ETV Bharat / opinion

ಆಂಧ್ರಪ್ರದೇಶದಲ್ಲಿ ಫೋನ್​ ಕದ್ದಾಲಿಕೆ ಭಯ; ನಿಮ್ಮ ಫೋನ್​ ಟ್ಯಾಪಿಂಗ್​​ ಆಗುತ್ತೆ ಹುಷಾರ್​! - Phone Tapping

author img

By ETV Bharat Karnataka Team

Published : Mar 25, 2024, 3:58 PM IST

Updated : Mar 26, 2024, 12:20 PM IST

ಆಂಧ್ರಪ್ರದೇಶದಲ್ಲಿ ಫೋನ್​ ಕದ್ದಾಲಿಕೆ ಪೆಡಂಭೂತ
ಆಂಧ್ರಪ್ರದೇಶದಲ್ಲಿ ಫೋನ್​ ಕದ್ದಾಲಿಕೆ ಪೆಡಂಭೂತ

ಆಂಧ್ರಪ್ರದೇಶದಲ್ಲಿ ಫೋನ್​ ಕದ್ದಾಲಿಕೆ ಆರೋಪ ಕೇಳಿಬಂದಿದೆ. ಅಲ್ಲಿನ ಸರ್ಕಾರವೇ ವಿಪಕ್ಷಗಳ ಮೇಲೆ ನಿಗಾ ಇಟ್ಟಿದೆ. ಇದು ರಾಜಕೀಯ ನಾಯಕರ ನಿದ್ದೆಗೆಡಿಸಿದೆ.

ಹೈದರಾಬಾದ್: ಆಂಧ್ರದಲ್ಲಿ ಫೋನ್​ ಕದ್ದಾಲಿಕೆ ಪ್ರಕರಣ ಭಾರೀ ಸದ್ದು ಮಾಡಿದೆ. ಅಲ್ಲಿನ ವೈಎಸ್​ಆರ್​ಸಿಪಿ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೊಂದು ವೇಳೆ ಆ ಪಕ್ಷದ ಪ್ರತಿನಿಧಿಗಳು ಮತ್ತು ಕಾರ್ಯಕರ್ತರ ವಿರುದ್ಧ ಮಾತನಾಡಿದರೆ ತಕ್ಷಣವೇ ಅವರ ಮನೆಗೆ ಕಾರ್ಯಕರ್ತರು ಬಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಲಾಗಿದೆ.

ಈ ಸಮಸ್ಯೆಯನ್ನು ವಿರೋಧ ಪಕ್ಷಗಳ ನಾಯಕರು ಮಾತ್ರವಲ್ಲ, ಪಕ್ಷದ ಕಾರ್ಯಕರ್ತರು, ಮುಖಂಡರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ವಿವಿಧ ಚಳವಳಿಗಳಲ್ಲಿ ತೊಡಗಿರುವ ಕಾರ್ಯಕರ್ತರು, ವರದಿಗಾರರು ಮತ್ತು ಸಾಮಾನ್ಯ ಜನರೂ ಕೂಡ ಇದರಿಂದ ಬಾಧಿತರಾಗುತ್ತಿದ್ದಾರೆ ಎಂಬುದು ಆತಂಕದ ವಿಚಾರ ಎನ್ನಲಾಗುತ್ತಿದೆ.

ಫೋನ್ ಕದ್ದಾಲಿಕೆ ಭಯ ಎಲ್ಲರನ್ನೂ ಕಾಡುತ್ತಿದೆ. ಜನರು ಬಾಯಿ ತೆರೆದು ಮುಕ್ತವಾಗಿ ಮಾತನಾಡಲು ಸಹ ಹೆದರುವಂತಾಗಿದೆ. ತಮ್ಮ ಸ್ವಂತ ಫೋನ್ ಅನ್ನು ಕೂಡ ಬಳಕೆ ಮಾಡಲು ಒಮ್ಮೆ ಯೋಚಿಸುವಂತಾಗಿದೆ. ಇದು ರಾಜ್ಯ (ಆಂಧ್ರಪ್ರದೇಶ) ಸರ್ಕಾರದ 'ರಹಸ್ಯ' ಕಾರ್ಯಾಚರಣೆಯಾಗಿದೆ. ಜನರು ವೈಎಸ್‌ಆರ್‌ಸಿಪಿ ಸರ್ಕಾರದ 'ಟ್ಯಾಪ್'ಗೆ ಒಳಗಾಗಿದೆ ಎಂದು ದೂರಲಾಗುತ್ತಿದೆ.

ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು, ಕಾನೂನು ತಜ್ಞರು, ಪತ್ರಕರ್ತರು, ರಾಜಕೀಯ ನಾಯಕರು ಮತ್ತು ಗಣ್ಯ ವ್ಯಕ್ತಿಗಳು ಯಾರೋ ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಭಯದಲ್ಲಿ ಇದ್ದಾರೆ. ಫೋನ್ ಕದ್ದಾಲಿಸುತ್ತಿದ್ದಾರೆ. ಫೋನ್ ಟ್ಯಾಪಿಂಗ್‌ನಿಂದ ಆಗುವ ಅನಾಹುತಗಳ ಬಗ್ಗೆ ಅವರೆಲ್ಲರಿಗೂ ಆತಂಕವಿದೆ.

ಕೆಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಒಂದೆಡೆ ಸೇರಿ ಮುಕ್ತವಾಗಿ ಪರಸ್ಪರ ಮಾತನಾಡುವ ಸ್ಥಿತಿ ಕೂಡ ರಾಜ್ಯದಲ್ಲಿ ಇಲ್ಲವಾಗಿದೆ. ಇಂಥದ್ದೊಂದು ಭಯಾನಕ ಪರಿಸ್ಥಿತಿ ಬಹುಶಃ ಆಂಧ್ರಪ್ರದೇಶದಲ್ಲಿ ಮಾತ್ರ ಚಾಲ್ತಿಯಲ್ಲಿ ಇದೆಯೇನೋ ಎಂಬ ಅನುಮಾನವಿದೆ. ಪರಿಸ್ಥಿತಿ ಹೇಗಿದೆಯೆಂದರೆ, ಕಡೆಗೆ ತಮ್ಮ ಕುಟುಂಬಸ್ಥರ ಜೊತೆಗೆ ಏನಾದರೂ ಮಾತನಾಡಬೇಕು ಎಂದರೂ ಒಮ್ಮೆ ಅನುಮಾನಿಸುವಂತಾಗಿದೆ.

ಕರೆ ಮಾದರಿ ಪದೇ ಪದೇ ಬದಲು: ಇಂತಹ ಭಯದಿಂದಾಗಿ ಜನರು ಸಾಮಾನ್ಯ ಫೋನ್ ಕರೆಗಳನ್ನು ತ್ಯಜಿಸಿ ವಾಟ್ಸ್​ ಆ್ಯಪ್​ ಕರೆಗಳಿಗೆ ಬದಲಾದರು. ಬಳಿಕ ಇದೂ ಸೇಫ್​ ಅಲ್ಲ ಎಂದುಕೊಂಡು ಟೆಲಿಗ್ರಾಮ್‌ಗೆ ಮೊರೆ ಹೋದರು. ಇದೀಗ ಟೆಲಿಗ್ರಾಮ್ ಕರೆಗಳು ಕೂಡ ಟ್ಯಾಪ್ ಮಾಡಬಹುದು ಎಂಬ ಭಯದಿಂದ, ಸಿಗ್ನಲ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳುವಂತಾಗಿದೆ. ಇಷ್ಟಲ್ಲದೇ, ಭದ್ರತೆ ಒದಗಿಸುವ ದುಬಾರಿ ಐಫೋನ್ ಅನ್ನು ಖರೀದಿಸುವುದು ಉತ್ತಮ ಎಂಬ ತೀರ್ಮಾನಕ್ಕೆ ಬರುವಂತಾಗಿದೆ.

ಗಟ್ಟಿಕುಳಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ 15 ದಿನ, ತಿಂಗಳಿಗೊಮ್ಮ ತಮ್ಮ ಫೋನ್​ಗಳನ್ನು ಬದಲಿಸುತ್ತಿದ್ದಾರೆ. ಅರಾಜಕತೆಯ ಆಗರವಾಗಿರುವ ಆಂಧ್ರ ಸರ್ಕಾರ ಸ್ಥಾಪಿಸಿದ ಕಣ್ಗಾವಲು ಆಡಳಿತಕ್ಕೆ ಹೆದರಿ, ಅಭದ್ರತೆಯ ಭಾವದಲ್ಲಿ ಬದುಕುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿರುವ ಸರಕಾರ, ಜನರು ಮುಕ್ತವಾಗಿ ದೂರವಾಣಿಯಲ್ಲಿ ಮಾತನಾಡಲೂ ಭಯಪಡುವ ಸ್ಥಿತಿ ನಿರ್ಮಾಣ ಮಾಡಿದೆ.

ನಿಮ್ಮ ಬಳಿ ಮೊಬೈಲ್ ಇದೆಯೇ ಹಾಗಿದ್ದರೆ ಹುಷಾರ್​: ಫೋನ್ ನಿಮ್ಮ ಜೇಬಲ್ಲಿದ್ದರೂ ಕೂಡ ಅದು ಅಪಾಯಕಾರಿ ಎಂಬಂತಾಗಿದೆ. ಅದು ನಿಮ್ಮ ಹತ್ತಿರವಿದ್ದಾಗ 'ಯಾರೋ' ನಿಮ್ಮನ್ನು ಕಣ್ಗಾವಲು ಮಾಡುತ್ತಿದ್ದಾರೆ. ನೀವು ಆಡುವ ಪ್ರತಿ ಮಾತನ್ನೂ ಕೇಳಿಸಿಕೊಳ್ಳುತ್ತಿದ್ದಾರೆ. ಅದು ರೆಕಾರ್ಡ್ ಆಗುತ್ತಿದೆ ಎಂಬ ಬಾವ ನಿಮ್ಮಲ್ಲಿ ಮೂಡಿಸುತ್ತದೆ. ಅದಕ್ಕಾಗಿಯೇ ಸಾರ್ವಜನಿಕ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಕಾನೂನು ತಜ್ಞರು ಮತ್ತು ಮಾಧ್ಯಮದವರು 'ಮೌನ'ವೇ ಜೀವನದ ನಿಯಮವಾಗಿ ಮಾಡಿಕೊಂಡಿದ್ದಾರೆ.

ಗುಪ್ತಚರ ಇಲಾಖೆಗಳಲ್ಲಿ ಕೆಲಸ ಮಾಡುವವರು ಸಹ ತಮ್ಮ ಫೋನ್‌ನಲ್ಲಿ ಮಾತನಾಡುವಾಗ ಪ್ರತಿ ಪದದ ಮೇಲೂ ಎಚ್ಚರಿಕೆ ವಹಿಸಬೇಕಿದೆ. ಟ್ಯಾಪರ್‌ಗಳು ಇದೆಲ್ಲವನ್ನೂ ಕದ್ದು ಕೇಳಿಸಿಕೊಳ್ಳುತ್ತಿರುವುದು ರಾಜ್ಯದಲ್ಲಿನ ಅರಾಜಕತೆಗೆ ಹಿಡಿದ ಕನ್ನಡಿಯಾಗಿದೆ. ಕಳೆದ 5 ವರ್ಷಗಳಿಂದ ಅನೇಕ ಅಧಿಕಾರಿಗಳು ಮತ್ತು ಮುಖಂಡರು ಸಾಮಾನ್ಯ ಕರೆಗಳನ್ನು ಮಾಡುವುದನ್ನೇ ಬಿಟ್ಟಿದ್ದಾರೆ. ಸಂದೇಶಗಳನ್ನು (ಮೆಸೇಜ್​)ಸಹ ಕಳುಹಿಸುತ್ತಿಲ್ಲ. ಇದನ್ನು ಆದಷ್ಟು ತಡೆಯಲು ವಾಟ್ಸಾಪ್, ಸಿಗ್ನಲ್ ಮತ್ತು ಫೇಸ್‌ಟೈಮ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ.

ಲಿಂಕ್ ಕಳುಹಿಸುವ ಟ್ರ್ಯಾಕ್: ನಿಗದಿತ ವ್ಯಕ್ತಿಗೆ ಲಿಂಕ್​ ಕಳುಹಿಸಿ, ಅದನ್ನು ಕ್ಲಿಕ್​ ಮಾಡಲು ಸೂಚಿಸಲಾಗುತ್ತದೆ. ಅದನ್ನು ಕ್ಲಿಕ್​ ಮಾಡಿದಾಗ ಫೋನ್‌ನ ಟ್ರ್ಯಾಕಿಂಗ್​ಗೆ ಒಳಗಾಗುತ್ತದೆ. ಆಗ ಮೊಬೈಲ್​ ಬಳಸಿ ವ್ಯಕ್ತಿ ಮಾತನಾಡಿದಾಗ ಮಾತ್ರವಲ್ಲ, ಅದು ಪಕ್ಕದಲ್ಲಿದ್ದಾಗಲೂ ಟ್ರ್ಯಾಕಿಂಗ್​ಗೆ ಸಿಲುಕುತ್ತಾರೆ. ಹಲವಾರು ಸ್ಪೈವೇರ್​ಗಳನ್ನು ನಿಮ್ಮ ಮೊಬೈಲ್​ನಲ್ಲಿ ಅಳವಡಿಸಿ, ಪ್ರತಿ ಕ್ಷಣವೂ ಟ್ರ್ಯಾಕ್​ ಮಾಡಲಾಗುತ್ತದೆ. ವಿಡಿಯೋ, ಆಡಿಯೋ ರೆಕಾರ್ಡ್​ ಮಾಡಲಾಗುತ್ತದೆ.

ಖಾಸಗಿ ಹಾಗೂ ಸರ್ಕಾರಿ ನೌಕರರ ಸಂಘಗಳ ಮುಖಂಡರು ಮಾತನಾಡಲೂ ಭಯಪಡುತ್ತಿದ್ದಾರೆ. ಯಾರೊಂದಿಗಾದರೂ ಸಂವಾದ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ತಮ್ಮ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. "ನಾವು ಫೋನ್ ಮೂಲಕ ಮಾತನಾಡಿದ ವ್ಯಕ್ತಿಗಳನ್ನು ಅವರು ಗುರುತಿಸಿ, ಒಕ್ಕೂಟದ ಸಭೆಗಳಿಗೆ ಹಾಜರಾಗದಂತೆ ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಫೋನ್ ಕದ್ದಾಲಿಕೆ ಮಾಡದಿದ್ದರೆ, ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಮಾತನಾಡಿದ್ದೇವೆ ಎಂದು ಅವರಿಗೆ ಹೇಗೆ ತಿಳಿಯುತ್ತದೆ? ಎಂದು ಪ್ರಶ್ನಿಸುತ್ತಿದ್ದಾರೆ. ಶಿಕ್ಷಕರ ಸಂಘಗಳ ಮುಖಂಡರಿಂದ ಹಿಡಿದು ಅಂಗನವಾಡಿ ನೌಕರರ ಸಂಘದ ಮುಖಂಡರವರೆಗೂ, ನಿರುದ್ಯೋಗಿಗಳ ಪ್ರತಿನಿಧಿಗಳಿಂದ ಹಿಡಿದು ಗುತ್ತಿಗೆದಾರರ ಸಂಘದ ಸದಸ್ಯರವರೆಗೆ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ.

ಋಣಾತ್ಮಕ ಸುದ್ದಿ ಬರೀತೀರಾ?: ಪತ್ರಿಕೆಯಲ್ಲಿ ಸರ್ಕಾರದ ವಿರುದ್ಧ ಋಣಾತ್ಮಕ ಸುದ್ದಿ ಬಂದರೆ ಆ ದಿನವಿಡೀ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭಯದಲ್ಲಿ ನಡುಗುವಂತಾಗಿದೆ. ಅವರಿಗೆ ಸಿಎಂ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ದೂರವಾಣಿ ಕರೆ ಹೋಗುತ್ತದೆ. ವರದಿಯಲ್ಲಿ ಉಲ್ಲೇಖಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ವರದಿಗಾರ ಭೇಟಿಯಾದ ಸರ್ಕಾರಿ ಅಧಿಕಾರಿಯ ಬಗ್ಗೆ ವಿಚಾರಿಸಲಾಗುತ್ತದೆ. ವರದಿಗಾರರು ಸಂಪರ್ಕಿಸಿದ ಅಧಿಕಾರಿಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ವರದಿಗಾರನಿಂದ ದೂರವಾಣಿ ಕರೆ ಬಂದ ಬಳಿಕ ಆತ ತಕ್ಷಣವೇ ಉನ್ನತ ಅಧಿಕಾರಿಗೆ ಮಾಹಿತಿ ನೀಡಬೇಕು. ಇದು 4 ವರ್ಷಗಳಿಂದ ಚಾಲ್ತಿಯಲ್ಲಿರುವ ಅಘೋಷಿತ ದಬ್ಬಾಳಿಕೆಯಾಗಿದೆ. ಇದನ್ನು ಕಂಡಾಗ ವೈಸಿಪಿ ಸರ್ಕಾರಿ ಅಧಿಕಾರಿಗಳಲ್ಲಿ ಎಷ್ಟು ಭಯ ಹುಟ್ಟಿಸಿದೆ ಎಂಬುದು ವಿಧಿತವಾಗುತ್ತದೆ.

ತೆಲಂಗಾಣಕ್ಕಿಂತ ಆಂಧ್ರದಲ್ಲಿ ಭಯಾನಕ ಸ್ಥಿತಿ: ತೆಲಂಗಾಣದಲ್ಲಿ ಹಿಂದಿನ ಬಿಆರ್​ಎಸ್​ ಸರ್ಕಾರವಿದ್ದಾಗ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಮೇಲೆ ನಿಗಾ ವಹಿಸಿತ್ತು. ಅದಕ್ಕಿಂತಲೂ ಭಯಾನಕ ಸ್ಥಿತಿ ಆಂಧ್ರಪ್ರದೇಶದಲ್ಲಿ ಇದೆ. ತೆಲಂಗಾಣದಲ್ಲಿ ಡಿಎಸ್‌ಪಿ ಪ್ರಣೀತ್​ರಾವ್ ಬಂಧನ ಆಂಧ್ರಪ್ರದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ದಿನವೇ ಬಂಧಿತ ಅಧಿಕಾರಿ ತನ್ನ ನಿಯಂತ್ರಣದಲ್ಲಿದ್ದ 17 ಕಂಪ್ಯೂಟರ್‌ಗಳ ಎಲ್ಲಾ ಮಾಹಿತಿಯನ್ನು ಅಳಿಸಿ, ಅವುಗಳ ಹಾರ್ಡ್ ಡಿಸ್ಕ್‌ಗಳನ್ನು ನಾಶಪಡಿಸಿದ್ದ. ಸರ್ಕಾರವೇ ವಿಪಕ್ಷಗಳ ಫೋನ್ ಟ್ಯಾಪ್ ಮಾಡುವಂತೆ ಸೂಚಿಸಿತ್ತು ಎಂದು ಆತ ಹೇಳಿಕೊಂಡಿದ್ದಾರೆ.

ಚುನಾವಣಾ ಆಯೋಗ ಮಧ್ಯಪ್ರವೇಶಿಸಲಿ: ಸರ್ಕಾರ ಫೋನ್​ ಕದ್ದಾಲಿಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ, ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ತಾವು ಮಾಡದ ತಪ್ಪಿಗೆ ಶಿಕ್ಷೆಗೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ರಾಜಕಾರಣಿಗಳು ತಮ್ಮ ಫೋನ್ ಲೊಕೇಶನ್ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧಿಕರ ಹೆಸರಿನಲ್ಲಿ ಫೋನ್ ನಂಬರ್ ತೆಗೆದುಕೊಳ್ಳುತ್ತಿದ್ದಾರೆ.

ಟ್ರ್ಯಾಪ್​ ತಪ್ಪಿಸಲು VPN ಬಳಕೆ: ಪ್ರಮುಖ ಐಟಿ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಮಾಹಿತಿಯನ್ನು ರಕ್ಷಿಸಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್​) ಅನ್ನು ಬಳಸುತ್ತಿದ್ದಾರೆ. ಇದಕ್ಕೆ ವಾರ್ಷಿಕ ಸುಮಾರು 10,000 ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಇದು ಸ್ಥಳ ಮತ್ತು ವೈಯಕ್ತಿಕ ಗುರುತು ಪತ್ತೆಹಚ್ಚುವುದನ್ನು ತಡೆಯುತ್ತದೆ. ಇದು ಇಂಟರ್ನೆಟ್ ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಕರೆಗಳ ಸಮಯದಲ್ಲಿ ಐಪಿ ವಿಳಾಸವನ್ನು ಮರೆಮಾಡುವ ಮೂಲಕ ಭದ್ರತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: Explained: ಐಸಿಸ್‌-ಕೆ ಶುರುವಾಗಿದ್ದು ಹೇಗೆ? ಉಗ್ರ ಸಂಘಟನೆಯ ಉದ್ದೇಶ, ವ್ಯಾಪ್ತಿ ಏನು? - The Rise of ISIS K

Last Updated :Mar 26, 2024, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.