ETV Bharat / bharat

ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್​ - Supreme Court

author img

By ETV Bharat Karnataka Team

Published : May 7, 2024, 4:01 PM IST

ಅಬಕಾರಿ ನೀತಿ ಹಗರಣದಲ್ಲಿ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಸುಪ್ರೀಂಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್ (ETV Bharat)

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಿಗೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನಡೆ ಉಂಟಾಗಿದೆ. ಸಿಎಂಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದೆ. ಗುರುವಾರ ಅಥವಾ ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಜಾಮೀನು ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್​ ವಿರುದ್ಧ ದೆಹಲಿ ಸಿಎಂ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಂಜೀವ್​ ಖನ್ನಾ, ನ್ಯಾಯಮೂರ್ತಿ ದೀಪಾಂಕರ್​ ದತ್ತ ನೇತೃತ್ವದ ಪೀಠವೂ ಜಾಮೀನು ನೀಡಲು ಒಪ್ಪಲಿಲ್ಲ.

ವಿಚಾರಣೆಯಲ್ಲಿ ನಡೆದ ವಾದ ಸರಣಿ: ದೆಹಲಿ ಸಿಎಂಗೆ ಜಾಮೀನು ನೀಡಿದರೆ ಅವರು ಸಿಎಂ ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಮೇಲೆ ಗಂಭೀರ ಆರೋಪ ಇರುವಾಗ ಹೇಗೆ ಅವರು ಸಿಎಂ ಕಚೇರಿಗೆ ತೆರಳಿ ಕೆಲಸ ನಿರ್ವಹಿಸುತ್ತಾರೆ. ಇದು ಇತರ ಪ್ರಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿತು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಎಂ ಸಿಂಘ್ವಿ, ದೆಹಲಿಯಲ್ಲಿ ಮುಖ್ಯಮಂತ್ರಿ ಇಲ್ಲದ ಸರ್ಕಾರ ನಡೆಯುತ್ತಿದೆ. ಇದನ್ನು ಹೀಗೆಯೇ ಮುಂದುವರಿಸಬೇಕೆ?. ಜಾಮೀನು ಸಿಕ್ಕಲ್ಲಿ ಅವರು ಯಾವುದೇ ಕಡತಗಳಿಗೆ ಸಹಿ ಮತ್ತು ನಿರ್ದೇಶನ ನೀಡುವುದಿಲ್ಲ ಎಂದು ಆಶ್ವಾಸನೆ ನೀಡಿದರು.

ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಸಿಎಂ ಕೇಜ್ರಿವಾಲ್​ ಅವರು ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳಬೇಕು. ಆರೋಪಿ ಸ್ಥಾನದಲ್ಲಿರುವ ಅವರು ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ. ಅವರಿಗೆ ಜಾಮೀನೂ ನೀಡಬಾರದು ಎಂದು ವಾದಿಸಿದರು.

ಅಪರಾಧದ ಹಣ ಹೆಚ್ಚಳ ಹೇಗಾಯ್ತು?: ದೆಹಲಿ ಅಬಕಾರಿ ನೀತಿ ಹಗರಣದ ಪ್ರಮಾಣ ಮೊದಲು ₹ 100 ಕೋಟಿ ಇತ್ತು. ಬಳಿಕ 2-3 ವರ್ಷಗಳಲ್ಲಿ ಅದು 1,100 ಕೋಟಿ ರೂಪಾಯಿ ಎಂದು ವಾದಿಸಲಾಗಿದೆ. ಅದು ಹೇಗೆ ಹಗರಣ ಮೊತ್ತ ಹೆಚ್ಚಳವಾಯಿತು ಎಂದು ಜಾರಿ ನಿರ್ದೇಶನಾಲಯವನ್ನು ಕೋರ್ಟ್​ ಪ್ರಶ್ನಿಸಿತು.

100 ಕೋಟಿ ನಗದನ್ನು ಹವಾಲಾ ಮಾರ್ಗಗಳ ಮೂಲಕ ವರ್ಗಾಯಿಸಲಾಗಿದೆ. ಇದನ್ನು ಇತರ ರಾಜ್ಯಗಳಲ್ಲಿ ವ್ಯಯಿಸಲಾಗಿದೆ. ಒಟ್ಟು ಹಗರಣದ ಮೊತ್ತ 1,100 ರೂಪಾಯಿ ಎಂದು ಹೆಚ್ಚುವರಿ ಸಾಲಿಸಿಟರ್​ ಜನರಲ್​ ತಿಳಿಸಿದರು. ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಮಾರ್ಚ್​ 21 ರಂದು ಬಂಧಿಸಿದ್ದರು.

ಇದನ್ನೂ ಓದಿ: ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದ ಆಪ್​: ಆರೋಪ ನಿರಾಕರಿಸಿದ ಜೈಲಧಿಕಾರಿಗಳು - Aravind Kejriwal in jail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.