ETV Bharat / state

ಮಾರ್ಚ್ 7ರೊಳಗೆ ನೀರಿನ ಟ್ಯಾಂಕರ್ ನೋಂದಣಿ ಕಡ್ಡಾಯ: ಬಿಬಿಎಂಪಿ ಆಯುಕ್ತ

author img

By ETV Bharat Karnataka Team

Published : Feb 28, 2024, 10:48 PM IST

Updated : Feb 28, 2024, 11:01 PM IST

ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಸಭೆ ನಡೆಸಿದರು.

Held a meeting
ಜಲಮಂಡಳಿಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಸಭೆ ನಡೆಸಿದರು.

ಜಲಮಂಡಳಿಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಸಭೆ ನಡೆಸಿದರು.

ಬೆಂಗಳೂರು: ನಗರದಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕರ್​ಗಳಿಂದ ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದ್ದು, ಮಾರ್ಚ್ 1ರಿಂದ 7ರ ವರೆಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ನಗರದ ಕಾವೇರಿ ಭವನದಲ್ಲಿಂದು ಆಯೋಜಿಸಿದ್ದ ಬಿಬಿಎಂಪಿ ಹಾಗೂ ಜಲಮಂಡಳಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ನೀರಿನ ಟ್ಯಾಂಕರ್ ದರವನ್ನು ಅಂತಿಮವಾಗಿ ನಿಗದಿಪಡಿಸಲಾಗುತ್ತದೆ ಎಂದರು.

ಟ್ಯಾಂಕರ್ ವಾಹನ ನೋಂದಣಿ: ನಗರದಲ್ಲಿ ಒಟ್ಟಾರೆ ಸಾರಿಗೆ ಇಲಾಖೆಯ 3,500 ನೀರಿನ ಟ್ಯಾಂಕರ್ ಮಾಲೀಕರಿದ್ದು, ಬಿಬಿಎಂಪಿಯಲ್ಲಿ ಕೇವಲ 54 ನೀರಿನ ಟ್ಯಾಂಕರ್ ವ್ಯಾಪಾರ ಪರವಾನಗಿ ಪಡೆದಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ಕಸಿಯುವರನ್ನು ನಿಯಂತ್ರಿಸುವ ಸಲುವಾಗಿ ಮಾ.1 ರಿಂದ 7ನೇ ದಿನಾಂಕದ ಒಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಆ ನಂತರ ಪಾಲಿಕೆ ಅದಕ್ಕೆ ಷರತ್ತು ವಿಧಿಸಲಿದೆ. ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ವಾಹನ ನೋಂದಣಿ ಮಾಡಲು ಅವಕಾಶವಿದೆ. ಮಾ.7ರೊಳಗೆ ನೀರಿನ ಟ್ಯಾಂಕರ್ ವಾಹನ ನೋಂದಣಿ ಮಾಡದಿದ್ದರೆ ನೀರು ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಾಕೀತು ಮಾಡಿದರು.

ಇಬ್ಬರು ಎಇಗಳ ನೇಮಕ: ಪರವಾನಗಿ ಪಡೆದು ನೀರು ಸರಬರಾಜು ಮಾಡಬೇಕಿದೆ ನೋಂದಣಿ ಮಾಡಿಕೊಳ್ಳದವರ ಟ್ಯಾಂಕರ್​ ಅನ್ನು ವಶಕ್ಕೆ ಪಡೆಯುತ್ತೇವೆ. ಪಾಲಿಕೆ ನೀರಿನ ಟ್ಯಾಂಕರ್ ನೋಂದಣಿಗಾಗಿ ತಂತ್ರಾಂಶವನ್ನು ರಚಿಸುವ ಕಾರ್ಯ ಮಾಡಿದೆ. ಪಾಲಿಕೆ ರೂಪಿಸುವ ತಂತ್ರಾಂಶದಲ್ಲಿ ನೋಂದಣಿ ಮಾಡದ ನೀರಿನ ಟ್ಯಾಂಕರ್ ತೊಂದರೆಯಾಗಲಿದೆ. ನೀರಿನ ಸಮಸ್ಯೆಯಿರುವ 110 ಹಳ್ಳಿಗಳು ಬರುವ 30 ವಾರ್ಡ್ ವಾರ್ಡ್ ಗಳಲ್ಲಿ ಬೆಂಗಳೂರು ಜಲಮಂಡಳಿ ತಲಾ ಒಬ್ಬ ಎಇ ಹಾಗೂ ಪಾಲಿಕೆಯ ತಲಾ ಒಬ್ಬ ಎಇ ವಾರ್ಡ್ ಎಂಜಿನಿಯರ್‌ಗಳನ್ನು ನಿಯೋಜಿಸಲಿದ್ದೇವೆ ಎಂದು ತಿಳಿಸಿದರು.

ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದರ ವಿಧಿಸಿದರೆ ಕ್ರಮ: ಜಲಮಂಡಳಿ, ನಗರ ಜಿಲ್ಲಾಧಿಕಾರಿಗಳ ಮೂಲಕ 200 ನೀರಿನ ಟ್ಯಾಂಕರ್ ಪಡೆದುಕೊಳ್ಳುತ್ತಿದ್ದೇವೆ. 100 ನೀರಿನ ಟ್ಯಾಂಕರ್ 110 ಹಳ್ಳಿಗಳಿಗೆ ಹಾಗೂ ಉಳಿದ 100 ನೀರಿನ ಟ್ಯಾಂಕರ್ ಪಾಲಿಕೆಯ ಉಳಿದ ವಾರ್ಡ್ ಗಳಿಗೆ ನೀರು ಪೂರೈಸಲಿವೆ. ಜಲಮಂಡಳಿ ಹಾಗೂ ಬಿಬಿಎಂಪಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆದ ಟ್ಯಾಂಕರ್​ಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಥವಾ ಇನ್ನಷ್ಟು ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.

108 ದೊಡ್ಡ ಪ್ಲಾಸ್ಟಿಕ್ ನೀರಿನ ಟ್ಯಾಂಕರ್: ಬೆಂಗಳೂರಿನ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ನೀರಿನ ಸಮಸ್ಯೆ ಇರುವ ನಗರ ಪ್ರದೇಶಗಳಲ್ಲಿ 108 ದೊಡ್ಡ ಪ್ಲಾಸ್ಟಿಕ್ ನೀರಿನ ಟ್ಯಾಂಕರ್ ಇಟ್ಟು ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಮಾತನಾಡಿ, ನಗರದಲ್ಲಿನ ನೀರಿನ ಸಮಸ್ಯೆ ತಲೆದೋರಿರುವ ಕಡೆ ಜಲಮಂಡಳಿ 136 ನೀರಿನ ಟ್ಯಾಂಕರ್ ವಾಹನದ ಮೂಲಕ ಉಚಿತವಾಗಿ ಕಾವೇರಿ ನೀರು ಸರಬರಾಜು ಮಾಡುತ್ತಿದೆ. ನಗರದ ಅಂತರ್ಜಲ ಮಟ್ಟ ಹೆಚ್ಚಿಸಲು 186 ಕೆರೆಯಲ್ಲಿ ಹಲವು ಕರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಅವುಗಳನ್ನು ಕೆರೆ ತುಂಬಿಸುವ ಕೆಲಸದ ಪೈಕಿ 7 ಕಡೆ ಪೈಲೆಟ್ ಯೋಜನೆ ಕೈಗೊಂಡಿದ್ದೇವೆ.

ನಗರದ ಉಳಿದ 179 ಕೆರೆಗಳಿಗೂ ಈ ಯೋಜನೆ ವಿಸ್ತರಿಸಲಾಗುತ್ತದೆ. 1472 ದಶಲಕ್ಷ ಲೀ. ನೀರು ಸದ್ಯ ಪಂಪ್ ಮಾಡಲಾಗುತ್ತಿದ್ದು, ಇತ್ತೀಚೆಗೆ ನಡೆಸಿದ ಪ್ರಮುಖ ಕಾಮಗಾರಿಯಿಂದಾಗಿ ಸೋರಿಕೆ ತಡೆದು 8 ದಶಲಕ್ಷ ಲೀಟರ್ ನೀರು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಕಾವೇರಿ 5ನೇ ಹಂತ ಕಾಮಗಾರಿ ಏಪ್ರಿಲ್ ಅಂತ್ಯಕ್ಕೆ ಮುಗಿಯಲಿದೆ. ಮೇ ತಿಂಗಳ ಆರಂಭದಿಂದ 41,000 ನೀರಿನ ಸಂಪರ್ಕ ಪಡೆದುಕೊಂಡ 110 ಹಳ್ಳಿಗಳ ಗ್ರಾಹಕರಿಗೆ ಹಾಗೂ ಇನ್ನಿತರರಿಗೆ ಕಾವೇರಿ ನೀರು ಪೂರೈಕೆ ಮಾಡುತ್ತೇವೆ. ಪ್ರಸ್ತುತ ನಗರದಲ್ಲಿ 33 ಎಸ್‌ಟಿಪಿಗಳಿದ್ದು, ಇದರಿಂದ 1,380 ದಶಲಕ್ಷ ಲೀಟರ್ ನೀರು ಸಂಸ್ಕರಿಸಲಾಗುತ್ತಿದೆ. 33 ಎಸ್‌ಟಿಪಿಗಳ ಪೈಕಿ 20 ಸ್ಥಾವರ​ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಅನುಕೂಲವಾಗುತ್ತದೆ. ಈ ಕಾಮಗಾರಿಗಳೆಲ್ಲ ಮುಗಿದರೆ ಎರಡು ವರ್ಷದಲ್ಲಿ ನಗರದಲ್ಲಿ 2,100 ದಶ ಲಕ್ಷ ಲೀಟರ್​​ ಅಷ್ಟು ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತರು ಹಾಗೂ ರಾಜರಾಜೇಶ್ವರಿ ನಗರ ವಲಯದ ಆಯುಕ್ತ ಸುರೋಳರ್ ವಿಕಾಸ್ ಕಿಶೋರ್, ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶೋಭಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂಓದಿ: ಶೇ.60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಲು 3,385 ವ್ಯಾಪಾರಿಗಳ ನಿರ್ಲಕ್ಷ್ಯ

Last Updated :Feb 28, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.