ETV Bharat / sports

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ - 20 ವಿಶ್ವಕಪ್ ಗೆಲ್ಲಲಿದೆ: ಜಯ್ ಶಾ ವಿಶ್ವಾಸ

author img

By ETV Bharat Karnataka Team

Published : Feb 15, 2024, 7:40 AM IST

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

2024ರ ಟಿ-20 ವಿಶ್ವಕಪ್ ಅನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಎತ್ತಿ ಹಿಡಿಯುವ ವಿಶ್ವಾಸವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವ್ಯಕ್ತಪಡಿಸಿದ್ದಾರೆ.

ರಾಜ್‌ಕೋಟ್ (ಗುಜರಾತ್): ಬಾರ್ಬಡೋಸ್‌ನಲ್ಲಿ ನಡೆಯಲಿರುವ 2024 ರ ಟಿ-20 ವಿಶ್ವಕಪ್ ಅನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಗೆಲ್ಲಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಬುಧವಾರ ಹೇಳಿದ್ದಾರೆ.

ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಯ್​ ಶಾ, "ನಾವು 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತಿರಬಹುದು. ಆದರೆ, ನಾವು ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಹೃದಯ ಗೆದ್ದಿದ್ದೇವೆ. ಟೀಮ್​ ಇಂಡಿಯಾ ಮುಂಬರುವ ಟಿ-20 ವಿಶ್ವಕಪ್ ಅನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಎತ್ತಿ ಹಿಡಿಯುವ ವಿಶ್ವಾಸ ನನಗಿದೆ ಎಂದಿದ್ದಾರೆ.

2024 ರ ಟಿ20 ವಿಶ್ವಕಪ್ : ಜೂನ್ 4 ರಿಂದ 30ರ ವರೆಗೆ 2024 ರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು​ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್ಎ) ನಲ್ಲಿ ನಡೆಯಲಿವೆ. ಲಾಡರ್‌ಹಿಲ್, ಡಲ್ಲಾಸ್ ಮತ್ತು ನ್ಯೂಯಾರ್ಕ್‌ನಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ ಜೂನ್ 9 ರಂದು ಲಾಂಗ್ ಐಲ್ಯಾಂಡ್‌ನಲ್ಲಿ ನಡೆಯಲಿದೆ. ಇನ್ನು ಈ ಲೀಗ್​ ಆರಂಭದಲ್ಲಿ ಐದು ತಂಡಗಳನ್ನು ಒಳಗೊಂಡಿರುವ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಾಕೌಟ್ ಸೆಮಿ -ಫೈನಲ್ ಮತ್ತು ಫೈನಲ್‌ಗಿಂತ ಮುಂಚಿತವಾಗಿ ಪಂದ್ಯಾವಳಿಯ ಸೂಪರ್ ಎಂಟು ಹಂತಕ್ಕೆ ಮುನ್ನಡೆಯುತ್ತವೆ.

ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಭಾರತ ಸೋತ ನಂತರ ಭಾರತವು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಲವು ಪಂದ್ಯಗಳಲ್ಲಿ ಪೂರ್ಣ ಪ್ರಮಾಣದ ನಾಯಕರನ್ನಾಗಿ ಮಾಡಿದೆ. ಇನ್ನೊಂದೆಡೆ 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಅತಿ ದೊಡ್ಡ ಹಾಗೂ ಆಘಾತಕಾರಿ ಸೋಲು ಅನುಭವಿಸಿತ್ತು. ಇದೀಗ ಸ್ಟಾರ್​ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಜೂನ್‌ನಲ್ಲಿ ನಡೆಯಲಿರುವ ಟಿ-20 ತಮ್ಮ ಆದ್ಭುತ ಆಟದ ಪ್ರದರ್ಶನ ತೋರುವುದಕ್ಕೆ ಸಿದ್ದರಾಗಿದ್ದಾರೆ.

ರಾಜ್‌ಕೋಟ್ ಸ್ಟೇಡಿಯಂಗೆ ಮರು ನಾಮಕರಣ : ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂಗೆ ಬುಧವಾರ ಹಿರಿಯ ಕ್ರಿಕೆಟ್ ಆಡಳಿತಗಾರ ಮತ್ತು ಮಾಜಿ ಪ್ರಥಮ ದರ್ಜೆ ಆಟಗಾರ ನಿರಂಜನ್ ಶಾ ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. ನಿರಂಜನ್​ ಷಾ ಗುಜರಾತಿ ಕುಟುಂಬಕ್ಕೆ ಸೇರಿದ್ದು, 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 1965-75ರ ನಡುವಿನ 10 ವರ್ಷಗಳಲ್ಲಿ 11.70 ಸರಾಸರಿಯಲ್ಲಿ 281 ರನ್ ಗಳಿಸಿದ್ದಾರೆ.

ಇನ್ನು ಉದ್ಘಾಟನೆ ಸಮಾರಂಭದಲ್ಲಿ ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಅನಿಲ್ ಕುಂಬ್ಳೆ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಬಿಸಿಸಿಐನ ಪ್ರಸ್ತುತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಟಗಾರರಾದ ರೋಹಿತ್ ಶರ್ಮಾ ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಭಾರತ ತಂಡದ ಸಹಾಯಕ ಸಿಬ್ಬಂದಿಯ ಕೆಲವು ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ : ಗುಜರಾತ್ ಜೈಂಟ್ಸ್ ‌ನಾಯಕಿಯಾಗಿ ಬೆತ್ ಮೂನಿ, ಉಪನಾಯಕಿಯಾಗಿ ಸ್ನೇಹ್ ರಾಣಾ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.