ನವದೆಹಲಿ: ಡಿಎಂಕೆ ಮತ್ತು ಎಐಡಿಎಂಕೆ ಹಿಡಿತ ಇರುವ ತಮಿಳುನಾಡು ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ವೇಲಾಯುಧನ್ ಅವರು ಬುಧವಾರ ವಯೋಸಹಜವಾಗಿ ದೈವಾಧೀನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಕೇಂದ್ರ ಸಚಿವ, ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾದ ಎಲ್.ಮುರುಗನ್ ಸೇರಿದಂತೆ ಹಲವು ಬಿಜೆಪಿ ನಾಯಕರು ವೇಲಾಯುಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಿಜೆಪಿಯ ಮೊದಲ ಶಾಸಕ ಕೀರ್ತಿ: ಮಾಜಿ ಶಾಸಕರಾದ ವೇಲಾಯುಧನ್ ಅವರು, 1996 ರಲ್ಲಿ ಕನ್ಯಾಕುಮಾರಿ ಜಿಲ್ಲೆಯ ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿಯಾದ ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ಬಾಲ ಜನಾಧಿಪತಿ ಅವರನ್ನು 4,540 ಮತಗಳ ಅಂತರದಿಂದ ಸೋಲಿಸಿದ್ದರು. ಅವರು ಆರ್ಎಸ್ಎಸ್ನ ಸಾಮಾಜಿಕ ಸೇವಾ ಸಂಸ್ಥೆಯಾದ ಸೇವಾ ಭಾರತಿಯೊಂದಿಗೆ ಸಂಬಂಧ ಹೊಂದಿದ್ದರು. 1975 ರಿಂದ 1977 ರವರೆಗೆ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಕೂಡ ಭಾಗವಹಿಸಿದ್ದರು.
ಬಿಜೆಪಿ ನಾಯಕರ ಸಂತಾಪ: ವೇಲಾಯುಧನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಮೊದಲ ಬಿಜೆಪಿ ಶಾಸಕರಾಗಿದ್ದ ತಿರು ಸಿ.ವೇಲಾಯುಧನ್ ಅವರ ನಿಧನ ದುಃಖ ತಂದಿದೆ. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ, ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರಿಗೆ ತಲುಪಿಸಿದ್ದರು. ಬಡವರು ಮತ್ತು ದೀನದಲಿತರ ಬಗ್ಗೆ ಅವರ ಕಾಳಜಿ ಅಪಾರ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಮಾಜಿ ಶಾಸಕ ಮತ್ತು ಸಮಾಜ ಸೇವಕ ಸಿ. ವೇಲಾಯುಧನ್ ಅವರು 1996 ರ ಚುನಾವಣೆಯಲ್ಲಿ ಪದ್ಮನಾಭಪುರಂ ಕ್ಷೇತ್ರವನ್ನು ಪ್ರತಿನಿಧಿಸಿ ಬಿಜೆಪಿಯಿಂದ ವಿಧಾನಸಭೆಗೆ ಚುನಾಯಿತರಾದ ಮೊದಲ ಶಾಸಕರು. ಪಕ್ಷ ಮತ್ತು ಸಮಾಜಕ್ಕಾಗಿ ಅವರ ಬದ್ಧತೆ ಮತ್ತು ಸಮರ್ಪಣೆ ಸದಾ ಸ್ಮರಣೀಯ ಎಂದಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ವೇಲಾಯುಧನ್ ಅವರು ರಾಜ್ಯದಲ್ಲಿ ಪಕ್ಷದ ಪ್ರವರ್ತಕರಾಗಿದ್ದರು. ಪಕ್ಷದ ಬೆಳವಣಿಗೆಗೆ ಆತ್ಮವಿಶ್ವಾಸದ ಬೀಜಗಳನ್ನು ಬಿತ್ತಿದವರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ - K Vasantha Bangera