ETV Bharat / bharat

ಫೋನ್​ ಕದ್ದಾಲಿಕೆ ಕೇಸ್​: ಪಕ್ಷಕ್ಕಾಗಿ ಟಾಸ್ಕ್​ಫೋರ್ಸ್​ ದುರ್ಬಳಕೆ, ಪೊಲೀಸ್​ ವಾಹನಗಳಲ್ಲಿ ಹಣ ಸಾಗಣೆ - Phone tapping case

author img

By ETV Bharat Karnataka Team

Published : Mar 30, 2024, 5:31 PM IST

ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಚ್ಚರಿಯ ಅಂಶಗಳು ಒಂದೊಂದಾಗಿ ಬಯಲಾಗುತ್ತಿವೆ. ರಾಜಕೀಯ ಪಕ್ಷಕ್ಕಾಗಿ ಟಾಸ್ಕ್​ಫೋರ್ಸ್​ ಅನ್ನೇ ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಫೋನ್​ ಕದ್ದಾಲಿಕೆ ಕೇಸ್
ಫೋನ್​ ಕದ್ದಾಲಿಕೆ ಕೇಸ್

ಹೈದರಾಬಾದ್: ತೆಲಂಗಾಣದಲ್ಲಿ ಸಂಚಲನ ಮೂಡಿಸಿರುವ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಈಗಾಗಲೇ ಓರ್ವ ಮಾಜಿ ಟಾಸ್ಕ್​ಫೋರ್ಸ್​ ಅಧಿಕಾರಿ ಸೇರಿ ಮೂವರು ಹಿರಿಯ ಪೊಲೀಸ್​ ಅಧಿಕಾರಿಗಳು ಬಂಧಿತರಾಗಿದ್ದು, ಹೆಚ್ಚುವರಿ ಎಸ್​ಪಿಗಳಾದ ಭುಜಂಗರಾವ್ ಮತ್ತು ತಿರುಪತಣ್ಣ ಅವರನ್ನು ತನಿಖಾ ತಂಡ ಮತ್ತೆ ಕಸ್ಟಡಿಗೆ ತೆಗೆದುಕೊಂಡಿದೆ.

ಈ ಇಬ್ಬರು ಆರೋಪಿಗಳು ನೀಡುವ ಹೇಳಿಕೆ ಆಧಾರದ ಮೇಲೆ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ, ಶುಕ್ರವಾರ ಬಂಧನಕ್ಕೊಗಾಗಿರುವ ಟಾಸ್ಟ್​ಫೋರ್ಸ್ ಮಾಜಿ ಡಿಸಿಪಿ ರಾಧಾಕಿಶನ್ ರಾವ್ ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ನಾಂಪಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.

ಅಧಿಕಾರಿಗಳ ನಡುವೆ ಸಂಪರ್ಕ: ರಾಧಾಕಿಶನ್​ ರಾವ್​ ಅವರು ನೀಡುವ ಹೇಳಿಕೆ ಆಧರಿಸಿ ಪ್ರಕರಣದಲ್ಲಿ ಹೆಚ್ಚುವರಿ ಎಸ್​ಪಿಗಳ ಕೈವಾಡದ ಬಗ್ಗೆ ತನಿಖೆ ನಡೆಯಲಿದೆ. ಎಸ್‌ಐಬಿ ಮಾಜಿ ಮುಖ್ಯಸ್ಥ ಪ್ರಭಾಕರ ರಾವ್, ಸಿಐಬಿಯಲ್ಲಿ ಅಧಿಕಾರಿಗಳಾಗಿದ್ದ ಭುಜಂಗರಾವ್ ಮತ್ತು ಪ್ರಣೀತ್ ರಾವ್ ಜೊತೆ ತಿರುಪತಣ್ಣ ಅವರ ಅವ್ಯವಹಾರದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಅಧಿಕಾರಿಗಳು ಉನ್ನತ ಸ್ಥಾನದಲ್ಲಿದ್ದುಕೊಂಡು ಅನೇಕ ರಾಜಕೀಯ ವ್ಯಕ್ತಿಗಳು, ಸಮಾಜದ ಗಣ್ಯರ ಫೋನ್‌ಗಳ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಯಪಡೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ರಾಧಾಕಿಶನ್ ರಾವ್ ಅವರು ಸಿಬ್ಬಂದಿಯನ್ನು ಅನಧಿಕೃತ ಚಟುವಟಿಕೆಗಳಿಗೆ ಬಳಸಿಕೊಂಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್​​ಎಸ್​ ಪಕ್ಷಕ್ಕೆ ಲಾಭವಾಗುವಂತೆ ನಡೆದುಕೊಂಡಿದ್ದರು. ಸೂಚಿತ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲಗಳು ದೊರಕುವಂತೆ ಎಸ್​ಐಬಿ ತಂಡವನ್ನು ನಿಯೋಜಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಎಸ್‌ಐಬಿಯ ಮಾಜಿ ಡಿಎಸ್‌ಪಿ ಪ್ರಣೀತ್ ರಾವ್ ಅವರು ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಟಾಸ್ಕ್​ಫೋರ್ಸ್​ ವಾಹನದಲ್ಲಿ ಹಣ ಸಾಗಣೆ: ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಓಎಸ್‌ಡಿ ಮಾಜಿ ಅಧಿಕಾರಿ ರಾಧಾಕಿಶನ್ ರಾವ್, ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನು ಅನಧಿಕೃತ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ವಿಧಾನಸಭೆ ಚುನಾವಣೆ ವೇಳೆ ಸೂಚಿತ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಲು ಮತ್ತು ಚುನಾವಣೆ ಖರ್ಚಿಗಾಗಿ ಹಣ ಸಾಗಾಟ ಮಾಡಲು ಟಾಸ್ಕ್​ಫೋರ್ಸ್​ ವಾಹನಗಳನ್ನು ಬಳಸಿಕೊಂಡಿದ್ದರು ಎಂಬ ಅಚ್ಚರಿಯ ಸಂಗತಿ ತಿಳಿದುಬಂದಿದೆ.

ಹೈದರಾಬಾದ್ ನಿಂದ ವಿವಿಧ ಪ್ರದೇಶಗಳಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಹಣ ರವಾನೆ ಮಾಡುವಲ್ಲಿ ರಾಧಾಕಿಶನ್ ರಾವ್ ಅವರ ತಂಡ ಪ್ರಮುಖ ಪಾತ್ರ ವಹಿಸಿತ್ತು. ಪೊಲೀಸ್ ವಾಹನಗಳಲ್ಲಿ ಹಣ ಸಾಗಣೆ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಈ ಸಂಚು ರೂಪಿಸಲಾಗಿತ್ತು.

ಇದನ್ನೂ ಓದಿ: ಫೋನ್​ ಟ್ಯಾಪಿಂಗ್​ ಪ್ರಕರಣದಲ್ಲಿ ಪ್ರಮುಖ ವಿಕೆಟ್​ ಔಟ್​: ಟಾಸ್ಕ್​ಫೋರ್ಸ್​ ಮಾಜಿ ಒಎಸ್​ಡಿ ಅರೆಸ್ಟ್ - Phone Tapping Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.