ETV Bharat / state

ಸಿದ್ದು-ಡಿಕೆಶಿ ನಡುವೆ ಮೂರನೇ ವ್ಯಕ್ತಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ; ಸಚಿವ ಉಮೇಶ್​ ಕತ್ತಿ

author img

By

Published : Jul 26, 2022, 1:16 PM IST

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ- ಡಿಕೆಶಿ- ಸಿದ್ದರಾಮಯ್ಯ ಮಧ್ಯೆ ಮೂರನೇ ವ್ಯಕ್ತಿ ಹಂಬಲ ಪಡುತ್ತಿದ್ದಾರೆ- ಸಚಿವ ಉಮೇಶ್​ ಕತ್ತಿ ಹೇಳಿಕೆ
Minister Umesh Katti reaction about Congress leaders
Minister Umesh Katti reaction about Congress leaders

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈಗ 80 ವರ್ಷ. ಹೀಗಾಗಿ ಚುನಾವಣೆ ನಿವೃತ್ತಿ ಘೋಷಣೆ ಮಾಡಿರಬಹುದು. ಆದರೆ, ಅವರಿಗೆ ದುಡಿಯುವ ತಾಕತ್ತು ಇನ್ನೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕುಟುಂಬ ರಾಜಕಾರಣ: ಕುಟುಂಬ ರಾಜಕಾರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಮ್ಮ ಪಕ್ಷದಲ್ಲಿ 75ವರ್ಷ ವಯಸ್ಸಾದವರು ರಾಜಕೀಯ‌ ನಿವೃತ್ತಿ ಘೋಷಣೆ ಮಾಡಬೇಕು ಎನ್ನುವ ನಿಯಮವಿದೆ. ಈ ಕಾರಣಕ್ಕೆ ಹಾಗೂ ಮಗನ ಬೆಳೆಸುವ ನಿಟ್ಟಿನಲ್ಲಿ ಬಿಎಸ್​ವೈ ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿರಬಹುದು ಎಂದರು.

ನಾನು ಸಹ ಕುಟುಂಬ ರಾಜಕಾರಣದಿಂದ ಬಂದಂತಹ ವ್ಯಕ್ತಿ. ಕುಟುಂಬ ರಾಜಕಾರಣ ಸರ್ವೇಸಾಮಾನ್ಯ. ಪ್ರಧಾನಿ ಮೋದಿ ಅವರನ್ನು ಹೊರತುಪಡಿಸಿ ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರೇ. ನಮ್ಮ ತಂದೆಯವರು ನಮ್ಮನ್ನು ರಾಜಕೀಯಕ್ಕೆ ತಂದರು. ಹಾಗೆಯೇ ಬಿಎಸ್​​ವೈ ಅವರು ವಿಜಯೇಂದ್ರ ಅವರನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಮುಂದೆ ವಿಜಯೇಂದ್ರ ಇದೇ ಸಂಸ್ಕೃತಿ ಬೆಳೆಸಿಕೊಂಡು ಹೋಗಬಹುದು ಎನ್ನುವ ಮೂಲಕ ಬಿಎಸ್​ವೈ ನಡೆಯನ್ನು ಪರೋಕ್ಷವಾಗಿ ಸಚಿವ ಕತ್ತಿ ಸಮರ್ಥಿಸಿಕೊಂಡರು.

ಸಚಿವ ಉಮೇಶ್​ ಕತ್ತಿ ಪ್ರತಿಕ್ರಿಯೆ

ಸಿಎಂ ಕುರ್ಚಿಗಾಗಿ ಕಾದಾಟ: ರಾಜ್ಯ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ ಎನ್ನುವ ಸತ್ಯವನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಆಗಲಿ ಅಥವಾ ಡಿ.ಕೆ. ಶಿವಕುಮಾರ್ ಆಗಲಿ​ ಇವರಿಬ್ಬರಲ್ಲಿ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ಅವರ ಬದಲಿಗೆ ಮುಖ್ಯಮಂತ್ರಿ ಆಗಬೇಕು ಎಂದು ಮೂರನೇ ವ್ಯಕ್ತಿ ಹಂಬಲ ಪಡುತ್ತಿದ್ದಾರೆ. ಅವರು ಹಾಗೆಯೇ ಹಂಬಲಪಡುತ್ತಿರಲಿ. ಚುನಾವಣೆ ಆಗೋ ಅವರಿಗೆ ತಮ್ಮ ಖಯಾಲಿ ತೀರಿಸಿಕೊಳ್ಳಲಿ. ಆದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭವಿಷ್ಯ ನುಡಿದರು.‌

ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಕತ್ತಿ: ತಮಗೂ ಸಹ ಮುಖ್ಯಮಂತ್ರಿ ಆಗುವ ಕನಸು ಇದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆ ಕನಸು ನನಸು ಆಗಬಹುದು. ಸುಮಾರು ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದೇನೆ. ಸಾಕಷ್ಟು ಅನುಭವ ಹೊಂದಿರುವ ವ್ಯಕ್ತಿ. ಹಾಗಾಗಿ ನಾನೇಕೆ ಮುಖ್ಯಮಂತ್ರಿ ಆಗಬಾರದು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರು ಹೇಳಿದಂತೆ ಮುಂದಿನ ದಿನಗಳಲ್ಲಿ ದಲಿತ ವ್ಯಕ್ತಿ ಕೂಡ ಬಿಜೆಪಿಯಿಂದ ಮುಖ್ಯಮಂತ್ರಿ ಆಗಬಹುದು ಎಂದರು.

ಸಂಪುಟ ವಿಸ್ತರಣೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಉಮೇಶ ಕತ್ತಿ, ಸಂಪುಟ ವಿಸ್ತರಣೆ ಆಗುವುದಿಲ್ಲ. ಸದ್ಯ ಚುನಾವಣೆ ಸಿದ್ಧತೆ ನಡೆದಿದೆ. ಮಂತ್ರಿ ಮಂಡಲ ಕೂಡ ಸಮರ್ಥವಾಗಿದೆ. ಸಿಎಂ ಸಹ ವಿವಿಧ ಕಾಮಗಾರಿಗಳಿಗೆ ವೇಗದ ಚಾಲನೆ ನೀಡುತ್ತಿದ್ದಾರೆ. ಬಿಜೆಪಿ ಮಾತ್ರ ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದೆ ಎಂದು ಸಚಿವ ಕತ್ತಿ ಹೇಳಿದರು.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿದ 4 ಚಕ್ರ ವಾಹನಗಳ ವಾರಸುದಾರರಿಗೆ ಕಾದಿದೆ ಸಂಕಷ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.