ETV Bharat / bharat

ಸಾರ್ವಜನಿಕ ಆಸ್ತಿಗೆ ನಷ್ಟವಾದರೆ ಪ್ರತಿಭಟನಾಕಾರರೇ ಪಾವತಿಸಬೇಕು: ಅಂಬಾಲಾ ಪೊಲೀಸರ ಎಚ್ಚರಿಕೆ

author img

By ETV Bharat Karnataka Team

Published : Feb 23, 2024, 7:49 AM IST

Updated : Feb 23, 2024, 10:07 AM IST

ರೈತರ ಪ್ರತಿಭಟನೆ  farmers protest  ದೆಹಲಿ ಚಲೋ  ಅಂಬಾಲಾ ಪೊಲೀಸ್  Haryana Police
ರೈತರ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ನಷ್ಟವಾದರೆ ಪ್ರತಿಭಟನಾಕಾರರು ಪಾವತಿಸಬೇಕು: ಅಂಬಾಲಾ ಪೊಲೀಸರು ಎಚ್ಚರಿಕೆ

ಹರಿಯಾಣದ ಗಡಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಗೆ ಸಂಬಂಧಿಸಿದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಈ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ರೈತ ಮುಖಂಡರ ವಿರುದ್ಧ ಎನ್‌ಎಸ್‌ಎ ಅಡಿ ಕ್ರಮ ಕೈಗೊಳ್ಳಲಾಗಿದೆ. ಆಂದೋಲನದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಉಂಟಾದ ಹಾನಿಯನ್ನು ಸಹ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅಂಬಾಲಾ ಪೊಲೀಸರು ತಿಳಿಸಿದ್ದಾರೆ.

ಅಂಬಾಲಾ (ಹರಿಯಾಣ): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಅಂಬಾಲಾ ಜಿಲ್ಲೆಯ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ಮುಖಂಡರ ವಿರುದ್ಧ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ. ಅಪರಾಧ ಚಟುವಟಿಕೆಗಳನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಆಡಳಿತ ಮಂಡಳಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಫೆಬ್ರವರಿ 13ರಿಂದ 'ದೆಹಲಿ ಚಲೋ' ಮೆರವಣಿಗೆಗೆ ಸಂಬಂಧಿಸಿದಂತೆ ಹರಿಯಾಣದ ಗಡಿಯಲ್ಲಿ ಹಾಕಲಾದ ಬ್ಯಾರಿಕೇಡ್‌ಗಳನ್ನು ಕಿತ್ತೊಗೆಯಲು ಪ್ರತಿಭಟನಾಕಾರರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಂಬಾಲಾ ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ವೇಳೆ, ಪ್ರತಿಭಟನಾಕಾರರು ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಲಾಟೆ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುತ್ತಿದ್ದಾರೆ. ಈ ವೇಳೆಯಲ್ಲಿ ಕಿಡಿಗೇಡಿಗಳಿಂದ ಸರ್ಕಾರಿ ಹಾಗೂ ಖಾಸಗಿ ಆಸ್ತಿಗೆ ಸಾಕಷ್ಟು ಹಾನಿ ಉಂಟಾಗಿದೆ. ಈ ಚಳವಳಿಯಲ್ಲಿ ಸುಮಾರು 30 ಪೊಲೀಸರು ಗಾಯಗೊಂಡಿದ್ದಾರೆ. ಒಬ್ಬ ಪೊಲೀಸ್ ಪೇದೆಗೆ ಮೆದುಳಿನ ರಕ್ತಸ್ರಾವವಾಗಿದ್ದು, ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.

ಶಾಂತಿ ಕದಡಲು ನಿರಂತರವಾಗಿ ಪೋಸ್ಟ್​: ಈ ಆಂದೋಲನದಲ್ಲಿ ಹಲವು ರೈತ ಮುಖಂಡರು ಸಕ್ರಿಯ ಪಾತ್ರ ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ಪ್ರಚೋದನಕಾರಿ ಭಾಷಣ ಮಾಡುತ್ತಾ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಶಾಂತಿ ಕದಡಲು ನಿರಂತರವಾಗಿ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ ಎಂದು ಅಂಬಾಲಾ ಪೊಲೀಸರು ತಿಳಿಸಿದ್ದಾರೆ.

ಅಪರಾಧ ಚಟುವಟಿಕೆ ತಡೆಗೆ ಕ್ರಮ: ಅಂಬಾಲಾ ಪೊಲೀಸರ ಪ್ರಕಾರ, "ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ರೈತ ಸಂಘಟನೆಗಳ ಪದಾಧಿಕಾರಿಗಳ ಗೃಹಬಂಧನದ ಕ್ರಮವನ್ನು ಆಡಳಿತವು ರಾಷ್ಟ್ರೀಯ ಭದ್ರತಾ ಕಾಯಿದೆ 1980 ರ ಸೆಕ್ಷನ್ 2 (3) ರ ಅಡಿ ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಆಂದೋಲನದ ಸಮಯದಲ್ಲಿ ಇದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬಹುದು. ಯಾವುದೇ ರೀತಿ ಸಾಮಾಜಿಕ ಸಾಮರಸ್ಯ ಕದಡಬಾರದು" ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಆಸ್ತಿ ಹಾನಿಯಾದರೆ ನಷ್ಟ ಭರಿಸಲಾಗುವುದು - ಅಂಬಾಲಾ ಪೊಲೀಸ್: ಪ್ರತಿಭಟನೆ ವೇಳೆಯಲ್ಲಿ ಪ್ರತಿಭಟನಾಕಾರರಿಂದ ಸರಕಾರಿ ಹಾಗೂ ಖಾಸಗಿ ಆಸ್ತಿ ಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರಿಂದ ಆಗಿರುವ ಸರ್ಕಾರಿ ಮತ್ತು ಖಾಸಗಿ ಆಸ್ತಿ ಹಾನಿಯ ಕುರಿತು ಅಂದಾಜು ಮಾಡಲಾಗುತ್ತಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984 (ಪಿಡಿಪಿಪಿ ಕಾಯ್ದೆ) ನಲ್ಲಿ ಸುಪ್ರೀಂ ಕೋರ್ಟ್‌ನ ನಿಬಂಧನೆಗಳ ಅಡಿ ತಿದ್ದುಪಡಿ ಇದೆ. ಸಾರ್ವಜನಿಕ ಆಸ್ತಿ ಹಾನಿಯಾದರೆ, ಪ್ರತಿಭಟನಾಕಾರರು ಹಾಗೂ ಪ್ರತಿಭಟನೆ ಆಯೋಜಿಸಿದ ಸಂಘಟನೆಗಳ ಮುಖಂಡರು ಜವಾಬ್ದಾರರಾಗಿರುತ್ತಾರೆ.

ಹರಿಯಾಣದ ಸಾರ್ವಜನಿಕ ಆಡಳಿತದ ಆಸ್ತಿ ವಸೂಲಾತಿ ಕಾಯಿದೆ 2021 ರ ಅಡಿ ಈ ಆಂದೋಲನದ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಹಾನಿಯನ್ನು ಉಂಟು ಮಾಡಿದ ಪ್ರತಿಭಟನಾಕಾರರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸಾರ್ವಜನಿಕ ಆಸ್ತಿಯ ನಷ್ಟ ಸರಿದೂಗಿಸಲು ಅವಕಾಶವಿದೆ ಎಂದು ಪೊಲೀಸ್​ ಇಲಾಖೆಯು ಈ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದೆ. ಈ ಆಂದೋಲನದ ವೇಳೆಯಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿ ಆಸ್ತಿ ನಷ್ಟ ಅನುಭವಿಸಿದ್ದರೆ, ಆಗ ಅವರು ಇಲಾಖೆಗೆ ನಷ್ಟದ ವಿವರಗಳನ್ನು ನೀಡಬಹುದು ಎಂದೂ ಅಂಬಾಲಾ ಪೊಲೀಸರು ತಿಳಿಸಿದ್ದಾರೆ.

ಇಂದು ಕಪ್ಪು ಶುಕ್ರವಾರ ಆಚರಣೆ: ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್​ ಪ್ರತಿಕ್ರಿಯಿಸಿ, ''ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಖಾನೌರಿ ಬಾರ್ಡರ್ ಕ್ರಾಸಿಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ರೈತರೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನೇತೃತ್ವದಲ್ಲಿ ಶುಕ್ರವಾರ 'ಕಪ್ಪು ಶುಕ್ರವಾರ' ಆಚರಿಸಲಾಗುವುದು. ನಾವು ನಿನ್ನೆಯೂ (ಗುರುವಾರ) ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ (SKM) ಅಧಿಕೃತ ಪತ್ರಿಕಾ ಹೇಳಿಕೆ ಪ್ರಕಾರ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಮತ್ತು ದೇಶದಲ್ಲಿ ರೈತರ ಚಳವಳಿಯ ದಮನದ ವಿರುದ್ಧ ಭಾರತದಾದ್ಯಂತ ರೈತರ ಬೃಹತ್ ಸಮಾವೇಶ ಆಯೋಜಿಸಲು ಕರೆ ನೀಡಿದೆ.

ಇದನ್ನೂ ಓದಿ: ರಾತ್ರಿಯೇ ಶಿವಪುರ ಮಾರ್ಗ ಪರಿಶೀಲಿಸಿದ ಪ್ರಧಾನಿ ಮೋದಿ: ವಾರಾಣಸಿಯಲ್ಲಿ ಇಂದು ಹಲವು ಯೋಜನೆಗಳಿಗೆ ಚಾಲನೆ

Last Updated :Feb 23, 2024, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.