ನಂದಿಧ್ವಜ ಹರಾಜಿನಲ್ಲಿ ಗೆದ್ದವರು ಮುಂದಿನ ಶಾಸಕರಾಗ್ತಾರಂತೆ!: ಬರೋಬ್ಬರಿ 16 ಲಕ್ಷಕ್ಕೆ ನಂದಿಧ್ವಜ ತಮ್ಮದಾಗಿಸಿಕೊಂಡ ಈ ಶಾಸಕ
ತುಮಕೂರು: ನಂದಿಧ್ವಜ ಹರಾಜಿನಲ್ಲಿ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆಯಿಂದ ನಂದಿ ಧ್ವಜಕ್ಕಾಗಿ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಪೈಪೋಟಿ ನಡೆದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಲಿಂಗೇಶ್ವರ ದೇಗುಲದಲ್ಲಿ ನಡೆದಿದೆ. 16 ಲಕ್ಷ ರೂ.ಗೆ ರಥದ ನಂದಿಧ್ವಜ ದಾಖಲೆಯ ಮಾರಾಟವಾಗಿದ್ದು, ಕಾಂಗ್ರೆಸ್ ಹಾಲಿ ಶಾಸಕ ರಂಗನಾಥ ನಂದಿಧ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಗ್ಗೆರೆ ಗ್ರಾಮದ ಸಿದ್ದಲಿಂಗೇಶ್ವರ ರಥೋತ್ಸವದ ನಂದಿಧ್ವಜಕ್ಕಾಗಿ ಕಾಂಗ್ರೆಸ್ನ ಮಾಜಿ ಶಾಸಕ ರಾಮಸ್ವಾಮಿಗೌಡ ಹಾಗೂ ಶಾಸಕ ಡಾ.ರಂಗನಾಥ್ ನಡುವೆ ಪೈಪೋಟಿ ನಡೆದಿತ್ತು. ಪ್ರತಿ ಸಲ 5-10 ಲಕ್ಷಕ್ಕೆ ನಂದಿಧ್ವಜ ಮಾರಾಟವಾಗುತ್ತಿತ್ತು. ಪ್ರತಿ ಬಾರಿಯೂ ನಂದಿಧ್ವಜ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಕಳೆದ ಬಾರಿಯೂ ನಂದಿ ಧ್ವಜವನ್ನು ರಂಗನಾಥ ಗೆದ್ದಿದ್ದರು. ನಂಬಿಕೆಯಂತೆಯೇ ಕುಣಿಗಲ್ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು. ಅದೇ ರೀತಿ ಈ ಬಾರಿ ಹರಾಜಿನಲ್ಲಿ ಶಾಸಕ ಡಾ.ರಂಗನಾಥ 16 ಲಕ್ಷ ರೂ.ಗೆ ನಂದಿಧ್ವಜ ಗೆದ್ದಿದ್ದಾರೆ. ಹಾಗಾಗಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಊರ ಜನರು, ಭಕ್ತಾದಿಗಳಲ್ಲಿ ಕುತೂಹಲ ಗರಿಗೆದರಿದೆ.
ಇದನ್ನೂ ನೋಡಿ: ಉಸಿರಿರುವ ತನಕ ನಿಮ್ಮ ಸೇವೆ ಮಾಡುವೆ: ಶಿಗ್ಗಾಂವಿ ಜನರಿಗೆ ಸಿಎಂ ಬೊಮ್ಮಾಯಿ ಭರವಸೆ