ETV Bharat / bharat

ವಿರೋಧ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲು, ಮುಸ್ಲಿಮರಿಗೆ ಮೀಸಲಾತಿ: ಮೋದಿ - PM Narendra Modi

author img

By PTI

Published : May 27, 2024, 10:37 AM IST

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭಾನುವಾರ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ವಿರುದ್ಧ ವಾಗ್ದಾಳಿ ನಡೆಸಿದರು.

Lok Sabha Election 2024  reservation for Muslims  INDIA bloc
ಪ್ರಧಾನಿ ಮೋದಿ (IANS)

ಮಿರ್ಜಾಪುರ(ಉತ್ತರ ಪ್ರದೇಶ): ''ಇಂಡಿಯಾ(I.N.D.I.A) ಮೈತ್ರಿಕೂಟ ಕೋಮುವಾದಿ ಮತ್ತು ಜಾತಿವಾದಿಯಾಗಿದೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಅವರು ಸಂವಿಧಾನ ಬದಲಿಸಲು ನಿರ್ಧರಿಸಿದ್ದಾರೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದರು.

ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಅಪ್ನಾ ದಳದ ಅಭ್ಯರ್ಥಿ ಅನುಪ್ರಿಯಾ ಪಟೇಲ್ ಮತ್ತು ರಾಬರ್ಟ್ಸ್‌ಗಂಜ್ ಕ್ಷೇತ್ರದ ಅಭ್ಯರ್ಥಿ ರಿಂಕಿ ಕೋಲ್ ಅವರ ಪರವಾಗಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

"ಇಂಡಿಯಾ ಮೈತ್ರಿಯ ನಾಯಕರು ಕಟ್ಟಾ ಕೋಮುವಾದಿ, ಜಾತಿವಾದಿ ಮತ್ತು ಕುಟುಂಬವಾದಿಗಳಾಗಿದ್ದಾರೆ. ಕೇಂದ್ರದಲ್ಲಿ ಅವರ ಸರ್ಕಾರ ರಚನೆಯಾದರೆ ಇದೇ ತತ್ವಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಮಾಜವಾದಿ ಪಕ್ಷವು ಯಾದವ ಸಮುದಾಯದ ಜನರ ಪ್ರತಿಭೆಯನ್ನು ಗುರುತಿಸುವುದರಲ್ಲಿ ನಿರ್ಲಕ್ಷ್ಯವೆಸಗಿದೆ. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ'' ಎಂದು ದೂರಿದರು.

"ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟದ ಗೆಲುವಿಗಾಗಿ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಗಡಿಯಾಚೆಗಿನ ಜಿಹಾದಿಗಳು ಈ ಒಕ್ಕೂಟದವರನ್ನು ಬೆಂಬಲಿಸುತ್ತಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್ 'ವೋಟ್ ಜಿಹಾದ್'ಗೆ ಮನವಿ ಮಾಡುತ್ತಿವೆ'' ಎಂದರು.

"ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಪುನಃ ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಜೊತೆಗೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕೂಡಾ ರದ್ದುಗೊಳಿಸುತ್ತಾರೆ. ಇದು ಯಾರ ಅಜೆಂಡಾ ಎಂಬುದನ್ನು ನೀವೇ ಯೋಚಿಸಿ ಎಂದು ನೆರೆದಿದ್ದ ಸಾರ್ವಜನಿಕರನ್ನು ಪ್ರಶ್ನಿಸಿದ ಮೋದಿ, ದೇಶ ವಿರೋಧಿ ಶಕ್ತಿಗಳಿಗೆ ಬೇಕಾಗಿರುವುದು ಇದೇ" ಎಂದು ಹೇಳಿದರು.

''ವಿರೋಧ ಪಕ್ಷಗಳು ಮೂರು ದೊಡ್ಡ ಪಿತೂರಿಗಳನ್ನು ಮಾಡುತ್ತಿವೆ. ಮೊದಲನೆಯದು, ಸಂವಿಧಾನ ಬದಲಾಯಿಸುವುದು. ಈ ಮೂಲಕ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅವರ ಮೂಲ ಉದ್ದೇಶ. ಎರಡನೆಯದು, ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಕೊನೆಗೊಳಿಸುವುದು. ಮೂರನೆಯದು, ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ನೀಡುವುದು'' ಎಂದರು.

ಬಹುಸಂಖ್ಯಾತರು ಎರಡನೇ ದರ್ಜೆಯ ನಾಗರಿಕರು: "ಒಬಿಸಿ ಮೀಸಲಾತಿಯನ್ನು ತಪ್ಪಿಸಲು ಅವರು ನಿರ್ಧರಿಸಿದ್ದಾರೆ. ಮುಸ್ಲಿಂ ಜಾತಿಗಳನ್ನು ರಾತ್ರೋರಾತ್ರಿ ಒಬಿಸಿ ಎಂದು ಘೋಷಿಸುತ್ತಾರೆ. ಇತ್ತೀಚೆಗೆ ಕಲ್ಕತ್ತಾ ಹೈಕೋರ್ಟ್ 77 ಮುಸ್ಲಿಂ ಜಾತಿಗಳಿಗೆ ಒಬಿಸಿ ಮೀಸಲಾತಿ ತಿರಸ್ಕರಿಸಿದೆ. ಇದೀಗ ಎಸ್‌ಪಿ, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದವರು ಭಾರತದಲ್ಲಿ ಬಹುಸಂಖ್ಯಾತ ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸುತ್ತಿದ್ದಾರೆ'' ಎಂದು ಮೋದಿ ಟೀಕಿಸಿದರು.

ಇದನ್ನೂ ಓದಿ: ಬಂಗಾಳದಲ್ಲಿ 135 ಕಿ.ಮೀ ವೇಗವಾಗಿ ಬೀಸುತ್ತಿರುವ ಗಾಳಿ: ಕರಾವಳಿ ಪ್ರದೇಶಗಳಿಗೆ 'ರೆಮಲ್' ಚಂಡಮಾರುತ ಭೀತಿ - cyclone remal update

ETV Bharat Logo

Copyright © 2024 Ushodaya Enterprises Pvt. Ltd., All Rights Reserved.