ETV Bharat / bharat

ಸಂವಿಧಾನ ರಚನೆಕಾರರ ಕನಸು ನನಸು, ಇತರ ರಾಜ್ಯಗಳೂ ಯುಸಿಸಿ ಕಾಯ್ದೆ ತರಲಿ: ಉತ್ತರಾಖಂಡ ಸಿಎಂ

author img

By ETV Bharat Karnataka Team

Published : Feb 7, 2024, 8:17 PM IST

ಏಕರೂಪ ನಾಗರಿಕ ಸಂಹಿತೆಯನ್ನು ಉತ್ತರಾಖಂಡ ಸರ್ಕಾರ ಅಂಗೀಕರಿಸಿದ್ದು, ದೇಶದ ಉಳಿದ ರಾಜ್ಯಗಳೂ ಇಂಥದ್ದೇ ಕಾನೂನನ್ನು ರೂಪಿಸಬೇಕು ಎಂದು ಸಿಎಂ ಪುಷ್ಕರ್​ ಸಿಂಗ್​ ಧಾಮಿ ಸಲಹೆ ನೀಡಿದ್ದಾರೆ.

ಉತ್ತರಾಖಂಡ ಸಿಎಂ
ಉತ್ತರಾಖಂಡ ಸಿಎಂ

ಡೆಹ್ರಾಡೂನ್​(ಉತ್ತರಾಖಂಡ): ನಮ್ಮ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ನಮ್ಮಂತೆ ದೇಶದ ಇತರ ರಾಜ್ಯಗಳು ಇದೇ ರೀತಿಯ ಕಾನೂನನ್ನು ಅಂಗೀಕರಿಸಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಹೇಳಿದರು.

ಇದು ಸಾಮಾನ್ಯ ಮಸೂದೆ ಅಲ್ಲ. ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇಂತಹ ಕಾನೂನು ತರುವುದು ಅಷ್ಟು ಸುಲಭವಲ್ಲ. ಆದರೆ, ಇದನ್ನು ಉತ್ತರಾಖಂಡ ಮಾಡಿ ತೋರಿಸಿದೆ. ಸಂವಿಧಾನ ರಚನೆಕಾರರ ನಿಜವಾದ ಕನಸು ನನಸಾಗಲಿದೆ. ಇದೇ ಹಾದಿಯಲ್ಲಿ ದೇಶದ ಇತರ ರಾಜ್ಯಗಳು ನಡೆಯಲಿ ಎಂದು ಧಾಮಿ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಸಲಹೆ ನೀಡಿದರು.

ಜೊತೆಗೆ, ಮಸೂದೆಯಲ್ಲಿನ ನಿಯಮಗಳ ಬಗ್ಗೆಯೂ ವಿವರವಾಗಿ ಹೇಳಿದ ಸಿಎಂ, ವಿರೋಧ ಪಕ್ಷದ ಶಾಸಕರೂ ಯುಸಿಸಿ ಮಸೂದೆಯನ್ನು ವಿರೋಧಿಸುತ್ತಿಲ್ಲ. ಆದರೆ, ಅದರಲ್ಲಿನ ನಿಬಂಧನೆಗಳನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ. ಅಂಗೀಕಾರದ ಮೊದಲು ಕೆಲವು ತೊಡಕುಗಳನ್ನು ಸರಿಪಡಿಸಲು ಸಲಹೆ ನೀಡಿದ್ದಾರೆ ಎಂದರು.

ಲಿವ್​ಇನ್​ ನಿಬಂಧನೆ ಖಾಸಗಿತನಕ್ಕೆ ಹೊಡೆತ: ಪ್ರಸ್ತಾವಿತ ಮಸೂದೆಯಲ್ಲಿ, ಲಿವ್-ಇನ್ ಸಂಬಂಧಗಳ ನೋಂದಣಿ ಮತ್ತು 21 ವರ್ಷದೊಳಗಿನ ಲಿವ್-ಇನ್ ಜೋಡಿಗಳು ಪೋಷಕರಿಗೆ ಮಾಹಿತಿ ನೀಡಿ ಮುಂದುವರಿಯಬೇಕು ಎಂಬ ನಿಬಂಧನೆ ಹಾಕಲಾಗಿದೆ. ಇದು ಯುವಕರ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಭುವನ್ ಚಂದ್ರ ಕಪ್ರಿ ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗಳ ಕಡ್ಡಾಯ ನೋಂದಣಿ, ಬಾಲ್ಯವಿವಾಹ ನಿಷೇಧ ಮತ್ತು ಕನಿಷ್ಠ ವಿವಾಹದ ವಯಸ್ಸು ಮುಂತಾದ ಹಲವು ನಿಬಂಧನೆಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಹೊಸದೇನೂ ಇಲ್ಲ ಎಂದು ಅವರು ಹೇಳಿದರು.

ಯುಸಿಸಿಯ ಕರಡು ಸಿದ್ಧಪಡಿಸಲು 20 ತಿಂಗಳು ತೆಗೆದುಕೊಂಡ ಸಮಿತಿಯು, ಈಗಾಗಲೇ ಅಸ್ತಿತ್ವದಲ್ಲಿದ್ದ ಕಾನೂನುಗಳನ್ನು ಯಥಾವತ್ತಾಗು ಇದರಲ್ಲಿ ನಮೂದಿಸಿದೆ ಎಂದು ಆರೋಪಿಸಿದರೆ, ಯುಸಿಸಿ ಮಸೂದೆಯು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಶಾಸಕ ಶಹಜಾದ್ ಆರೋಪಿಸಿದರು. ತಂದೆ-ತಾಯಿಯ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದ ಪಿತ್ರಾರ್ಜಿತ ಹಕ್ಕುಗಳು ನೀಡಿದ್ದು, ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಐತಿಹಾಸಿಕ ನಿರ್ಧಾರ: ಇನ್ನೊಬ್ಬ ಶಾಸಕ ಪ್ರೀತಮ್ ಸಿಂಗ್, ಯುಸಿಸಿಯ ನಿಬಂಧನೆಗಳ ಅನ್ವಯವನ್ನು ಪ್ರಶ್ನಿಸಿದರು. ರಾಜ್ಯದ ಹೊರಗೆ ವಾಸಿಸುವ ಉತ್ತರಾಖಂಡಕ್ಕೆ ಸೇರಿದ ಜನರಿಗೆ ನಿಬಂಧನೆಗಳು ಅನ್ವಯಿಸುತ್ತವೆ ಎಂದು ಮಸೂದೆಯಲ್ಲಿ ಅಡಕವಾಗಿದೆ. ಆದರೆ, ಅದು ಹೇಗೆ ಪರಿಣಾಮ ಬೀರುತ್ತದೆ?. ಲಿವ್ ಇನ್ ಸಂಬಂಧದ ಬಗ್ಗೆ ಮಸೂದೆಯಲ್ಲಿ ರೂಪಿಸಿರುವ ನಿಬಂಧನೆಗಳು 'ಮೂರ್ಖ ಕಲ್ಪನೆ' ಎಂದು ಟೀಕಿಸಿದರು.

ಬಿಜೆಪಿ ಶಾಸಕ ಮುನ್ನಾ ಸಿಂಗ್ ಚೌಹಾಣ್, ಯುಸಿಸಿ ಮಸೂದೆಯು ದೇಶವನ್ನು ಕಟ್ಟಿದ ಮಹಾತ್ಮರ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಉತ್ತರಾಖಂಡದಂತಹ ಸಣ್ಣ ರಾಜ್ಯವು ಸಂವಿಧಾನ ರಚನೆಕಾರರು ರೂಪಿಸಿದ ಶಾಸನವನ್ನು ಜಾರಿಗೆ ತರಲು ಮುಂದಾಗಿರುವುದು ಐತಿಹಾಸಿಕ ನಿರ್ಧಾರ ಎಂದು ವಿಧೇಯಕವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಯುಸಿಸಿ ಮಸೂದೆ ಪಾಸ್​: ರಾಜ್ಯಪಾಲರ ಅಂಕಿತ ಮಾತ್ರ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.