ETV Bharat / state

ದೇವೇಗೌಡ ಕುಟುಂಬದ ಬಗ್ಗೆ ಕಟೀಲ್​ ಆಕ್ಷೇಪಾರ್ಹ ಹೇಳಿಕೆ: ಹೆಚ್​ಡಿಕೆ ಗರಂ

author img

By

Published : Jan 20, 2023, 9:43 PM IST

ದೇವೇಗೌಡರ ಒಂದು ಉಗುರಿಗೆ ಕಟೀಲ್ ಸಮನಿಲ್ಲ. ದೇವೇಗೌಡರ ಧೂಳಿಗೆ ಸಮನಿಲ್ಲ. ದೇವೇಗೌಡರ ಬಗ್ಗೆ ಗೊತ್ತಿಲ್ಲದಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿದರು
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿದರು

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿದರು

ವಿಜಯಪುರ: ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹಾಗೂ ಅವರ ಕುಟುಂಬ ವರ್ಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ‌ ನಡೆಸಿದರು.‌

ಜೆಡಿಎಸ್ ಪಂಚರಥ ಯಾತ್ರೆ ವಿಜಯಪುರಕ್ಕೆ ಆಗಮಿಸಿ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಳೀನ್​ ಕುಮಾರ್​ ಕಟೀಲ್ ಕಾಂಗ್ರೆಸ್​ ಪಕ್ಷದ ಸಭೆಯಲ್ಲಿ ಅವರವರ ನಾಯಕರು ಚಪ್ಪಲಿಯಲ್ಲಿ ಹೊಡೆದುಕೊಳ್ಳುತ್ತಾರಂತೆ. ದೇವೇಗೌಡರ ಕುಟುಂಬದ ತಂಟೆಗೆ ಬಂದರೆ ಒಂದು ಎಚ್ಚರಿಕೆ ಕೊಡಲು ಬಯಸುತ್ತೇನೆ. ದೇವೇಗೌಡರ ಒಂದು ಉಗುರಿಗೆ ಕಟೀಲ್ ಸಮನಿಲ್ಲ. ದೇವೇಗೌಡರ ಧೂಳಿಗೆ ಸಮನಿಲ್ಲ. ದೇವೇಗೌಡರ ಬಗ್ಗೆ ಗೊತ್ತಿಲ್ಲದಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಲಿ, ನಮ್ಮ ಕುಟುಂಬದ ಬಗ್ಗೆ ಅಷ್ಟು ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ.

ರಾಜ್ಯಕ್ಕೆ ಬಿಜೆಪಿ‌ ಕೊಡುಗೆ ಏನು ಎಂಬುದನ್ನು ಮೊದಲು ಅರಿತುಕೊಳ್ಳಲಿ. ವಿಜಯಪುರ ಜಿಲ್ಲೆಯಲ್ಲಿ ಇಂದಿರಾಗಾಂಧಿಯವರನ್ನು ಕರೆದು ಚಿನ್ನದಲ್ಲಿ ತುಲಾಭಾರ ಮಾಡಿದರೂ, 1970 ರಲ್ಲಿ ಒಂದು ಹನಿ ನೀರನ್ನು ಉಪಯೋಗಿಸಿಕೊಳ್ಳಲು ಒಂದು ಪೈಸಾ ಹಣ ನೀಡಲಿಲ್ಲ. ದೇವೇಗೌಡರು ನೀರಾವರಿಗೆ 18 ಸಾವಿರ ಕೋಟಿ ರೂ. ನೀಡಿ ಈ ಭಾಗದಲ್ಲಿ ನೀರಾವರಿ ಮಾಡಿದರು ಎಂದರು.

ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡುತ್ತೇನೆ. ರಾಜ್ಯದಿಂದ ನಿಮ್ಮ ಟೆಂಟ್ ತೆಗೆದುಕೊಂಡು ಹೋಗುವ ಕಾಲ ಬಂದಿದೆ. ಯಾವಾಗ ಧರ್ಮ ಧರ್ಮದ ನಡುವೆ ಹಿಂಸೆ ಬೆಂಕಿ ಹಚ್ಚಿದ್ದೀರಿ. ನಾನು ಕಳೆದ ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ, ಅಲ್ಲಿನ ರೈತರು ಹೇಳುತ್ತಾರೆ ನೀರಾವರಿ ಇಲ್ಲದೇ ಕೆಲಸಕ್ಕೆ ಗುಳೆ ಹೋಗುತ್ತಿದ್ದೆವು. ದೇವೇಗೌಡರ ಪುಣ್ಯದಿಂದ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಎಂದು ಹೇಳಿದರು.

ನಿಮ್ಮ ಯೋಗ್ಯತೆಗೆ 8ವರ್ಷ ಆಡಳಿತ ನಡೆಸಿದ್ದೀರಿ. ಕೃಷ್ಣಾ ನ್ಯಾಯಾಧೀಕರಣ ತೀರ್ಪು ಬಂದರೂ ಸಹ ಆಲಮಟ್ಟಿ ಜಲಾಶಯವನ್ಮು 524 ಮೀಟರ್​ಗೆ ಎತ್ತರಿಸಲು ನಿಮ್ಮ ಯೋಗ್ಯತೆಗೆ ಆಗಲಿಲ್ಲ. ಎಲ್ಲ ಕಾಮಗಾರಿ ಹಣ ಲೂಟಿ ಮಾಡಿದ್ದೀರಿ ಎಂದು ಗರಂ ಆದರು.

ಯತ್ನಾಳ್​- ನಿರಾಣಿ ವಿಷಯ ಪ್ರಸ್ತಾಪ: ಮುಂದುವರೆದು ಮಾತನಾಡಿದ ಹೆಚ್​ಡಿಕೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹಾಗೂ ಸಚಿವ ಮುರುಗೇಶ‌ ನಿರಾಣಿ ಕಚ್ಚಾಟವನ್ನು ಪ್ರಸ್ತಾಪಿಸಿದ ಅವರು, ಒಬ್ಬರಿಗೊಬ್ಬರು ನಡೆಸುತ್ತಿರುವ ಬಹಿರಂಗ ಮಾತಿನ ಕಾಳಗದಲ್ಲಿ ಬಳಸುತ್ತಿರುವ ಪದಗಳನ್ನು ನಮ್ಮ ಬಾಯಿ ಹೇಳಲು ಆಗುವುದಿಲ್ಲ. ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತೀರಾ? ಕಾಂಗ್ರೆಸ್ ಬಗ್ಗೆ ಏನಾದರೂ ಮಾತನಾಡಲಿ, ನಮ್ಮ ಕುಟುಂಬದ ತಂಟೆಗೆ ಬಂದರೆ ನೆಟ್ಟಗಿರಲ್ಲ. ರೈತರ ಪರವಾಗಿ ಧ್ವನಿ ಎತ್ತಿ ಅವರಿಗಾಗಿ ಜೀವನ ಮುಡುಪಾಗಿಟ್ಟಿದ್ದೇವೆ ಎಂದರು.

ರಥಯಾತ್ರೆ ಸಂಚಾರ: ಬಹಿರಂಗ ಸಭೆ ಮುನ್ನ ತೆರೆದ ವಾಹನದಲ್ಲಿ ಗೋಳಗುಮ್ಮಟದಿಂದ ದರ್ಬಾರ್ ಗೌಂಡ್​ವರೆಗೆ ಮೆರವಣಿಗೆ ನಡೆಯಿತು. ನಂತರ ದರ್ಬಾರ್ ಮೈದಾನಕ್ಕೆ ಆಗಮಿಸುತ್ತಿದ್ದಂತೆ 300 ಕೆಜಿ ತೂಕದ ಹೂವಿನ ಹಾರ ಹಾಕಿ ಬರ ಮಾಡಿಕೊಂಡರು.

ಮೋದಿ ಕೊಡುಗೆ ಏನು?: ಪ್ರಧಾನಿ‌ ಮೋದಿ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನತೆಗೆ ನೀಡಿದ ಕೊಡುಗೆ ವಿಚಾರವಾಗಿ ಮಾತನಾಡಿದ ಹೆಚ್.ಡಿ‌.ಕೆ, ಬಂಜಾರಾ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ? ಕಂದಾಯ ಗ್ರಾಮ ಆಗಿರೋದು ಅಲ್ವಾ? ಕಂದಾಯ ಗ್ರಾಮ ಆಗೋದಕ್ಕೆ ಹಲವಾರು ದಿನಗಳಿಂದ ಹಲವಾರು ಸರ್ಕಾರಗಳಲ್ಲಿ ಪ್ರೊಸೆಸ್ ಆಗಿರುತ್ತದೆ. ಕಂದಾಯ ಗ್ರಾಮ ಒಂದು ಬಾರಿ ಆದ ಮೇಲೆ ಮತ್ತೊಮ್ಮೆ ಹಕ್ಕುಪತ್ರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಹೈಲೈಟ್ ಮಾಡೋಕೆ ಹೊರಟಿದ್ದಾರೆ: ಇದು ಸುಮ್ಮನೆ ಚುನಾವಣೆಯಲ್ಲಿ ಅವರಿಗೆ ಇಲ್ಲಿ ಬಂದು ಪ್ರಚಾರ ಮಾಡೋದಕ್ಕೆ ಯಾವುದೇ ವಿಷಯ ಇಲ್ಲ. ಅದೊಂದು ವಿಷಯವನ್ನು ದೊಡ್ಡ ಮಟ್ಟದಲ್ಲಿ ಹೈಲೈಟ್ ಮಾಡೋಕೆ ಹೊರಟಿದ್ದಾರೆ. ಅದೆಂತದೋ ಗಿನ್ನಿಸ್ ರೆಕಾರ್ಡ್ ಅಂತೆ. ಯಾವ ಗಿನ್ನಿಸ್ ರೆಕಾರ್ಡ್? ಅದನ್ನು ಅವರೇ ಹೇಳಿ ಕೋಡಬೇಕಷ್ಟೆ ಎಂದು ಹೇಳಿದರು. ಇದೆಲ್ಲಾ ಒಂದು ನಾಟಕ. ನಾಟಕ ಬಿಟ್ಟು ಬೇರೇನೂ ಇಲ್ಲ. ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯ, ಸಾಧನೆಯ ವಿಷಯಗಳೇ ಇಲ್ಲ ಎಂದರು.‌

ಜ್ಞಾನ ಯೋಗಾಶ್ರಮಕ್ಕೆ ಭೇಟಿ: ಇತ್ತೀಚಿಗೆ ಲಿಂಗೈಕ್ಯರಾದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಅವರ ಆಶ್ರಮಕ್ಕೆ ಕುಮಾರ ಸ್ವಾಮಿ ಭೇಟಿ ಮಾಡಿದರು. ಆಶ್ರಮದ ಅಧ್ಯಕ್ಷರ ಕೊಠಡಿಗೆ ತೆರಳಿ ಅದ್ವೈತಾನಂದ ಸ್ವಾಮೀಜಿ ‌ಹಾಗೂ‌ ಪರಮಾನಂದ‌ ಸ್ವಾಮೀಜಿಗಳ ಭೇಟಿ‌ ಮಾಡಿದ ಕುಮಾರಸ್ವಾಮಿ, ಸ್ವಾಮೀಜಿಗಳ ಬಳಿ ಚರ್ಚೆ ನಂತರ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದೇಶ್ವರ ಸ್ವಾಮೀಜಿ ಬದುಕು ಎಲ್ಲರಿಗೂ ಮಾದರಿ. ಕಠಿಣ ಬದುಕು ಬದುಕಿದರು ಎಂದರು.

ಸಿದ್ದೇಶ್ವರ ಸ್ವಾಮೀಜಿ ಕುರಿತ ವಿಚಾರ ಪಠ್ಯದಲ್ಲಿ ಬರಲಿ: ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರಂತಹ ಸಂತರು ಅವರು. ಅವರ ಅಂತ್ಯಕ್ರಿಯೆಯಲ್ಲಿ ನಾನು‌ ಭಾಗಿಯಾಗಲು ಸಾಧ್ಯವಾಗಲಿಲ್ಲ. ನುಡಿದಂತೆ ಸರಳ ಬದುಕು ಅವರದ್ದು. ಪಠ್ಯದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ‌ ಕುರಿತ ಅಧ್ಯಾಯ ಸೇರಿಸಲು ಬೆಂಬಲ ನೀಡಿದ ಅವರು, ಪಠ್ಯದಲ್ಲಿ ಯಾರ‌ ಯಾರದ್ದೋ ಚರ್ಚೆ ಮಾಡಲಾಗುತ್ತದೆ. ಸಿದ್ದೇಶ್ವರ ಸ್ವಾಮೀಜಿ ಕುರಿತ ವಿಚಾರ ಪಠ್ಯದಲ್ಲಿ ಬರಲಿ ಎಂದರು.

ವಿಜಯಪುರದಲ್ಲಿ ನಿರ್ಮಾಣವಾಗುತ್ತಿರೋ ವಿಮಾನ ನಿಲ್ದಾಣಕ್ಕೂ ಸ್ವಾಮೀಜಿಗಳ ಹೆಸರಿಡಲು ಚಿಂತನೆ ಆಗಲಿ ಎಂದು ಹೇಳಿಕೆ ಬಳಿಕ ಪ್ರಣವ್​ ಮಂಟಪಕ್ಕೆ ಭೇಟಿ ನೀಡಿದ ಅವರು, ಸಿದ್ದೇಶ್ವರ ಸ್ವಾಮೀಜಿಯವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಕರ್ತೃ ಗದ್ದುಗೆಯ ಪ್ರಣವ ಮಂಟಪದಲ್ಲಿ‌ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಕೆ ಮಾಡಿ, ಪ್ರಣವ ಮಂಟಪದ ಆವರಣದಲ್ಲಿ ಇಟ್ಟಿರೋ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರ ವೀಕ್ಷಣೆಗೆ ಅಲ್ಲಿಂದ ವಿಜಯಪುರ ತಾಲೂಕಿನ ತಿಡಗುಂದಿಯತ್ತ ಪ್ರಯಣ ಮಾಡಿದರು. ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ್​ ಹಾಗೂ ಇತರರು‌ ಸಾತ್​ ನೀಡಿದರು.

ಓದಿ : 2023ರ ರಾಜ್ಯ ಚುನಾವಣೆ ಗಾಂಧಿ - ಗೋಡ್ಸೆ ಸಿದ್ದಾಂತದ ನಡುವಿನ ಹೋರಾಟ: ಬಿ ಕೆ ಹರಿಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.