ETV Bharat / bharat

ಜಾಹೀರಾತು ನೀಡದಂತೆ ಕೋಲ್ಕತ್ತಾ ಹೈಕೋರ್ಟ್​ ನಿರ್ಬಂಧ: ಸುಪ್ರೀಂ ಮೊರೆ ಹೋದ ಬಿಜೆಪಿ - Court order on BJP Advertisements

author img

By ETV Bharat Karnataka Team

Published : May 24, 2024, 5:31 PM IST

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ವಿರುದ್ಧ ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವ ಜೂನ್ 4ರವರೆಗೆ ಜಾಹೀರಾತು ನೀಡದಂತೆ ಬಿಜೆಪಿಗೆ ಹೈಕೋರ್ಟ್​ ನಿರ್ಬಂಧ ಹೇರಿದೆ. ಈ ಆದೇಶ ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

BJP Moves Supreme Court
ಸುಪ್ರೀಂ ಕೋರ್ಟ್ ಮೊರೆ ಹೋದ ಬಿಜೆಪಿ (ETV Bharat)

ನವದೆಹಲಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಯಾವುದೇ ಜಾಹೀರಾತನ್ನು ಪ್ರಕಟಿಸದಂತೆ ಏಕಸದಸ್ಯ ಪೀಠ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್​ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶುಕ್ರವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಬೇಲಾ.ಎಂ.ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ಬಿಜೆಪಿ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ, ಬಿಜೆಪಿ ಪರ ಹಾಜರಾದ ವಕೀಲ ಸೌರಭ್ ಮಿಶ್ರಾ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜೂನ್ 4ರವರೆಗೆ ಬಿಜೆಪಿ ಜಾಹೀರಾತು ನೀಡದಂತೆ ಮೇ 22ರಂದು ಕೋಲ್ಕತ್ತಾ ಹೈಕೋರ್ಟ್​ ನಿರ್ಬಂಧ ಹೇರಿದೆ ಎಂದು ನ್ಯಾಯ ಪೀಠಕ್ಕೆ ತಂದರು.

ಅಲ್ಲದೇ, ಈ ವಿಷಯದ ವಿಚಾರಣೆಗೆ ತುರ್ತು ಪಟ್ಟಿ ಮಾಡಬೇಕು ಎಂದು ಸೌರಭ್ ಮಿಶ್ರಾ ಕೋರಿದರು. ಆಗ ನ್ಯಾಯ ಪೀಠವು, ನೀವು ಮುಂದಿನ ರಜಾಕಾಲದ ಪೀಠದ ಮುಂದೆ ಏಕೆ ಹೋಗಬಾರದು? ಎಂದು ಪೀಠ ಕೇಳಿತು. ಈ ವೇಳೆ, ಬಿಜೆಪಿ ವಕೀಲರು ಮೇ 27ರಂದು ವಿಚಾರಣೆಗೆ ವಿಷಯವನ್ನು ಪರಿಗಣಿಸುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠವು ವಿಚಾರಣೆಗೆ ಪಟ್ಟಿ ಮಾಡಲು ಪರಿಶೀಲಿಸುವುದಾಗಿ ತಿಳಿತು.

ಏನಿದು ಪ್ರಕರಣ?: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ವಿರುದ್ಧ ಬಿಜೆಪಿ ಜಾಹೀರಾತು ನೀಡುತ್ತಿದೆ. ಇದರ ಹೈಕೋರ್ಟ್​ ಮೇಟ್ಟಿಲೇರುವ ಟಿಎಂಸಿ ತನ್ನ ಮತ್ತು ತನ್ನ ಕಾರ್ಯಕರ್ತರ ವಿರುದ್ಧ ಪರಿಶೀಲಿಸದ ಆರೋಪಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಬಿಜೆಪಿಯ ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ ಮೇ 20ರಂದು ಆದೇಶಿಸಿದೆ.

ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವ ಜೂನ್ 4ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಲಾಗಿದೆ. ಏಕಸದಸ್ಯ ಪೀಠದ ಆ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಮೇಲ್ಮನವಿ ಸಲ್ಲಿಸಿತ್ತು. ಏಕಸದಸ್ಯ ಪೀಠವು ಯಾವುದೇ ವಿಚಾರಣೆ ನಡೆಸದೆ ಆದೇಶ ನೀಡಿದೆ ಎಂದು ಬಿಜೆಪಿ ಹೇಳಿತ್ತು.

ಆದರೆ, ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿದೆ. ಅಲ್ಲದೇ, ಲಕ್ಷ್ಮಣ ರೇಖೆಯನ್ನು ಪಾಲಿಸಬೇಕು ಮತ್ತು ಯಾವುದೇ ರಾಜಕೀಯ ಪಕ್ಷದ ಕಡೆಯಿಂದ ಯಾವುದೇ ವೈಯಕ್ತಿಕ ಆಕ್ರಮಣ ಮಾಡಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ 25 ರಿಂದ 30 ವಯೋಮಾನದ 2 ಸಾವಿರಕ್ಕೂ ಅಧಿಕ ತರುಣರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.