ETV Bharat / state

ಅಂಗಡಿ ಮಾಲೀಕರೇ ಹುಷಾರ್! ಬೆಂಗಳೂರಲ್ಲಿ ಯುಪಿಐ ನಕಲಿ ಪೇಮೆಂಟ್ ತೋರಿಸಿ ವಂಚಿಸಿದ್ದ ಜೋಡಿ ಅರೆಸ್ಟ್

author img

By ETV Bharat Karnataka Team

Published : Mar 17, 2024, 11:38 AM IST

Updated : Mar 17, 2024, 12:09 PM IST

ಯುಪಿಐ ಪೇಮೆಂಟ್ ಆ್ಯಪ್ ಬಳಸಿ ಹಣ ಪಾವತಿಸಿರುವಂತೆ ತೋರಿಸಿ ಮೋಸ ಮಾಡಲಾಗುತ್ತಿದ್ದು, ಅಂಗಡಿ ಮಾಲೀಕರು ಎಚ್ಚರಿಕೆಯಿಂದಿರಬೇಕಿದೆ.

Etv Bharat
Etv Bharat

ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್

ಬೆಂಗಳೂರು: ಚಿನ್ನದಂಗಡಿಗಳ ಮಾಲೀಕರೇ ಎಚ್ಚರ! ಲಕ್ಷ ಲಕ್ಷ ರೂ ಮೌಲ್ಯದ ಚಿನ್ನಾಭರಣ ಖರೀದಿಸಿ ಯುಪಿಐ ಪಾವತಿಯ ಸೋಗಿನಲ್ಲಿ ವಂಚಿಸುತ್ತಿದ್ದ ಜೋಡಿಯೊಂದನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಂದನ್ ಹಾಗೂ ಕಲ್ಪಿತಾ ಬಂಧಿತರು.

ಹದಿನೈದು ದಿನಗಳ ಹಿಂದೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯ ಪರಮೇಶ್ ಜ್ಯುವೆಲ್ಲರಿ ಅಂಗಡಿಗೆ ಹೋಗಿದ್ದ ಆರೋಪಿಗಳು, 1.65 ಲಕ್ಷ ರೂ ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಹಣ ಪಾವತಿಸುವಾಗ ಯುಪಿಐ ಪೇಮೆಂಟ್ ಆ್ಯಪ್​ ಬಳಸಿಕೊಂಡು ನಕಲಿ ಹಣ ಪಾವತಿಸಿರುವಂತೆ ತೋರಿಸಿದ್ದರು. ಅಂಗಡಿ ಮಾಲೀಕರು ನಂತರ ಪರಿಶೀಲನೆ ನಡೆಸಿದಾಗ ಹಣ ಖಾತೆಗೆ ಜಮೆ ಆಗದಿರುವುದು ಪತ್ತೆಯಾಗಿತ್ತು. ತಕ್ಷಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೋಡಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ತಾವು ವಂಚಿಸಿದ ಚಿನ್ನವನ್ನು ಬೇರೊಂದು ಕಡೆ 1.30 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಇದೇ ಮಾದರಿಯಲ್ಲಿ ಹಲವು ಅಂಗಡಿಗಳಲ್ಲಿ ನಕಲಿ ಪಾವತಿ ತೋರಿಸಿ ವಂಚಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಕಾರಲ್ಲಿ ₹13 ಲಕ್ಷ ಪತ್ತೆ

ಗಮನ ಬೇರೆಡೆ ಸೆಳೆದು ಚಿನ್ನ ಕಳ್ಳತನ, ಇಬ್ಬರು ಸೆರೆ: ಇನ್ನೊಂದು ಪ್ರಕರಣದಲ್ಲಿ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಹಾಗೂ ಅಸ್ಗರ್ ಬಂಧಿತರು. ಇವರಿಂದ 2.70 ಲಕ್ಷ ರೂ ಬೆಲೆಬಾಳುವ 45 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 4ರಂದು ಸಂಜೆ 4:30ರ ಸುಮಾರಿಗೆ ಗಿರಿನಗರ ಠಾಣಾ ವ್ಯಾಪ್ತಿಯ ಹೊಸಕೆರೆಹಳ್ಳಿಯ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರ್ಸ್​ಗೆ ಬಂದಿದ್ದ ಆರೋಪಿಗಳು ಚಿನ್ನ ಖರೀದಿಸುವ ನೆಪದಲ್ಲಿ ಬೇರೆ ಬೇರೆ ಡಿಸೈನ್ ಉಂಗುರಗಳನ್ನು ತೋರಿಸಲು ಹೇಳಿದ್ದರು. ಈ ವೇಳೆ ಅಂಗಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 60 ಗ್ರಾಂ ಉಂಗುರಗಳಿದ್ದ ಬಾಕ್ಸ್ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪರಿಶೀಲನೆಯ ವೇಳೆ ಕಳ್ಳತನವಾಗಿರುವುದನ್ನು ಅರಿತ ಅಂಗಡಿ ಮಾಲೀಕ ಗಿರಿನಗರ ಠಾಣೆಗೆ ದೂರು ನೀಡಿದ್ದರು.

ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳ್ಳತನ ಮಾಡಿ ತಮಿಳುನಾಡಿನಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಕಾರಿನ ಮೇಲೆಯೇ ಆರೋಪಿಗಳು ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಾದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದುಂಗುರ ಕದ್ದಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳ ಬಂಧನ

Last Updated :Mar 17, 2024, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.