ETV Bharat / sports

ರಣಜಿ ಟ್ರೋಫಿ: ಮನೀಶ್​ ಅಜೇಯ ಆಟ, ರೈಲ್ವೇಸ್​ ವಿರುದ್ಧ ಕರ್ನಾಟಕಕ್ಕೆ 1 ವಿಕೆಟ್​ ರೋಚಕ ಜಯ

author img

By ETV Bharat Karnataka Team

Published : Feb 4, 2024, 8:17 PM IST

ರಣಜಿ ಟ್ರೋಫಿ ಟೂರ್ನಿಯಲ್ಲಿ ರೈಲ್ವೇಸ್​ ವಿರುದ್ಧ ಕರ್ನಾಟಕ ತಂಡ ಒಂದು ವಿಕೆಟ್​ ಅಂತರದ ಗೆಲುವಿನ ನಗೆ ಬೀರಿದೆ.

Karnataka beats Railways by one wicket in Ranji Trophy group c match
ರಣಜಿ ಟ್ರೋಫಿ: ಮನೀಶ್​ ಅಜೇಯ ಆಟ, ರೈಲ್ವೇಸ್​ ವಿರುದ್ಧ ಕರ್ನಾಟಕಕ್ಕೆ 1 ವಿಕೆಟ್​ ರೋಚಕ ಜಯ

ಸೂರತ್​: ಇಲ್ಲಿನ ಲಾಲಾಭಾಯಿ ಕಾಂಟ್ರಾಕ್ಟರ್​ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಟೂರ್ನಿಯ ಎಲೈಟ್​ ಸಿ ಗುಂಪಿನ ಪಂದ್ಯದಲ್ಲಿ ರೈಲ್ವೇಸ್​ ವಿರುದ್ಧ ಕರ್ನಾಟಕ ಒಂದು ವಿಕೆಟ್​ ಅಂತರದ ರೋಚಕ ಜಯ ದಾಖಲಿಸಿದೆ. ಅನುಭವಿ ಬ್ಯಾಟರ್​ ಮನೀಶ್​ ಪಾಂಡೆ ಅಜೇಯ ಅರ್ಧಶತಕದ (67* ರನ್​) ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

226 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ 2 ರನ್​ ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ ದೆಗಾ ನಿಶ್ಚಲ್​ (1) ವಿಕೆಟ್​ ಕಳೆದುಕೊಂಡಿತು. ಬಳಿಕ ಆರ್​ ಸಮರ್ಥ್​ (35) ಹಾಗೂ ಅನೀಶ್​ ಕೆವಿ (34) ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಇವರಿಬ್ಬರೂ ಎರಡನೇ ವಿಕೆಟ್​ಗೆ 68 ರನ್​ ಜೊತೆಯಾಟವಾಡಿದರು. ಈ ಹಂತದಲ್ಲಿ ಇಬ್ಬರೂ ಬ್ಯಾಟರ್​ಗಳು ತಂಡದ ಸ್ಕೋರ್​ 70 ರನ್​ ಆಗಿದ್ದಾಗ ಒಬ್ಬರ ಹಿಂದೊಬ್ಬರು ಪೆವಿಲಿಯನ್​ ಸೇರಿದರು.

ಕೆಲ ಹೊತ್ತಲ್ಲೇ ನಾಯಕ ನಿಕಿನ್​ ಜೋಶ್​ ಕೂಡ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. 75 ರನ್​ಗೆ ತಂಡವು 5 ವಿಕೆಟ್​ ಕಳೆದುಕೊಂಡಿತ್ತು. ಆಗ ಕ್ರೀಸ್​ನಲ್ಲಿದ್ದ ಮನೀಶ್​ ಪಾಂಡೆ ಸಮಯೋಚಿತ ಬ್ಯಾಟಿಂಗ್​ ಪ್ರದರ್ಶಿಸಿದರು. ಈ ನಡುವೆ ಹಾರ್ದಿಕ್​ ರಾಜ್​ (14) ಹಾಗೂ ಕಿಶನ್​ ಬೆಡಾರೆ (0) ಔಟಾದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತಷ್ಟು ಸಂಕಷ್ಟಕ್ಕೆ (99ಕ್ಕೆ 6 ವಿಕೆಟ್​) ಸಿಲುಕಿತ್ತು.

ಈ ಹಂತದಲ್ಲಿ ಮನೀಶ್​ ಹಾಗೂ ವಿಕೆಟ್​ ಕೀಪರ್​ ಶ್ರೀನಿವಾಸ್​ ಶರತ್​ (23) ನಡುವೆ 34 ರನ್​ ಜೊತೆಯಾಟ ಮೂಡಿಬಂತು. ತಂಡದ ಮೊತ್ತ 133 ರನ್​ ಆಗಿದ್ದಾಗ ಶರತ್​ ಔಟಾದರು. ತದನಂತರ ವಿಜಯ್​ಕುಮಾರ್​​ ವೈಶಾಕ್​ ಜೊತೆಗೆ ಅಮೂಲ್ಯ 64 ರನ್​ ಸೇರಿಸಿದ ಪಾಂಡೆ, ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬಳಿಕ ವೈಶಾಕ್ (38)​ ಹಾಗೂ ವಿಧ್ವತ್​ ಕಾವೇರಪ್ಪ (8) ವಿಕೆಟ್​ ಒಪ್ಪಿಸಿದರೂ ಕೂಡ ಇನ್ನೊಂದೆಡೆ ಗಟ್ಟಿಯಾಗಿ ನಿಂತ ಪಾಂಡೆ ತಂಡಕ್ಕೆ ಜಯ ತಂದಿತ್ತರು. ಕೊನೆಯ ವಿಕೆಟ್​ಗೆ ವಾಸುಕಿ ಕೌಶಿಕ್​ (1) ಜೊತೆ 15 ರನ್​ ಅಜೇಯ ಜೊತೆಯಾಟವಾಡಿ ಗೆಲುವನ್ನು ಸಂಭ್ರಮಿಸಿದರು. 82.4 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 229 ರನ್​ ಬಾರಿಸಿದ ಕರ್ನಾಟಕ ಸಿ ಗುಂಪಿನ 5 ಪಂದ್ಯಗಳಲ್ಲಿ 3ನೇ ಗೆಲುವಿನಿಂದ 21 ಪಾಯಿಂಟ್​ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಇದಕ್ಕೂ ಮುನ್ನ ಮೊದಲ ದಿನ (ಫೆ.2) ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ರೈಲ್ವೇಸ್​ ಮೊದಲ ಇನ್ನಿಂಗ್ಸ್​ನಲ್ಲಿ 155 ರನ್​ಗೆ ಆಲೌಟ್​ ಆಗಿತ್ತು. ನಾಯಕ ಪ್ರಥಮ್​ ಸಿಂಗ್​ ಸರ್ವಾಧಿಕ 56 ರನ್​ ಬಾರಿಸಿದ್ದರು. ಬಳಿಕ ಬ್ಯಾಟಿಂಗ್​ ಮಾಡಿದ ಕರ್ನಾಟಕ ಪ್ರಥಮ್​ ಇನ್ನಿಂಗ್ಸ್​ನಲ್ಲಿ 174 ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು 19 ರನ್​ ಅಲ್ಪ ಮುನ್ನಡೆ ಸಾಧಿಸಿತ್ತು. ತದನಂತರ ಎರಡನೇ ಇನ್ನಿಂಗ್ಸ್​ ಆಡಿದ ರೈಲ್ವೇಸ್​ 244 ರನ್​ಗಳಿಗೆ ಸರ್ವಪತನ ಕಂಡಿತ್ತು. ತಂಡದ ಪರ ಎಂ ಸೈಫ್​ 82 ಹಾಗೂ ಕೀಪರ್​ ಸೂರಜ್​ ಅಹುಜಾ 48 ರನ್​ ಕಾಣಿಕೆ ನೀಡಿದ್ದರು. ಇದರೊಂದಿಗೆ 225 ರನ್​ ಲೀಡ್​ ಪಡೆದ ರೈಲ್ವೇಸ್​ ತಂಡ ಕರ್ನಾಟಕಕ್ಕೆ 226 ರನ್ ಜಯದ​ ಗುರಿ ನೀಡಿತ್ತು.

ಇದನ್ನೂ ಓದಿ: ಮೂರನೇ ದಿನದಾಟ: ಇಂಗ್ಲೆಂಡ್​ಗೆ 399 ರನ್​ ಗುರಿ, ಭಾರತದ ಬೌಲಿಂಗ್​ ಮೇಲೆ 'ಜಯದ ಹೊಣೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.