ETV Bharat / bharat

ಸ್ನೇಹಿತರಿಂದಲೇ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್: ಪೋಷಕರಿಂದ ಹಣ ಸುಲಿಗೆ ಮಾಡಿ ಕೊಲೆ - Murder Case

author img

By ETV Bharat Karnataka Team

Published : Apr 8, 2024, 1:06 PM IST

PUNE  College girl kidnapped  Maharashtra Police
ಸ್ನೇಹಿತರಿಂದಲೇ ಕಾಲೇಜು ಹುಡುಗಿಯ ಕಿಡ್ನಾಪ್: ಹಣ ಸುಲಿಗೆ ಮಾಡಿ ಕೊಲೆಗೈದ ಮೂವರು ಆರೋಪಿಗಳ ಬಂಧನ

ಸ್ನೇಹಿತರೇ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಹಣ ಸುಲಿಗೆ ಮಾಡಿ ಕೊಲೆಗೈದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುಣೆ (ಮಹಾರಾಷ್ಟ್ರ): ಪುಣೆ ಏರ್​​ಪೋರ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರೇ ಕಿಡ್ನಾಪ್ ಮಾಡಿ, ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯನ್ನು ಕಿಡ್ನಾಪ್​ ಮಾಡಿದ ಆರೋಪಿಗಳು, ಆಕೆಯ ಪೋಷಕರನ್ನು ಬೆದರಿಸಿ ಹಣ ಪಡೆದಿದ್ದರು. ವಿದ್ಯಾಭ್ಯಾಸಕ್ಕಾಗಿ ಲಾತೂರ್‌ನಿಂದ ಪುಣೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರೇ ಹಣ ಸುಲಿಗೆ ಮಾಡಲು ಅಪಹರಿಸಿದ್ದರು. ಹಣ ಪಡೆದ ಬಳಿಕ ಯುವತಿಯನ್ನು ಕೊಲೆ ಮಾಡಿದ್ದರು.

ಮೃತ ಯುವತಿಯ ತಂದೆ ಸೂರ್ಯಕಾಂತ್ ಜ್ಞಾನೋಬಾ ಸುಡೆ (49) ಅವರು ಮಾರ್ಚ್ 30 ರಂದು ಪುಣೆಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್​ ಕೇಸ್​ ದಾಖಲಿಸಿದ್ದರು. ಭಾಗ್ಯಶ್ರೀ ಕೊಲೆಯಾದ ಲಾತೂರ್ ಮೂಲದ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಂ ಫುಲಾವಾಲೆ, ಸಾಗರ್ ಜಾಧವ್ ಮತ್ತು ಸುರೇಶ್ ಇಂದೋರ್​ನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಮಾಹಿತಿ: ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಲಾತೂರ್ ಮೂಲದ ಭಾಗ್ಯಶ್ರೀ ಪುಣೆಯ ವಾಘೋಲಿ ಪ್ರದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದರು. ಮಾರ್ಚ್ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ವಿಮಾನ ನಿಲ್ದಾಣ ಪ್ರದೇಶದ ಫೀನಿಕ್ಸ್ ಮಾಲ್‌ ಸಮೀಪ ನಾಪತ್ತೆಯಾಗಿದ್ದಳು. ಈ ನಡುವೆ ಯುವತಿ ಸಂಪರ್ಕ ಇಲ್ಲದ ಕಾರಣ ಆಕೆಯ ಪೋಷಕರು ಪುಣೆಗೆ ಆಗಮಿಸಿದರು. ಯುವತಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆಕೆಯ ಪೋಷಕರ ಮೊಬೈಲ್ ಫೋನ್‌ಗೆ ಬೆದರಿಕೆಯ ಸಂದೇಶವೂ ಬಂದಿತ್ತು. 9 ಲಕ್ಷ ರೂ. ನೀಡಿ, ಇಲ್ಲವೇ ಯುವತಿಯನ್ನು ಸಾಯಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆದರೆ, ತಂದೆ ಹಣ ಕೊಟ್ಟರೂ ಯುವತಿ ಮಾತ್ರ ಜೀವಂತ ಸಿಗಲಿಲ್ಲ.

ಶವ ಹೂತು ಹಾಕಿದ್ದ ಆರೋಪಿಗಳು: ಆರೋಪಿ ಶಿವಂ ಮೃತ ಯುವತಿಯ ಸ್ನೇಹಿತನಾಗಿದ್ದ. ಆರೋಪಿಗಳು ಜೂಮ್ ಕಾರ್ ಆ್ಯಪ್‌ನಿಂದ ಕಾರ್​ನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಮಾರ್ಚ್ 30ರ ರಾತ್ರಿ ಆರೋಪಿಗಳು ಭಾಗ್ಯಶ್ರೀಯನ್ನು ಅಪಹರಿಸಿ ಕೊಲೆ ಮಾಡಿದ್ದರು. ಅದರ ನಂತರ, ಸಾಕ್ಷ್ಯ ನಾಶಪಡಿಸಲು ಶವವನ್ನು ನಗರ ಜಿಲ್ಲೆಯ ಸೂಪಾ ಪ್ರದೇಶದ ಹೊಲದಲ್ಲಿ ಹೂತು ಹಾಕಿದ್ದರು ಎಂದು ವೃತ್ತ 4ರ ಉಪ ಪೊಲೀಸ್ ಆಯುಕ್ತ ವಿಜಯಕುಮಾರ ಮಗರ್ ತಿಳಿಸಿದ್ದಾರೆ.

ಹತ್ಯೆಯ ನಂತರ ಆರೋಪಿಗಳು ಯುವತಿಯ ಕುಟುಂಬದಿಂದ ಆಕೆಯ ಮೊಬೈಲ್ ಫೋನ್‌ನಿಂದ 9 ಲಕ್ಷ ರೂ. ಹಾಕಿಸಿಕೊಂಡಿದ್ದರು. ಯುವತಿಯನ್ನು ವಾಪಸ್ ಕಳುಹಿಸಿದರೆ ತಮ್ಮ ಹೆಸರು ಹೇಳಬಹುದು ಎನ್ನುವ ಕಾರಣಕ್ಕೆ ಮೂವರು ಸೇರಿ ಸ್ನೇಹಿತೆಯನ್ನೇ ಕೊಂದಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಕರಣ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದಿವಂಗತ ಸಂಗೀತಗಾರ ರಶೀದ್ ಖಾನ್ ಮತಯಾಚನೆ! ಗೊಂದಲ ಮೂಡಿಸಿದ ಇನ್​ಸ್ಟಾಗ್ರಾಂ ಚುನಾವಣಾ ಪೋಸ್ಟ್‌ - Late Rashid Khan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.