ETV Bharat / opinion

'ಬಿಗ್ ಬ್ರದರ್' ರಾಷ್ಟ್ರಗಳಾಗಿ ಭಾರತ - ಚೀನಾ: ಒಂದು ಅವಲೋಕನ

author img

By ETV Bharat Karnataka Team

Published : Mar 13, 2024, 7:14 PM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೇಶಗಳು ಬಿಗ್ ಬ್ರದರ್ ಅಥವಾ ದೊಡ್ಡಣ್ಣನಾಗಿ ವರ್ತಿಸುವ ಬಗ್ಗೆ ಒಂದು ಅವಲೋಕನ ಇಲ್ಲಿದೆ.

india-and-china-as-big-brother-nations-an-overview
india-and-china-as-big-brother-nations-an-overview

ಚೀನಾ ಬಹುತೇಕ ತನ್ನ ಎಲ್ಲ ನೆರೆ ಹೊರೆಯ ದೇಶಗಳೊಂದಿಗೆ ತಂಟೆ - ತಕರಾರು ಹೊಂದಿದೆ. ತೈವಾನ್, ವಿಯೆಟ್ನಾಂ, ಫಿಲಿಪ್ಪಿನ್ಸ್​ , ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ಸಣ್ಣ ಬ್ರೂನಿ ದೇಶದೊಂದಿಗೆ ಚೀನಾ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿನ ದ್ವೀಪಗಳು, ವಿಶೇಷ ಆರ್ಥಿಕ ವಲಯಗಳು (ಇಇಝಡ್) ಅಥವಾ ಅಮೆರಿಕ ಜೊತೆಗಿನ ಮೈತ್ರಿಗಳ ಕಾರಣದಿಂದ ಈ ಭಿನ್ನಾಭಿಪ್ರಾಯಗಳು ಉದ್ಭವಿಸಿವೆ.

ಅಮೆರಿಕದೊಂದಿಗಿನ ರಕ್ಷಣಾ ಒಪ್ಪಂದಗಳು ಫಿಲಿಪ್ಪಿನ್ಸ್​ ಮತ್ತು ಜಪಾನ್​​ ಗಳಿಗೆ ನೈನ್ - ಡ್ಯಾಶ್ ಪ್ರದೇಶದೊಳಗೆ ತನ್ನ ಹಕ್ಕುಗಳನ್ನು ಪ್ರಶ್ನಿಸುವ ವಿಶ್ವಾಸ ನೀಡುತ್ತವೆ ಎಂದು ಬೀಜಿಂಗ್ ನಂಬಿದೆ. ಇನ್ನು ವಿಶೇಷ ಆರ್ಥಿಕ ವಲಯದ ಕಾರಣದಿಂದಲೇ ಚೀನಾ ವಿಯೆಟ್ನಾಂನೊಂದಿಗೆ ಸಂಘರ್ಷ ಹೊಂದಿದೆ. ವಿಯೆಟ್ನಾಂ ಖನಿಜ ಸಮೃದ್ಧ ದೇಶವಾಗಿರುವುದು ಗಮನಾರ್ಹ.

ತೈವಾನ್​ ಅನ್ನು ಮರಳಿ ತನ್ನ ಅಧಿಪತ್ಯಕ್ಕೆ ಪಡೆಯುವುದು ಚೀನಾಗೆ ಯಾವಾಗಲೂ ಆದ್ಯತೆಯಾಗಿದೆ. ಅಮೆರಿಕ ತೈವಾನ್ ಅನ್ನು ಶಸ್ತ್ರಸಜ್ಜಿತಗೊಳಿಸುವುದು ಮತ್ತು ಉನ್ನತ ಶ್ರೇಣಿಯ ಅಮೆರಿಕ ರಾಜಕಾರಣಿಗಳು ಅಲ್ಲಿಗೆ ಭೇಟಿ ನೀಡುವ ಕ್ರಮಗಳು ಅಮೆರಿಕ ತನ್ನ ಏಕ - ಚೀನಾ ನೀತಿಗೆ ಬದ್ಧವಾಗಿಲ್ಲ ಎಂದು ಚೀನಾ ಪರಿಗಣಿಸುತ್ತದೆ. ಬೀಜಿಂಗ್ ಯಾವಾಗಲೂ ದಕ್ಷಿಣ ಕೊರಿಯಾವನ್ನು ಅಮೆರಿಕದ ಪ್ರಾದೇಶಿಕ ಮೈತ್ರಿಯಲ್ಲಿ ದುರ್ಬಲ ಕೊಂಡಿ ಎಂದು ಪರಿಗಣಿಸಿತ್ತು. ಆದಾಗ್ಯೂ, ಅಮೆರಿಕ - ದಕ್ಷಿಣ ಕೊರಿಯಾ ಮಿಲಿಟರಿ ಸಂಬಂಧಗಳು ಹೆಚ್ಚಾದಂತೆ, ಸಿಯೋಲ್ ನೊಂದಿಗೆ ಬೀಜಿಂಗ್​ನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ.

ಬೀಜಿಂಗ್​​ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ರಾಷ್ಟ್ರಗಳು ಭಾರತವನ್ನು ಮಿತ್ರರಾಷ್ಟ್ರ ಎಂದು ಪರಿಗಣಿಸುತ್ತವೆ. ಮುಖ್ಯವಾಗಿ ಭಾರತವು ದೂರದಲ್ಲಿದೆ ಮತ್ತು ಈ ಪ್ರದೇಶದಲ್ಲಿ ಯಾವುದೇ ಹಕ್ಕುಗಳನ್ನು ಹೊಂದಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಲಡಾಖ್ ಬಿಕ್ಕಟ್ಟಿನ ನಂತರ ಭಾರತ-ಚೀನಾ ಸಂಬಂಧಗಳು ಹದಗೆಟ್ಟಾಗ ಪೂರ್ವ ಏಷ್ಯಾದ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳಿಗೆ ಉತ್ತೇಜನ ಸಿಕ್ಕಿತು. 'ನನ್ನ ಶತ್ರುವಿನ ಶತ್ರು ನನ್ನ ಸ್ನೇಹಿತ' ಎಂಬ ಹಳೆಯ ತತ್ವದ ಮೇಲೂ ಸಂಬಂಧಗಳು ಪರಿಣಾಮ ಬೀರುತ್ತವೆ.

ವಿಯೆಟ್ನಾಂನೊಂದಿಗಿನ ಭಾರತದ ಮಿಲಿಟರಿ ಸಂಬಂಧಗಳು ಹೆಚ್ಚುತ್ತಿವೆ. ಅಲ್ಲದೇ ವಿಯೆಟ್ನಾಂ ಕರಾವಳಿಯಲ್ಲಿ ತೈಲವನ್ನು ಅನ್ವೇಷಿಸಲು ಭಾರತ ಹೂಡಿಕೆ ಮಾಡುತ್ತಿದೆ. ಭಾರತವು ಜಪಾನ್ ಜೊತೆಗೆ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಫಿಲಿಪ್ಪಿನ್ಸ್​​ ಮತ್ತು ವಿಯೆಟ್ನಾಂ ಎರಡಕ್ಕೂ ಬ್ರಹ್ಮೋಸ್ ಕ್ಷಿಪಣಿಗಳನ್ನು ಒದಗಿಸುತ್ತಿದೆ. ಇಂಡೋನೇಷ್ಯಾದ ಸಬಾಂಗ್ ಬಂದರು ಭಾರತೀಯ ನೌಕಾಪಡೆಯ ಹಡಗುಗಳಿಗೆ ಕಾರ್ಯಾಚರಣೆಯ ತಿರುವಿಗಾಗಿ ಲಭ್ಯವಿದೆ. ಚೀನಾದೊಂದಿಗೆ ವಿವಾದದಲ್ಲಿರುವ ದೇಶಗಳೊಂದಿಗೆ ಭಾರತವು ತನ್ನ ಭದ್ರತಾ ಸಹಕಾರವನ್ನು ಸ್ಥಿರವಾಗಿ ವಿಸ್ತರಿಸಿದೆ.

ತಮ್ಮ ಸಣ್ಣ ನೆರೆಹೊರೆ ದೇಶಗಳ ವಿಷಯದಲ್ಲಿ ಭಾರತ ಮತ್ತು ಚೀನಾದ ನೀತಿಗಳು ಭಿನ್ನವಾಗಿರಬಹುದು. ಆದರೆ, ದೊಡ್ಡ, ಬಲವಾದ ಮತ್ತು ಶಕ್ತಿಯುತ ರಾಷ್ಟ್ರ ಪಕ್ಕದಲ್ಲಿದ್ದರೆ ಅದು ಯಾವಾಗಲೂ ಸುತ್ತಮುತ್ತಲಿನ ಸಣ್ಣ ರಾಷ್ಟ್ರಗಳಿಗೆ ಅಪಾಯ ಎಂಬುದು ಗಮನಾರ್ಹ. ಭಾರತದ ಉದ್ದೇಶಗಳು ಎಷ್ಟೇ ಉತ್ತಮವಾಗಿದ್ದರೂ ಅದರ ಸಣ್ಣ ನೆರೆಯ ರಾಷ್ಟ್ರಗಳಾದ ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಅದನ್ನು ಅನುಮಾನಾಸ್ಪದವಾಗಿಯೇ ನೋಡುತ್ತವೆ.

ಮಾಲ್ಡೀವ್ಸ್​ನ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ, ಭಾರತವು ಮಾಲ್ಡೀವ್ಸ್​ ಬಗ್ಗೆ ದುರುದ್ದೇಶಗಳನ್ನು ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ದೇಶಕ್ಕೆ ಉಡುಗೊರೆಯಾಗಿ ನೀಡಿದ ವಾಯು ಸ್ವತ್ತುಗಳ ಕಾರ್ಯನಿರ್ವಹಣೆಯನ್ನು ವಹಿಸಿಕೊಳ್ಳಲು ಭಾರತವು ಯೋಧರನ್ನು ಹೊರತಾದ ಸಿಬ್ಬಂದಿಯನ್ನು ಮಾಲೆಗೆ ಕಳುಹಿಸಿದ ಒಂದು ವಾರದ ನಂತರ ಮಾಲ್ಡೀವ್ಸ್​ ಅಧ್ಯಕ್ಷರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. 'ಮೇ 10 ರ ನಂತ ದೇಶದಲ್ಲಿ ಯಾವುದೇ ಭಾರತೀಯ ಯೋಧರು ಇರುವುದಿಲ್ಲ. ಸಮವಸ್ತ್ರದಲ್ಲಿ ಮತ್ತು ನಾಗರಿಕ ಉಡುಪಿನಲ್ಲಿಯೇ ಆಗಲಿ ಯಾವುದೇ ಯೋಧರು ಇಲ್ಲಿರುವುದಿಲ್ಲ. ಭಾರತೀಯ ಸೇನೆಯು ಈ ದೇಶದಲ್ಲಿ ಯಾವುದೇ ರೀತಿಯ ಉಡುಪುಗಳಲ್ಲಿ ವಾಸಿಸುವುದಿಲ್ಲ. ನಾನು ಇದನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ.' ಎಂದು ಅಧ್ಯಕ್ಷ ಮುಯಿಝು ಹೇಳಿದ್ದಾರೆ.

ಮಾಲ್ಡೀವ್ಸ್ ಸರ್ಕಾರವು ಏಕಕಾಲದಲ್ಲಿ ಚೀನಾದೊಂದಿಗೆ ಮಿಲಿಟರಿ ತರಬೇತಿ ಮತ್ತು ಮಾರಣಾಂತಿಕವಲ್ಲದ ಉಪಕರಣಗಳನ್ನು ಪಡೆಯಲು ಉಚಿತ ಮಿಲಿಟರಿ ನೆರವಿಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಟರ್ಕಿ ಮಾಲ್ಡೀವ್ಸ್ ರಕ್ಷಣಾ ಪಡೆಗಳಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಹಿಂದಿನ ಸಂಪ್ರದಾಯವನ್ನು ಮುರಿದು, ಮುಯಿಝು ತನ್ನ ಮೊದಲ ಅಧಿಕೃತ ಭೇಟಿಗಳಲ್ಲಿ ಭಾರತವನ್ನು ನಿರ್ಲಕ್ಷಿಸಿ ಚೀನಾಕ್ಕೆ ಭೇಟಿ ನೀಡಿದರು.

ಪ್ರಬಲ ರಾಷ್ಟ್ರವಾಗಿರುವ ಭಾರತ ತನ್ನನ್ನು ಬೆದರಿಸುತ್ತಿದೆ ಎಂದು ಮುಯಿಝು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, 'ನಾವು ಬೆದರಿಸುವುದೇ ಆಗಿದ್ದರೆ ನೀವು ಸಂಕಷ್ಟದಲ್ಲಿರುವಾಗ 4.5 ಬಿಲಿಯನ್ ಡಾಲರ್ ನೆರವು ನೀಡುತ್ತಿರಲಿಲ್ಲ' ಎಂದು ತಿರುಗೇಟು ನೀಡಿದ್ದಾರೆ. ಇನ್ನು ಮಾಲ್ಡೀವ್ಸ್​ಗೆ ಭೇಟಿ ನೀಡುವುದನ್ನು ಭಾರತೀಯರು ಸ್ವಯಂಪ್ರೇರಿತವಾಗಿ ಕಡಿಮೆ ಮಾಡುತ್ತಿರುವುದರಿಂದ ಆ ದೇಶದಲ್ಲಿ ಭಾರತ ವಿರೋಧಿ ಭಾವನೆಯನ್ನು ಹೆಚ್ಚಿಸಿದೆ.

ಇನ್ನು ಶ್ರೀಲಂಕಾ ಬಗ್ಗೆ ನೋಡುವುದಾದರೆ ಅಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಒಂದೋ ಭಾರತ ಪರ ಅಥವಾ ಚೀನಾ ಪರವಾಗಿರುತ್ತವೆ. ಐತಿಹಾಸಿಕವಾಗಿ, 1980 ರ ದಶಕದಲ್ಲಿ ಎಲ್ಟಿಟಿಇ ಉಗ್ರರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿದ್ದಕ್ಕಾಗಿ ಅಲ್ಲಿನ ಸಿಂಹಳೀಯ ಸಮುದಾಯವು ಭಾರತವನ್ನು ದೂಷಿಸುತ್ತಲೇ ಇದೆ. ಯುದ್ಧದ ಸಮಯದಲ್ಲಿ, ಭಾರತವು ಶ್ರೀಲಂಕಾ ಸೈನ್ಯಕ್ಕೆ ಶಸ್ತ್ರಾಸ್ತ್ರಗಳನ್ನು ನೀಡಲು ನಿರಾಕರಿಸಿದಾಗ ಚೀನಾ ಅದಕ್ಕೆ ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಉತ್ತರ ಮತ್ತು ಪೂರ್ವ ಶ್ರೀಲಂಕಾದ ತಮಿಳರ ಬೇಡಿಕೆಗಳನ್ನು ಭಾರತ ಬೆಂಬಲಿಸುತ್ತಿರುವುದರಿಂದ ಕೂಡ ಅಪನಂಬಿಕೆ ಉಳಿದುಕೊಂಡಿದೆ. ಶ್ರೀಲಂಕಾದ ಕೆಲ ನಾಗರಿಕರು ಭಾರತವು ತಮ್ಮ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾವಿಸಿದ್ದಾರೆ.

2015ರಲ್ಲಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ತಮ್ಮ ಸೋಲಿಗೆ ಭಾರತವೇ ಕಾರಣ ಎಂದು ಆರೋಪಿಸಿದ್ದರು. 'ನನ್ನನ್ನು ಕೆಳಗಿಳಿಸಲು ಅಮೆರಿಕ ಮತ್ತು ಭಾರತ ಎರಡೂ ತಮ್ಮ ರಾಯಭಾರ ಕಚೇರಿಗಳನ್ನು ಬಹಿರಂಗವಾಗಿ ಬಳಸಿಕೊಂಡವು' ಎಂದು ಅವರು ಉಲ್ಲೇಖಿಸಿದ್ದಾರೆ. 2018 ರಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಭಾರತದ ಗುಪ್ತಚರ ಸಂಸ್ಥೆ 'ರಾ' ತನ್ನ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರೋಪಿಸಿದ್ದರು. ಆದರೆ ಈ ಎರಡೂ ಆರೋಪಗಳಿಗೆ ಯಾವುದೇ ಪುರಾವೆಗಳಿರಲಿಲ್ಲ.

ಕಳೆದ ವರ್ಷ ನವೆಂಬರ್​ನಲ್ಲಿ, ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶ್ರೀಲಂಕಾ ಕ್ರಿಕೆಟ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಕ್ರಿಕೆಟ್​ ಅನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಶ್ರೀಲಂಕಾದಲ್ಲಿ, ದಕ್ಷಿಣ ಏಷ್ಯಾದ ಉಳಿದ ಭಾಗಗಳಂತೆ, ಕ್ರಿಕೆಟ್ ಬಹುತೇಕ ಒಂದು ಧರ್ಮವಾಗಿದೆ. ಆದಾಗ್ಯೂ ಶ್ರೀಲಂಕಾ ಸರ್ಕಾರ ಈ ಹೇಳಿಕೆಗಳಿಗೆ ನಂತರ ಕ್ಷಮೆಯಾಚಿಸಿತು.

ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಯಾವಾಗಲೂ ಶ್ರೀಲಂಕಾದ ಬೆಂಬಲಕ್ಕೆ ನಿಂತಿದೆ. ಕೋವಿಡ್ ಸಮಯದಲ್ಲಿ, ಭಾರತವು 25 ಟನ್​ಗಿಂತ ಹೆಚ್ಚು ಔಷಧಿಗಳನ್ನು ಮತ್ತು 5 ಲಕ್ಷ ಡೋಸ್ ಲಸಿಕೆಯನ್ನು ಶ್ರೀಲಂಕಾಗೆ ಪೂರೈಸಿದೆ. 2022 ರಲ್ಲಿ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದಾಗ, ಭಾರತವು ಪೆಟ್ರೋಲಿಯಂ, ಆಹಾರ ವಸ್ತುಗಳು, ಔಷಧಗಳನ್ನು ಕಳುಹಿಸಿತ್ತು ಮತ್ತು ಇಂಧನ ಖರೀದಿಗೆ ಸಾಲ ಕೂಡ ನೀಡಿತ್ತು.

ಕಳೆದ ವರ್ಷ ನವೆಂಬರ್​ನಲ್ಲಿ ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಅವರು ಆರ್ಥಿಕ ಕುಸಿತದ ಸಮಯದಲ್ಲಿ ದೇಶಕ್ಕೆ 4 ಬಿಲಿಯನ್ ಡಾಲರ್ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದರು. 'ನಾವು ಇಂದು ಸ್ಥಿರವಾಗಿದ್ದರೆ ಅದಕ್ಕೆ ಭಾರತದ ಸಹಾಯವೇ ಕಾರಣ' ಎಂದು ಅವರು ಹೇಳಿದ್ದರು. ಪ್ರಸ್ತುತ ಶ್ರೀಲಂಕಾದಲ್ಲಿ, ಮುಂದೆ ನಡೆಯುವ ಚುನಾವಣೆಗಳು ಭಾರತ ಪರ ಅಥವಾ ಚೀನಾ ಪರ ನಿಲುವಿನ ಮೇಲೆ ಕೇಂದ್ರೀಕೃತವಾಗಿರುತ್ತವೆ.

ಇನ್ನು ನೇಪಾಳದ ಬಗ್ಗೆ ನೋಡುವುದಾದರೆ - ಚೀನಾ ಪರ ಒಲವು ಹೊಂದಿರುವ ರಾಜಕಾರಣಿಗಳು ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದು, ರಾಷ್ಟ್ರೀಯತೆಯ ಕಾರ್ಡ್ ಅನ್ನು ಬಳಸಿಕೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ. ಪದಚ್ಯುತ ಕೆಲ ಪ್ರಧಾನ ಮಂತ್ರಿಗಳು ಭಾರತವು ತಮ್ಮ ಪತನಕ್ಕೆ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಯಾವುದೇ ಸಾಕ್ಷಿ ನೀಡಲು ಅವರು ವಿಫಲವಾಗಿದ್ದಾರೆ. ಕಾಲಾಪಾನಿ ಮತ್ತು ಲಿಪುಲೆಖ್ನಲ್ಲಿ ಇಂಡೋ - ನೇಪಾಳ ಗಡಿಗಳ ಬಗ್ಗೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಆಗಾಗ ಪ್ರತಿಭಟನೆಗಳು ನಡೆಯುತ್ತಿವೆ.

ಮತ್ತೊಂದೆಡೆ, ಚೀನಾ ನೇಪಾಳವನ್ನು ತನ್ನ ಬಿಆರ್​ಐ (ಬೆಲ್ಟ್ ರೋಡ್ ಇನಿಶಿಯೇಟಿವ್)ಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸಾಲದ ಬಲೆಗೆ ಹೆದರಿ ನೇಪಾಳವು ಚೀನಾದ ಯೋಜನೆಗಳನ್ನು ಸ್ವೀಕರಿಸಲು ಹಿಂಜರಿಯುತ್ತಿದೆ. ನೇಪಾಳದಲ್ಲಿನ ಚೀನಾದ ರಾಯಭಾರಿ ಹೌ ಯಾಂಗಿ ಅವರು ನೇಪಾಳದ ಕಮ್ಯುನಿಸ್ಟ್ ಪಕ್ಷದ ನಾಯಕರನ್ನು ಭೇಟಿಯಾಗಿ, ಚೀನಾ ಪರ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ವಿವಾದ ಸೃಷ್ಟಿಸಿದ್ದರು. ಪ್ರಸ್ತುತ ಚೀನಾದ ರಾಯಭಾರಿ ಚೆನ್ ಸಾಂಗ್ ಕೂಡ ನೇಪಾಳ ನೆಲದಲ್ಲಿ ಚೀನಾದ ಅಕ್ರಮ ಚಟುವಟಿಕೆಯ ಬಗ್ಗೆ ನೇಪಾಳದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಭಾರತೀಯ 'ರಾ' ಮುಖ್ಯಸ್ಥರ ಕಠ್ಮಂಡುವಿನ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿತು.

ನೇಪಾಳದ ಹೆಚ್ಚಿನ ವ್ಯಾಪಾರವು ಭಾರತದ ಮೂಲಕ ನಡೆಯುತ್ತಿದ್ದರೂ ಮತ್ತು ಭಾರತ ಅದರ ಅನೇಕ ಯೋಜನೆಗಳಿಗೆ ಧನಸಹಾಯ ನೀಡುತ್ತಿದ್ದರೂ, ಭಾರತವು ದುರುದ್ದೇಶದಿಂದ ತನ್ನ ದೇಶದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ನೇಪಾಳ ಆರೋಪಿಸಿದೆ.

ಭಾರತದ ಗಾತ್ರ, ಆರ್ಥಿಕತೆ, ದಿಗ್ಬಂಧನವನ್ನು ಹೇರುವ ಸಾಮರ್ಥ್ಯ ಮತ್ತು ಬಯಲು ಪ್ರದೇಶದ ಮಾಧೇಸಿ ಜನಸಂಖ್ಯೆಗೆ ಅದರ ಬೆಂಬಲವು ನೇಪಾಳದಲ್ಲಿ ಭಾರತ ವಿರೋಧಿ ಭಾವನೆಯನ್ನು ಹೆಚ್ಚಿಸಿದೆ. ನೇಪಾಳ ಸರ್ಕಾರವು ಒಪ್ಪಿಕೊಳ್ಳದ ಅಗ್ನಿವೀರ್ ನೀತಿಯಿಂದ ಇದು ಪ್ರಸ್ತುತ ಇನ್ನಷ್ಟು ಜಟಿಲಗೊಂಡಿದೆ. ಚೀನಾ ನೇಪಾಳದ ಉತ್ತರದ ನೆರೆಯ ರಾಷ್ಟ್ರವಾಗಿದ್ದು, ಅದು ಯಾವುದೇ ಹಿಂಜರಿಕೆ ಇಲ್ಲದೇ ಹಸ್ತಕ್ಷೇಪ ಮಾಡಿದೆ.

ಇನ್ನೊಂದು ನೆರೆ ರಾಷ್ಟ್ರ ಬಾಂಗ್ಲಾದೇಶದ ಬಗ್ಗೆ ನೋಡುವುದಾದರೆ- ಶೇಖ್ ಹಸೀನಾ ಆಡಳಿತದ ಮುಂದುವರಿಕೆಯನ್ನು ಭಾರತ ರಹಸ್ಯವಾಗಿ ಬೆಂಬಲಿಸುತ್ತಿದೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷಗಳು ಆರೋಪಿಸಿವೆ. ಶೇಖ್ ಹಸೀನಾ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದ ಚುನಾವಣಾ ಪ್ರಕ್ರಿಯೆಯ ಟೀಕೆಗಳನ್ನು ಕಡಿಮೆ ಮಾಡಲು ಭಾರತವು ಅಮೆರಿಕದೊಂದಿಗಿನ ಸಾಮೀಪ್ಯವನ್ನು ಬಳಸಿಕೊಂಡಿದೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷಗಳು ಆರೋಪಿಸಿವೆ.

ಗಡಿ ವಿವಾದ ಮತ್ತು ನೀರಿನ ಕುಂದುಕೊರತೆಗಳಿಂದಾಗಿಯೂ ಭಾರತ ವಿರೋಧಿ ಭಾವನೆ ಹೆಚ್ಚುತ್ತಿದೆ. ಪ್ಯಾರಿಸ್ ಮೂಲದ ಬಾಂಗ್ಲಾದೇಶದ ಕಾರ್ಯಕರ್ತರೊಬ್ಬರು, "ಆತ್ಮಸಾಕ್ಷಿ ಹೊಂದಿರುವ ಜನರು ಮತ್ತೊಂದು ರಾಷ್ಟ್ರದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಸಹಾಯ ಮಾಡುವ ಮತ್ತು ಅದರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರವೊಂದರ ಪ್ರಯತ್ನಗಳನ್ನು ಸ್ವಾರ್ಥ ಮತ್ತು ಅನೈತಿಕ ಎಂದು ಭಾವಿಸುತ್ತಾರೆ" ಎಂದು ಹೇಳಿದರು. ಆದರೆ, ಭಾರತದ ವಿರುದ್ಧದ ಈ ಯಾವುದೇ ಆರೋಪಗಳಿಗೆ ಪುರಾವೆಗಳಿಲ್ಲ.

ಯುರೋಪಿನ ಹಿಂದಿನ ಯುಎಸ್ಎಸ್ಆರ್ ರಾಷ್ಟ್ರಗಳಲ್ಲಿ ರಷ್ಯಾದ ಸಂಭಾವ್ಯ ಉದ್ದೇಶಗಳ ಬಗ್ಗೆ ಇದೇ ರೀತಿಯ ಸನ್ನಿವೇಶವು ಚಾಲ್ತಿಯಲ್ಲಿದೆ. ಅವುಗಳಲ್ಲಿ ಹೆಚ್ಚಿನ ರಾಷ್ಟ್ರಗಳು ನ್ಯಾಟೋದ ಸದಸ್ಯರಾಗಿವೆ. ಉಕ್ರೇನ್ ಆಕ್ರಮಣದ ನಂತರ ಈ ಅಪನಂಬಿಕೆ ಮತ್ತಷ್ಟು ಹೆಚ್ಚಾಗಿದೆ.

ಭಾರತ ಮತ್ತು ಚೀನಾ ಎರಡೂ ತಮ್ಮ ನೆರೆಹೊರೆಯ ದೇಶಗಳಲ್ಲಿ ಅಪನಂಬಿಕೆ ಎದುರಿಸುತ್ತಿವೆ. ದೂರದ ಶಕ್ತಿ ನಂಬುವಾಗ ನೆರೆಹೊರೆಯ ದೊಡ್ಡಣ್ಣನ ಉದ್ದೇಶವನ್ನು ಪ್ರಶ್ನಿಸುವುದು ರೂಢಿಯಾಗಿದೆ. ಈ ಕಾರಣಕ್ಕಾಗಿ, ಪೂರ್ವ ಏಷ್ಯಾದ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳು ವೃದ್ಧಿಯಾಗಲು ಕಾರಣವಾಗಿದೆ. ಆದರೆ, ಅದರ ಸಣ್ಣ ನೆರೆಹೊರೆಯವರೊಂದಿಗಿನ ಸಂಬಂಧಗಳು ಏರಿಳಿತ ಕಾಣುತ್ತಿವೆ. ಅಂದರೆ ದೊಡ್ಡಣ್ಣನನ್ನು ಅನುಮಾನಿಸುವುದು ಸಾಮಾನ್ಯ ಎಂದು ವ್ಯಾಖ್ಯಾನಿಸಲಾಗಿದೆ.

ಭಾರತವು ವರ್ಷಗಳಿಂದ ನೆರೆಹೊರೆಯಲ್ಲಿ ತನ್ನ ಉದ್ದೇಶಗಳ ಬಗ್ಗೆ ಅಪನಂಬಿಕೆ ಮತ್ತು ಅನುಮಾನಗಳನ್ನು ನಿಯಮಿತವಾಗಿ ಎದುರಿಸಿದೆ. ಆದರೆ, ಪ್ರತಿ ಬಾರಿಯೂ ಅವುಗಳನ್ನು ನಿವಾರಿಸಿದೆ. ಈಗಿನ ಸಂದರ್ಭವೂ ಇದಕ್ಕಿಂತ ಭಿನ್ನವಾಗಿಲ್ಲ. ಆಯಾ ಸಂದರ್ಭಗಳಲ್ಲಿ ನೋಡಿದಂತೆ, ಪಕ್ಕದ ರಾಷ್ಟ್ರಗಳಲ್ಲಿ ಭಾರತ ವಿರೋಧಿ ಸರ್ಕಾರವನ್ನು ಭಾರತ ಪರ ಸರ್ಕಾರದಿಂದ ಬದಲಾಯಿಸಲಾಗುತ್ತದೆ ಮತ್ತು ಇದಕ್ಕೆ ವಿರುದ್ಧವಾಗಿ ಕೂಡ ನಡೆಯುತ್ತದೆ.

ಲೇಖನ: ಹರ್ಷ ಕಾಕರ್, ನಿವೃತ್ತ ಮೇಜರ್ ಜನರಲ್.

ಇದನ್ನೂ ಓದಿ : ಭಾರತ - ಮ್ಯಾನ್ಮಾರ್ ಮುಕ್ತ ಚಲನೆ ವ್ಯವಸ್ಥೆ ರದ್ದು: ಅನುಕೂಲ ಮತ್ತು ಸವಾಲುಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.