ETV Bharat / sports

'ಬ್ಯಾಟಿಂಗ್​, ಫೀಲ್ಡಿಂಗ್​ ಎರಡರಲ್ಲೂ ಅದ್ಭುತ': ನಿತೀಶ್​​​ ರೆಡ್ಡಿ ಆಟಕ್ಕೆ ಪ್ಯಾಟ್ ಕಮಿನ್ಸ್ ಶ್ಲಾಘನೆ - Nitish Reddy

author img

By PTI

Published : Apr 10, 2024, 9:10 AM IST

pat-cummins-praise-nitish-reddy
ನಿತೀಶ್​​​ ರೆಡ್ಡಿ ಆಟಕ್ಕೆ ಪ್ಯಾಟ್ ಕಮಿನ್ಸ್ ಶ್ಲಾಘನೆ

ಐಪಿಎಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು 2 ರನ್​​ ಅಂತರದ ರೋಚಕ ಜಯ ದಾಖಲಿಸಿದೆ.

ಚಂಡೀಗಢ (ಪಂಜಾಬ್) : ಮಂಗಳವಾರ ಇಲ್ಲಿನ ಮಹಾರಾಜ ಯದ್ವಿಂದರ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವ ಆಟಗಾರ ನಿತೀಶ್ ರೆಡ್ಡಿ ಆಲ್‌ರೌಂಡ್ ಪ್ರದರ್ಶನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

20 ವರ್ಷದ ನಿತೀಶ್ ರೆಡ್ಡಿ 37 ಎಸೆತಗಳಲ್ಲಿ 64 ರನ್ ಗಳಿಸಿ ಎಸ್​ಆರ್​ಹೆಚ್​ ತಂಡವು ಉತ್ತಮ ಮೊತ್ತ ಕಲೆ ಹಾಕುವಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದರು. ಅಲ್ಲದೇ, ಮೂರು ಓವರ್‌ ಬೌಲಿಂಗ್​ನಲ್ಲಿ ಒಂದು ವಿಕೆಟ್‌ ಕೂಡ ಪಡೆದಿದ್ದರು. ಹೈದರಾಬಾದ್​ ತಂಡ 9 ವಿಕೆಟ್‌ಗೆ 182 ರನ್ ಗಳಿಸಿತ್ತು. ಬಳಿಕ 6 ವಿಕೆಟ್​ ಕಳೆದುಕೊಂಡು 180 ರನ್​ ಗಳಿಸಿದ ಪಂಜಾಬ್​ ಗೆಲುವಿನ ಅಂಚಿನಲ್ಲಿ ಎಡವಿತ್ತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಪ್ಯಾಟ್ ಕಮಿನ್ಸ್ "ನಿತೀಶ್​​ ರೆಡ್ಡಿ ಅಗ್ರ ಕ್ರಮಾಂಕದಲ್ಲಿ ಭರ್ಜರಿ ಆಟ ತೋರಿದರು. ಫೀಲ್ಡಿಂಗ್​ನಲ್ಲಿಯೂ ಉತ್ತಮವಾಗಿದ್ದಲ್ಲದೇ, ಮೂರು ಓವರ್‌ ಬೌಲಿಂಗ್​ ಕೂಡ ಮಾಡಿದರು. ಅವರ ಬ್ಯಾಟಿಂಗ್​ನಿಂದಾಗಿ ನಾವು 180 ರನ್ ಗಳಿಸಲು ಸಾಧ್ಯವಾಯಿತು" ಎಂದು ಪಂದ್ಯಶ್ರೇಷ್ಠರಾದ ಆಲ್‌ರೌಂಡರ್ ರೆಡ್ಡಿ ಆಟವನ್ನು ಅವರು ಕೊಂಡಾಡಿದರು.

ಕ್ರಿಕೆಟ್‌ನ ಶ್ರೇಷ್ಠ ಪಂದ್ಯಗಳಲ್ಲೊಂದು ಎಂದ ಕಮ್ಮಿನ್ಸ್​​, ತಂಡವು ಸಕಾರಾತ್ಮಕ ಆಟ ತೋರಿತು ಎಂದರು. "ಆರಂಭದಲ್ಲಿ ಪಂಜಾಬ್​ನವರು ಚೆನ್ನಾಗಿ ಬೌಲಿಂಗ್​ ಮಾಡಿದರು. ನಾವು 182 ರನ್ ಗಳಿಸಿದ್ದಲ್ಲದೇ, ಬಳಿಕ ಅದನ್ನು ಡಿಫೆಂಡ್​​ ಮಾಡುವಲ್ಲಿ ಯಶಸ್ವಿಯಾದೆವು. ಇಂಫ್ಯಾಕ್ಸ್​ ಪ್ಲೇಯರ್​​ ಅವಕಾಶ ಇರುವುದರಿಂದ ಇನ್ನಷ್ಟು ಆಳವಾಗ ಬ್ಯಾಟಿಂಗ್​ ಕ್ರಮಾಂಕ ಹೊಂದಬಹುದಾಗಿದೆ. ಪಂದ್ಯ ಗೆಲ್ಲಲು ನಾವು ಧನಾತ್ಮಕವಾಗಿರಲು ಪ್ರಯತ್ನಿಸುತ್ತೇವೆ'' ಎಂದು ಕಮ್ಮಿನ್ಸ್​​ ಹೇಳಿದರು.

''ಕೇವಲ 150-160 ಗಳಿಸಿದರೆ ಹತ್ತರಲ್ಲಿ ಒಂಬತ್ತು ಪಂದ್ಯಗಳನ್ನು ಸೋಲಬೇಕಾಗುತ್ತದೆ. ಹೊಸ ಚೆಂಡಿನಲ್ಲಿ ಬೌಲಿಂಗ್​ ಮಾಡುವುದು ಪ್ರಮುಖ ಸಮಯ ಎಂದು ನಮಗೆ ತಿಳಿದಿತ್ತು. ಸ್ಕೋರ್‌ ಬಗ್ಗೆ ಬಹಳ ಸಂತಸವಿದೆ. ಪಂಜಾಬ್​ನವರು ಆರಂಭದಲ್ಲಿ ಬೌಲಿಂಗ್​ ಮಾಡಿದ್ದನ್ನು ನೋಡಿದ್ದೆವು. ಹಾಗಾಗಿ, ನಾನು ಮತ್ತು ಭುವಿ ಬೌಲಿಂಗ್​ ಆರಂಭಿಸಿ, ಒಂದು ಅಥವಾ 2 ವಿಕೆಟ್‌ ಗಳಿಸಬೇಕು ಎಂದು ಯೋಚಿಸಿದ್ದೆ. ಸಾಕಷ್ಟು ಎಡಗೈ ಹಾಗೂ ಬಲಗೈ ಆಟಗಾರರನ್ನು ಹೊಂದಿದ್ದೇವೆ. ಆದ್ದರಿಂದ ಬೌಲರ್‌ಗಳು ಯಶಸ್ಸು ಸಾಧಿಸಲು ಉತ್ತಮ ಅವಕಾಶ ನೀಡಲು ಪ್ರಯತ್ನಿಸುತ್ತಿದ್ದೇವೆ" ಎಂದರು.

ಸಂತಸವಾಗುತ್ತಿದೆ ಎಂದ ನಿತೀಶ್: ''ನಾನು ತಂಡಕ್ಕೋಸ್ಕರ ಆಡಬೇಕಾದರೆ ಮೊದಲು ನನ್ನ ಮೇಲೆಯೇ ನಂಬಿಕೆ ಇಟ್ಟುಕೊಳ್ಳಬೇಕು ಎಂದು ನನ್ನಷ್ಟಕ್ಕೇ ಅಂದುಕೊಂಡಿದ್ದೆ. ಎದುರಾಳಿ ವೇಗಿಗಳು ಉತ್ತಮ ಬೌಲಿಂಗ್ ಮಾಡಿದರು. ಹಾಗಾಗಿ, ನಾನು ಸ್ಪಿನ್ನರ್​​ಗಳು ಬಂದಾಗ ಆಕ್ರಮಣಕಾರಿ ಆಟವಾಡಲು ಬಯಸಿದ್ದೆ. ಅದರಲ್ಲಿ ಯಶಸ್ವಿಯೂ ಆದೆ. ಈ ಟೂರ್ನಿಯಲ್ಲಿ ನಿಧಾನಗತಿಯ ಬೌನ್ಸರ್​ಗಳು ಉಪಯುಕ್ತವಾಗುತ್ತಿದೆ. ಹಾಗಾಗಿ, ನಾನು ಅವುಗಳನ್ನು ಬಳಸಲು ಬಯಸಿದೆ. ನಾನು ಬ್ಯಾಟ್‌ ಜೊತೆಗೆ ಬೌಲಿಂಗ್​ನಲ್ಲಿಯೂ ನನ್ನ ತಂಡಕ್ಕಾಗಿ ಈ ಪ್ರದರ್ಶನವನ್ನು ಮುಂದುವರೆಸಲು ಬಯಸುತ್ತೇನೆ. ನಾನು ಹೀಗೆಯೇ ಸಾಗಲು ಬಯಸುತ್ತೇನೆ." ಎಂದು ನಿತೀಶ್​ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್, ಶಶಾಂಕ್ ಸಿಂಗ್ (ಅಜೇಯ 46) ಮತ್ತು ಅಶುತೋಷ್ ಶರ್ಮಾ (ಅಜೇಯ 33) ಆಟವನ್ನು ಶ್ಲಾಘಿಸಿದರು. "ಇವರಿಬ್ಬರೂ ಮೈದಾನಕ್ಕಿಳಿದು ತೋರುವ ಆಟ ನೋಡಲು ಬಹಳಷ್ಟು ಸಂತಸವಾಗುತ್ತಿದೆ. ಪಂದ್ಯವನ್ನು ಗೆಲ್ಲಿಸಬಹುದು ಎಂಬ ಭರವಸೆ ಮೂಡಿತ್ತು. ಗೆಲುವಿನ ಸಮೀಪ ತಂದಿದ್ದಕ್ಕಾಗಿ ಅವರಿಗೆ ಹ್ಯಾಟ್ಸಾಫ್'' ಎಂದರು.

"ನಾವು ಎದುರಾಳಿಗಳನ್ನು ಉತ್ತಮ ಮೊತ್ತಕ್ಕೆ ನಿಯಂತ್ರಿಸಿದ್ದೆವು ಎಂದು ಅನಿಸುತ್ತಿದೆ. ದುರದೃಷ್ಟವಶಾತ್ ನಮಗೆ ಆರಂಭಿಕ 6 ಓವರ್‌ಗಳಲ್ಲಿ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಆಗಲೇ ನಾವು ಪಂದ್ಯವನ್ನು ಕಳೆದುಕೊಂಡೆವು. ಅದು ನಮಗೆ ತೀವ್ರ ಇಕ್ಕಟ್ಟಿಗೆ ಸಿಲುಕಿಸಿತು. ವಿಕೆಟ್ ಹೆಚ್ಚು ಬೌನ್ಸ್ ನೀಡುತ್ತಿರಲಿಲ್ಲ, ಹೀಗಾಗಿ, ಪ್ರತಿಯೊಬ್ಬರೂ ಕೂಡ ಉತ್ತಮ ಪ್ಲಾನ್​ನೊಂದಿಗೆ ಆಡಬೇಕು. ನಮ್ಮ ಶಾಟ್​ ಆಯ್ಕೆ ಮಾಡುವಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ'' ಎಂದು ಕಿವಿಮಾತು​ ಹೇಳಿದರು.

''ಅಂತಿಮ ಎಸೆತದಲ್ಲಿ ಕ್ಯಾಚ್ ಕೈಬಿಟ್ಟೆವು. ಜೊತೆಗೆ ನಾವು 10-15 ರನ್‌ಗಳನ್ನು ನಿಯಂತ್ರಣ ಮಾಡಬಹುದಿತ್ತು, ಅದೇ ರನ್​ಗಳು ಈಗ ವ್ಯತ್ಯಾಸವನ್ನುಂಟು ಮಾಡಿತು. ಬ್ಯಾಟಿಂಗ್ ವಿಭಾಗವು ಉತ್ತಮ ಪ್ರದರ್ಶನ ನೀಡಲಿಲ್ಲ. ಅಗ್ರಕ್ರಮಾಂಕವು ಸುಧಾರಿಸುವುದು ಮುಖ್ಯವಾಗಿದೆ. ನಾವು ಈ ಸೋಲಿನಿಂದ ಪುಟಿದೇಳಲಿದ್ದೇವೆ. ಕೆಲವು ಹಂತದಲ್ಲಿ ಉತ್ತಮ ಕಾರ್ಯನಿರ್ವಹಣೆ ಹಾಗೂ ಸುಧಾರಣೆ ಬೇಕಿದೆ'' ಎಂದು ಧವನ್​ ಸಲಹೆ ನೀಡಿದರು.

ಇದನ್ನೂ ಓದಿ: ಪಂಜಾಬ್​​​ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ಗೆ 2 ರನ್​ಗಳ ರೋಚಕ ಗೆಲುವು - SRH Beat PBKS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.