಬಿಜೆ‍ಪಿ ಕಾರ್ಯಕರ್ತರ ಆಗ್ರಹ

ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ 'ಗೋ ಬ್ಯಾಕ್' ಚಳವಳಿ ತೀವ್ರಗೊಂಡಿದೆ. ಈ ಬಾರಿ ಯಾವುದೇ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಟಿಕೆಟ್​​ ಕೊಡಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ನಡೆಯುತ್ತಿದ್ದ ‌ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳ 'ಗೋ ಬ್ಯಾಕ್' ಚಳವಳಿ ಬೀದಿಗೆ ಬಂದಿದೆ‌.

ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ‌ನಿರ್ವಹಣಾ ಸಮಿತಿ ಸಭೆ ಭಾನುವಾರ ನಡೆಯುತ್ತಿತ್ತು. ಈ ವೇಳೆ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್​ ಕೊಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಸಂಸದೆ ಕಾರ್ಯಕರ್ತರ ಕೈಗೆ ಸಿಗುವುದಿಲ್ಲ, ಕಾರ್ಯಕರ್ತರ ಜೊತೆ ನಿಲ್ಲುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬರುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಕರಂದ್ಲಾಜೆ ಅವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭ್ಯರ್ಥಿ ಯಾರು ಎಂಬುದು ಇನ್ನೂ ಇತ್ಯರ್ಥ ಆಗಿಲ್ಲ. ಶೋಭಾ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅವರು ಯಾರನ್ನು ಕೇಳಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು. ಇನ್ನು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪಕ್ಷದ ಮುಖಂಡರು ಪ್ರಯತ್ನಿಸಿದರು. ಆದರೆ, ಸುಮ್ಮನಾಗದ ಕಾರ್ಯಕರ್ತರು, ಕಚೇರಿಯಿಂದ ಹೊರಬಂದು ಗೋ ಬ್ಯಾಕ್ ಶೋಭಾ ಎಂದು ಘೋಷಣೆ ಕೂಗಿದರು.

ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಬಂದ ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, "ಚುನಾವಣೆಯ ಸಮಯದಲ್ಲಿ ಸಾಕಷ್ಟು ಅಪೇಕ್ಷಿತರು ಇರುತ್ತಾರೆ. ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರದು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ಮುಂದೆ ಅಪೇಕ್ಷಿತರ ಪಟ್ಟಿ ಇದೆ. ಸೆಂಟ್ರಲ್ ಟೀಮ್ ವರದಿ ಸಂಗ್ರಹಿಸಿ ಟಿಕೆಟ್ ಫೈನಲ್ ಮಾಡುತ್ತೆ. ಸೆಂಟ್ರಲ್ ಟೀಮ್​ಗೆ ಸರ್ವೆ ವರದಿ ನೀಡಲಾಗಿದೆ. ಕಾರ್ಯಕರ್ತರ ಜೊತೆ ಒನ್ ಟು ಒನ್ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಅಪೇಕ್ಷಿತರ ಪಟ್ಟಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರೂ ಇದೆ" ಎಂದರು.

ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, "ಕಾರ್ಯಕರ್ತರೇ ದೇಶ. ದೇಶದ ನಾಯಕತ್ವ ನೋಡಿ, ಯಾರೇ ಅಭ್ಯರ್ಥಿಯಾದರೂ ಮೋದಿ ನಮ್ಮ ಅಭ್ಯರ್ಥಿ ಎಂದು ನಾವು ಕೆಲಸ ಮಾಡಬೇಕು. ಕಾರ್ಯಕರ್ತರ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು. ನಾವೆಲ್ಲರೂ ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು. ನನ್ನ ಬಳಿ ವೈಯಕ್ತಿಕವಾಗಿ ಮಾತನಾಡಿದವರಿಗೂ ಇದನ್ನೇ ಹೇಳಿದ್ದೇನೆ. ಮೋದಿ ಮತ್ತೊಮ್ಮೆ ಎಂಬ ಎಲ್ಲರೂ ಒಂದೇ ಗುರಿಯಲ್ಲಿ ಕೆಲಸ ಮಾಡಬೇಕು. ನಿಮ್ಮ ಭಾವನೆಗಳನ್ನು ತಿಳಿಸುವುದಕ್ಕೆ ಬೇರೆ ಮಾರ್ಗಗಳಿವೆ" ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭೆಗೆ ಯಾರಿಗೇ ಟಿಕೆಟ್ ಕೊಟ್ರೂ ಬಿಜೆಪಿ-ಜೆಡಿಎಸ್ ಒಗ್ಗೂಡಿ ಕೆಲಸ: ಪ್ರಾಣೇಶ್

Last Updated : Mar 10, 2024, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.