ETV Bharat / state

ವಿಜಯಪುರ ಜಿಲ್ಲೆ 'ಇಂಡಸ್ಟ್ರಿಯಲ್ ಹಬ್' ಆಗಿ ರೂಪಿಸಲು ಪ್ರಯತ್ನ: ಜಗದೀಶ್ ಶೆಟ್ಟರ್

author img

By

Published : Mar 13, 2021, 7:36 AM IST

ಸರ್ಕಾರದ ಹೊಸ ಕೈಗಾರಿಕಾ ನೀತಿಯಿಂದ ಬೆಂಗಳೂರಿನಿಂದಾಚೆಗೂ ಕೈಗಾರಿಕಾ ಕ್ಷೇತ್ರವನ್ನು ವಿಸ್ತರಿಸಲು ಸಾಧ್ಯವಾಗಿದೆ. ಹುಬ್ಬಳ್ಳಿ-ಧಾರವಾಡಗಳಂತೆ ವಿಜಯಪುರ ಜಿಲ್ಲೆಯನ್ನೂ 'ಇಂಡಸ್ಟ್ರಿಯಲ್ ಹಬ್' ಆಗಿ ರೂಪಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

Minister Jagdish Shettar  meeting with Various officers of the Industry department
ಕೈಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಉದ್ದಿಮೆದಾರರ ಜೊತೆ ಸಚಿವ ಜಗದೀಶ್ ಶೆಟ್ಟರ್ ಸಭೆ

ವಿಜಯಪುರ: ಮುಂಬರುವ ದಿನಗಳಲ್ಲಿ ವಿಜಯಪುರ ಹಾಗೂ ಇತರೆ ನೆರೆಹೊರೆ ಜಿಲ್ಲೆಯವರೊಂದಿಗೆ ಒಡಗೂಡಿ (ಇಂಡಸ್ಟ್ರಿಯಲಿಸ್ಟ್​ ಮೀಟ್) ಉದ್ಯಮಿಗಳ ಸಭೆ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೈಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಉದ್ದಿಮೆದಾರರ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕೈಗಾರಿಕಾ ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು. ಅದರಂತೆ ಉದ್ದಿಮೆದಾರರಿಂದ ತೆರಿಗೆ ಸಂಗ್ರಹಿಸುವಾಗ ಹೆಚ್ಚು-ಕಡಿಮೆ ಅಲ್ಲದ ಮಧ್ಯಮ ಮಾರ್ಗವನ್ನು ಅನುಸರಿಸಿ, ತೆರಿಗೆ ಹೊರೆ ತಪ್ಪಿಸಲಾಗುವುದು ಎಂದರು. ಜೊತೆಗೆ ಸಂಗ್ರಹಿಸಿದ ತೆರಿಗೆಯನ್ನು ಸಮರ್ಪಕವಾಗಿ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ತಿದ್ದುಪಡಿಗಳೊಂದಿಗೆ ಜಾರಿಗೆ ಬಂದ ಹೊಸ ಕೈಗಾರಿಕಾ ನೀತಿಯಿಂದ ಅನೇಕರಿಗೆ ಬಹಳ ಅನುಕೂಲವಾಗಿದೆ. ಇದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದಾಗ ಮಾತ್ರ ಉದ್ದಿಮೆದಾರರು ಇಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಆಕರ್ಷಿತರಾಗುವುದರಿಂದ ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಇತ್ತೀಚೆಗೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ದೊರೆತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣವು ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಶರವೇಗದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ಇದು ಕೂಡ ಸರ್ಕಾರದ ಒಂದು ಸಾಧನೆಯಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದ್ದು, ಇಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಕೈಗಾರಿಕೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಮುಳವಾಡ ಮಾತ್ರವಲ್ಲದೆ, ಇತರ ಭಾಗಗಳಲ್ಲಿಯೂ ಉದ್ಯಮಗಳ ಬೆಳವಣಿಗೆಗೆ ಅಧಿಕಾರಿಗಳು ಗಮನಹರಿಸಬೇಕು. ಅದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.

ಓದಿ: ಚಾಮರಾಜನಗರದಲ್ಲಿ 'ಸಂವಿಧಾನ ಓದು' ಪುಸ್ತಕ ವಿತರಣಾ ಸಮಾರಂಭ ಇಂದು

ಈ ನಿಟ್ಟಿನಲ್ಲಿ ಕೂಡಲೇ ಎಸ್​​​ಸಿ, ಎಸ್​ಟಿ ಹಾಗೂ ಸಾಮಾನ್ಯ ವರ್ಗದ ಸ್ವೀಕೃತ ಅರ್ಜಿಗಳ ವಿಲೇವಾರಿಯಾಗಬೇಕು. ಸರ್ಕಾರದ ಹೊಸ ಕೈಗಾರಿಕಾ ನೀತಿಯಿಂದ ಬೆಂಗಳೂರಿನಿಂದಾಚೆಗೂ ಕೈಗಾರಿಕಾ ಕ್ಷೇತ್ರವನ್ನು ವಿಸ್ತರಿಸಲು ಸಾಧ್ಯವಾಗಿದೆ. ಹುಬ್ಬಳ್ಳಿ-ಧಾರವಾಡಗಳಂತೆ ವಿಜಯಪುರ ಜಿಲ್ಲೆಯನ್ನೂ 'ಇಂಡಸ್ಟ್ರಿಯಲ್ ಹಬ್' ಆಗಿ ರೂಪಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಇಲ್ಲಿನ ವಿವಿಧ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.