ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ ಅನ್ನು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಮಂಡಿಸಿದರು. ಒಟ್ಟು 436 ಕೋಟಿ 53.63 ಲಕ್ಷ ರೂ. ಬಜೆಟ್ಗೆ ಮೇಯರ್ ಸವಿತಾ ಕಾಂಬಳೆ ಅನುಮೋದನೆ ನೀಡಿದರು. 7.72 ಲಕ್ಷ ರೂ. ಉಳಿತಾಯದ ಆಯವ್ಯಯ ಮಂಡನೆಯಾಗಿದೆ. ಪ್ರಸಕ್ತ ವರ್ಷದಲ್ಲಿ 436 ಕೋಟಿ 61.35 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಬಜೆಟ್ ಮುಖ್ಯಾಂಶಗಳು:
- ಹೊಸ ರಸ್ತೆ ನಿರ್ಮಾಣಕ್ಕೆ 5 ಕೋಟಿ ರೂ, ಸಿಸಿ ರಸ್ತೆ ನಿರ್ಮಾಣಕ್ಕೆ 3 ಕೋಟಿ, ಪಾಲಿಕೆ ಖುಲ್ಲಾ ಜಾಗ ಸಂರಕ್ಷಿಸಲು 80 ಲಕ್ಷ, ಚರಂಡಿ ನಿರ್ಮಾಣಕ್ಕೆ 50 ಲಕ್ಷ, ನಗರದ ವರ್ತುಲಗಳ ಸೌಂದರ್ಯೀಕರಣಕ್ಕೆ 75 ಲಕ್ಷ. ಹೀಗೆ ಮೂಲಭೂತ ಸೌಕರ್ಯಕ್ಕಾಗಿ 100 ಕೋಟಿ 5 ಲಕ್ಷ ರೂ. ಮೀಸಲಿಡಲಾಗಿದೆ. ನಗರದ 58 ವಾರ್ಡ್ಗಳಲ್ಲಿ ವಿವಿಧ ಅವಶ್ಯಕ ಮೂಲಭೂತ ಸೌಕರ್ಯಕ್ಕಾಗಿ 100 ಕೋಟಿ ಸೇರಿದಂತೆ ಎರಡೂ ಸೇರಿಸಿ ಒಟ್ಟು 200 ಕೋಟಿ 5 ಲಕ್ಷ ರೂ. ಮೀಸಲಿಡಲಾಗಿದೆ.
- ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ. ವೇತನ ಅನುದಾನವನ್ನು ಅಧಿಕಾರಿ/ಸಿಬ್ಬಂದಿ ವೇತನಕ್ಕೆ ಬಳಕೆ.
- ಬೆಳಗಾವಿ ನಗರ ಸ್ವಚ್ಛವಾಗಿಡಲು ಹೊರಗುತ್ತಿಗೆ ಸ್ವಚ್ಛತಾ ವೆಚ್ಚಕ್ಕಾಗಿ 28 ಕೋಟಿ ರೂ. ಮೀಸಲು.
- ನೇರ ನೇಮಕಾತಿ ಹೊಂದಿದ ಪೌರ ಕಾರ್ಮಿಕರ ವೇತನಕ್ಕಾಗಿ 18 ಕೋಟಿ ರೂ. ಕಾಯ್ದಿರಿಸಲಾಗಿದೆ.
- ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ 4 ಕೋಟಿ ಮೀಸಲು.
- ಬೀದಿ ದೀಪಗಳ ನಿರ್ವಹಣೆಗೆ 2.5 ಕೋಟಿ ಮೀಸಲು.
- ರಸ್ತೆ, ಚರಂಡಿ, ಪಾದಾಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 10.5 ಕೋಟಿ ನಿಗದಿ.
- ಬೀದಿ ನಾಯಿಗಳ ನಿರ್ವಹಣೆಗೆ 1.10 ಕೋಟಿ ಮೀಸಲು.
- ಪಾಲಿಕೆ ಆದಾಯದಲ್ಲಿ ಎಲ್ಲ ಜಮೆ ಮತ್ತು ಖರ್ಚುಗಳನ್ನು ಹೊರತು ಪಡಿಸಿ ಲಭ್ಯವಾಗುವ ಶೇ. 1ರಷ್ಟು ಮೊತ್ತವನ್ನು ಅಂದಾಜು ಆಯವ್ಯಯದಲ್ಲಿ 14.98 ಲಕ್ಷ ಮೀಸಲು.
- ಪತ್ರಕರ್ತರ ಕ್ಷೇಮನಿಧಿ ಸಲುವಾಗಿ 35 ಲಕ್ಷ ಮೀಸಲು.
- ಸ್ಮಶಾನಗಳಲ್ಲಿ ದಹನಕ್ರಿಯೆ ಹಾಗೂ ಅಭಿವೃದ್ಧಿಗೆ 80 ಲಕ್ಷ ನಿಗದಿ.
- ಒಳಚರಂಡಿ ದುರಸ್ತಿ ಮತ್ತು ಹೊಸ ಚರಂಡಿ ನಿರ್ಮಾಣ ಹಾಗೂ ಸಮುದಾಯ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕಾಗಿ 6.50 ಕೋಟಿ ಮೀಸಲು.
- ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ಧಿಗೆ 1 ಕೋಟಿ ನಿಗದಿ.
- ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಪಾಲಿಕೆ ನಿಧಿಯಡಿ 1 ಕೋಟಿ 8.63 ಲಕ್ಷ ವೆಚ್ಛ ನಿಗದಿ.
- ವಿಕಲಚೇತನರ ಅಭಿವೃದ್ಧಿಯಡಿಯಲ್ಲಿ ವ್ಹೀಲ್ ಚೇರ್ ಪೂರೈಸಲು 74.92 ಲಕ್ಷ ಮೀಸಲೀರಿಸಲಾಗಿದೆ.
ನಗರಸೇವಕರ ಪ್ರವಾಸಕ್ಕೆ ಲಕ್ಷ ಲಕ್ಷ ರೂ ಮೀಸಲು: ಚುನಾಯಿತ ಪ್ರತಿನಿಧಿಗಳ ಅಧ್ಯಯನ ಪ್ರವಾಸಕ್ಕಾಗಿ 30 ಲಕ್ಷ ಮೀಸಲಿಟ್ಟಿರುವ ಮಹಾನಗರ ಪಾಲಿಕೆ ಬೆಳಗಾವಿ ನಗರದಲ್ಲಿ ಕುಡಿಯುವ ನೀರು ಸರಬರಾಜು, ತೆರೆದ ಬಾವಿಗಳ ಅಭಿವೃದ್ಧಿಗೆ ಕೇವಲ 25 ಲಕ್ಷ ರೂ ನಿಗದಿಪಡಿಸಲಾಗಿದೆ.
ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ್ ಪ್ರತಿಕ್ರಿಯಿಸಿ, "ನಗರದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್ ಮಂಡಿಸಲಾಗಿದೆ. ನಗರದಲ್ಲಿ ಮೂಲಭೂತ ಸೌಕರ್ಯ, ಸ್ವಚ್ಛತೆ, ಬೆಳಗಾವಿ ಪರಂಪರೆ ಸಂರಕ್ಷಿಸುವುದು, ತಳ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದೂ ಸೇರಿ ಇನ್ನಿತರ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಬಜೆಟ್ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೇಗನೆ ಬಜೆಟ್ ಮಂಡಿಸಲಾಗಿದೆ" ಎಂದರು.
ವಿಧಾನಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ, ಉಪಮೇಯರ್ ಆನಂದ ಚವ್ಹಾಣ ಸೇರಿ ನಗರಸೇವಕರು, ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಕೊಟ್ಟಿದ್ದು ಶೇ 0.8 ರಷ್ಟು ಮಾತ್ರ: ಸಿಎಂ ಸಿದ್ದರಾಮಯ್ಯ