ETV Bharat / state

ಜಿಲ್ಲೆಯ ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ: ಚಲುವರಾಯಸ್ವಾಮಿ

author img

By ETV Bharat Karnataka Team

Published : Jan 30, 2024, 11:03 PM IST

ಚಲುವರಾಯಸ್ವಾಮಿ
ಚಲುವರಾಯಸ್ವಾಮಿ

ಜನರಿಗೆ ಸುಳ್ಳು ಹೇಳಿ ನಂಬಿಸುವ ಭ್ರಮೆಯಿಂದ ಹೊರಬನ್ನಿ ಎಂದು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಚಲುವರಾಯಸ್ವಾಮಿ ಅವರು ಹೇಳಿದ್ದಾರೆ.

ಚಲುವರಾಯಸ್ವಾಮಿ

ಮಂಡ್ಯ : ರಾಷ್ಟ್ರದ ವಿಚಾರದಲ್ಲಿ ನಾವು ಯಾವತ್ತೂ ದುಡುಕಿಲ್ಲ. ಈ ಜಿಲ್ಲೆಯ ಜನ ಋಣ ಇರುವವರು. ಅವರ ಜಿಲ್ಲೆ ಜನರಿಗಿಂತ ಹೆಚ್ಚಿನ ಪ್ರೀತಿ ಕಾಳಜಿ ತೋರಿದ್ರು. ಈ ಜಿಲ್ಲೆಯ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ಎಂದು ನೇರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆಗೋಡು ಹನುಮ ಧ್ವಜ ವಿವಾದ ವಿಚಾರವಾಗಿ ಸಚಿವ ಎನ್ ಚಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,
ಜನರ ನೆಮ್ಮದಿ ಕೆಡಿಸಲು ಹೆಚ್​ಡಿಕೆ ಬಂದಿದ್ದಾರೆ. ಇವತ್ತು ಧ್ವಜದ ವಿಚಾರವಾಗಿ ಪಾದಯಾತ್ರೆ, ಹೋರಾಟಕ್ಕೆ ಬಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಏಕೆ ಬರಲಿಲ್ಲ. ಮೈಶುಗರ್ ವಿಚಾರವಾಗಿ ದನಿ ಎತ್ತಲಿಲ್ಲ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ಅನ್ನೋದನ್ನ ಹೇಳಬೇಕಿತ್ತು. ಅದನ್ನ ಬಿಟ್ಟು ಹನುಮ ಧ್ವಜದ ವಿಚಾರವಾಗಿ ಬಂದಿದ್ದೀರಿ. ರಾಷ್ಟ್ರ ಧ್ವಜಕ್ಕಾಗಿ ಹೋರಾಟ ಮಾಡಿದ ಸ್ಥಳದಲ್ಲಿ ಧರ್ಮದ ವಿಚಾರವಾಗಿ ಗುಲ್ಲೆಬ್ಬಿಸುವ ಯತ್ನ ಮಾಡಿದ್ದೀರಿ. ನಿಮಗೆ ನಮ್ಮ ಮೇಲೆ ದ್ವೇಷ ಅಸೂಯೆ ಇರಬಹುದು. ಈ ಜಿಲ್ಲೆಯ ಜನ ನಿಮಗೆ ಏನು ಮಾಡಿದ್ದರು. ಈ ಜಿಲ್ಲೆಗೆ ನಿಮ್ಮ ಶಾಶ್ವತ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ರು.

ಸ್ವಾಭಿಮಾನ, ಗೌರವದ ವಿಚಾರದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಮಾದರಿ. ಜನತಾ ಪಕ್ಷವನ್ನ ನಿನ್ನೆಯೇ ಅಂತಿಮಗೊಳಿಸಿದ್ದೀರಿ. ನಿನ್ನೆ ಕೇಸರಿ ಶಾಲು ಹಾಕೊಂಡು ಪಕ್ಷದ ಅಂತಿಮ ಯಾತ್ರೆಗೆ ತಿಲಾಂಜಲಿ ಹಾಡಿದ್ದೀರಿ. ಇಷ್ಟು ದಿನ ಹಸಿರು ಶಾಲು ಹಾಕೊಂಡು ಹೋರಾಟ ಮಾಡುತ್ತಿದ್ರಿ. ನೀವು ಪಕ್ಷ ಸೇರ್ಪಡೆ ಆಗಿದ್ದರೆ ಜನತಾ ಪರಿವಾರದವರಿಗೆ ನೋವಾಗುತ್ತಿರಲಿಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ತಮ್ಮ ರಾಜಕೀಯಕ್ಕಾಗಿ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಹಾಡಿದ್ದೀರಿ. ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗೆ ಇಳಿಸಬೇಕಾ? ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಸರ್ಕಾರ, ಜಿಲ್ಲಾಡಳಿತ ಕಾನೂನು ಬದ್ಧವಾಗಿ ಏನು ಮಾಡಬೇಕೋ ಮಾಡಿದೆ. ನಿಮ್ಮ ಹೋರಾಟ ನೋಡಿದ್ರೆ ರಾಷ್ಟ್ರ ಧ್ವಜ ಇಳಿಸಬೇಕು ಅಂತಿದೆ ಎಂದರು.

ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ: ರಾಷ್ಟ್ರ ಧ್ವಜ ಹಾಕಿದ್ದು ತಪ್ಪು ಅನ್ನೋ ನಿರ್ಧಾರಕ್ಕೆ ಬಂದಿದ್ದೀರಾ? ಮೊದಲ ಬಾರಿಗೆ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ರಾಷ್ಟ್ರ ಧ್ವಜದ ವಿರುದ್ಧ ಹೋರಾಟ ಮಾಡ್ತೀರಾ? ಎರಡು ಬಾರಿ ಸಿಎಂ ಆಗಲು ಮಂಡ್ಯ ಜಿಲ್ಲೆ ಕಾರಣ. ನಿಮ್ಮ ಆತ್ಮ ಸಾಕ್ಷಿ ಮುಟ್ಟಿಕೊಂಡು ಹೇಳಿ. ಈ ಪಕ್ಷ ಸುಟ್ಟೋಗುತ್ತೆ ಅಂತಾರೆ. ಬಿಜೆಪಿ, ಜೆಡಿಎಸ್ ಏನಾಗುತ್ತೆ ನೋಡಿ. ಈ ಜಿಲ್ಲೆಯ ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಹೆಚ್ಡಿಕೆ ವಿರುದ್ಧ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಒಮ್ಮೆ ನಿಮ್ಮನ್ನ ಸಂಪೂರ್ಣ ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಸೋಲಿಸಿ, ನಮ್ಮನ್ನ ಗೆಲ್ಲಿಸಿದ್ದಾರೆ. ಇಂತಹ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬದಲಿಸಲು ಆಗಲ್ಲ. ಈ ವಿಚಾರ ನಿಮಗೆ ಶೋಭೆ ತರಲ್ಲ. ನೀವೊಬ್ಬ ಮಾಜಿ ಪ್ರಧಾನಿ ಮಗ. ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿದ್ರು. ಚಲುವರಾಯಸ್ವಾಮಿ ಯಾರ ಹಣೆಬರಹ ಯಾರೂ ಬದಲಿಸಲು ಸಾಧ್ಯವಿಲ್ಲ. ನಿನ್ನ ಕೆಲಸ ನೀನು ಮಾಡು ಅಂತ ಸಲಹೆ ನೀಡಿದ್ರು ಎಂದರು.

ಧರ್ಮದ ಹೆಸರಲ್ಲಿ ನಂಬಿಸುವ ಭ್ರಮೆಯಿಂದ ಹೊರ ಬನ್ನಿ: ಕೆರೆಗೋಡು ಗ್ರಾಮದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆ ಗ್ರಾಮದವರ ಯಾರ ಪಾತ್ರವೂ ಇದರಲ್ಲಿ ಇಲ್ಲ.ಹೆಚ್ಡಿಕೆ, ಅಶೋಕ್, ಸಿ. ಟಿ ರವಿ ಅಂತಹವರು ಇದನ್ನ ಮಾಡಿಸಿರಬಹುದು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದರೆ ಏನು ಮಾಡ್ತಿದ್ದರು ಹೇಳ್ಬೇಕು. ರಾಷ್ಟ್ರಧ್ವಜ ಹಾರಿಸಿದ್ದು ಅಪರಾಧನಾ? ರಾಷ್ಟ್ರಕ್ಕೆ ಸಲ್ಲಿಸಿದ ಗೌರವ ಅಲ್ವ? ಜನರ ನೆಮ್ಮದಿ ಕೆಡಿಸುವ ವಾತಾವರಣ ನಿರ್ಮಾಣ ಮಾಡಿರೋದನ್ನ ಜಿಲ್ಲೆಯ ಜನ ಸಹಿಸಲ್ಲ. ಮತ್ತೆ ಈ ಜಿಲ್ಲೆಯ ಜನರನ್ನ ಸುಳ್ಳು ಹೇಳಿ, ಧರ್ಮದ ಹೆಸರಲ್ಲಿ ನಂಬಿಸುವ ಭ್ರಮೆಯಿಂದ ಹೊರ ಬನ್ನಿ ಎಂದಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.