ETV Bharat / state

ಒಂದು ತಿಂಗಳಲ್ಲಿ ಅರ್ಜಿ ವಿಲೇವಾರಿ ಮಾಡಬೇಕು: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

author img

By ETV Bharat Karnataka Team

Published : Feb 8, 2024, 5:52 PM IST

Updated : Feb 8, 2024, 10:14 PM IST

ಜನತಾ ದರ್ಶನ ಯಶಸ್ವಿಯಾಗಿ ನಡೆದಿದೆ. ಆಯಾ ಇಲಾಖೆಯವರು ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಇಂದು ಸಲ್ಲಿಕೆಯಾದ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು‌ ಮಾಡಿದರು. ವಿಧಾನಸೌಧದ ಆವರಣದಲ್ಲಿ ಇಂದು ಜನತಾ ಸ್ಪಂದನಾ ಕಾರ್ಯಕ್ರಮ ನಡೆಸಿ, ಬಳಿಕ ಮಾತನಾಡಿದ ಅವರು, "ಜನತಾ ದರ್ಶನ ಯಶಸ್ವಿಯಾಗಿದೆ. ಆಯಾ ಇಲಾಖೆಯವರು ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಲಿದ್ದಾರೆ. 20,000 ಜನ‌ ಭಾಗವಹಿಸಿದ್ದರು. ಒಟ್ಟು 11,000 ಅರ್ಜಿಗಳು ಸಲ್ಲಿಕೆಯಾಗಿವೆ" ಎಂದು ತಿಳಿಸಿದರು.

"ಕಂದಾಯ ಇಲಾಖೆಗೆ ಹೆಚ್ಚಿನ ಅಹವಾಲು ಬಂದಿತ್ತು. ಕೆಲವನ್ನು ಸ್ಥಳದಲ್ಲೇ ಇತ್ಯರ್ಥ ಮಾಡಿದ್ದೇವೆ. ಎಲ್ಲ ಜಿಲ್ಲೆಗಳ ಡಿಸಿಗಳಿಗೆ, ಸಂಬಂಧಿತ ಕಾರ್ಯದರ್ಶಿಗಳಿಗೆ ಅರ್ಜಿ ಕಳುಹಿಸಿದ್ದೇವೆ. ಡಿಸಿಗಳು, ಎಸ್‌ಪಿಗಳು ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು" ಎಂದು ಸೂಚಿಸಿದರು.

ಆಡಳಿತ ಜಡತ್ವದಿಂದ ಕೂಡಿರಬಾರದು: "ಕಾನೂನಿಗೆ ವಿರುದ್ಧವಾದ ಅರ್ಜಿಗಳು ಬಂದರೆ ಅವುಗಳಿಗೆ ಕಾರಣ ಹೇಳಿ ಹಿಂಬರಹ ಕೊಟ್ಟು ವಾಪಸ್​ ಕಳುಹಿಸಬೇಕು. ಅಧಿಕಾರಿಗಳು ಕೆಳ ಹಂತದಲ್ಲಿ ಸಮಸ್ಯೆ ಬಗೆಹರಿಸಿದರೆ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಿದ್ದರೆ ಬೆಂಗಳೂರಿಗೆ ಇಷ್ಟು ಜನ ಬರುತ್ತಿರಲಿಲ್ಲ. ಡಿಸಿಗಳು, ಸಿಇಒ, ಎಸ್​ಪಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇದರಿಂದ ನಮ್ಮತ್ತ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಆಡಳಿತ ಯಾವತ್ತೂ ಜಡತ್ವದಿಂದ ಕೂಡಿರಬಾರದು" ಎಂದು ಹೇಳಿದರು.

"ಜನರು ನಿಮ್ಮ ಬಳಿ ಬಂದಾಗ ನಿಮ್ಮ ಹಂತದಲ್ಲೇ ಕೆಲಸ ಮಾಡಿ ಕೊಡಲೇಬೇಕು. ನಿರ್ಲಕ್ಷ್ಯ ತೋರಿದರೆ, ಜನರಿಗೆ ಅಗೌರವ ತೋರಿದರೆ ಅಂಥ ಅಧಿಕಾರಿಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ವಹಿಸಲಾಗುವುದು. ಇಂದು ಅರ್ಜಿ ಕೊಟ್ಟ ಜನರು ಯಾವುದೇ ಸಂಶಯ, ಚಿಂತೆಪಡುವ ಅಗತ್ಯ ಇಲ್ಲ. ನೀವು ಕೊಟ್ಟ ಎಲ್ಲಾ ಅರ್ಜಿಗಳಿಗೆ ಪರಿಹಾರ ನೀಡಲಾಗುತ್ತದೆ" ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಸಿಎಂ ಜನಸ್ಪಂದನ ಕುಸಿದಿರುವ ಆಡಳಿತ ಯಂತ್ರದ ಪ್ರತಿಫಲನ: ಆರ್.ಅಶೋಕ್

Last Updated : Feb 8, 2024, 10:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.