ETV Bharat / state

ನಾನು ಸಿಎಂ ಆಗುವುದಿದ್ದರೆ ಯಾರೂ ತಪ್ಪಿಸಲು ಸಾಧ್ಯವಿಲ್ಲ: ಶಾಸಕ ಯತ್ನಾಳ್

author img

By ETV Bharat Karnataka Team

Published : Dec 24, 2023, 9:33 PM IST

ಬಿಜೆಪಿ ರಾಜ್ಯ ಘಟಕ ಪುನರ್‌ ರಚನೆಯಾಗಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

basanagouda-patil-yatnal-slams-on-karnataka-bjp-unit-revamped
ನಾನು ಸಿಎಂ ಆಗುವುದಿದ್ದರೆ ಯಾರು ತಪ್ಪಿಸಲು ಸಾಧ್ಯವಿಲ್ಲ: ಶಾಸಕ ಯತ್ನಾಳ್

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ

ವಿಜಯಪುರ: ಪ್ರಸ್ತುತ ಮೌಲ್ಯಾಧಾರಿತ ರಾಜಕೀಯ ಇಲ್ಲ. ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕೀಯದ ಬಗ್ಗೆ ನೀಡಿದ್ದ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 2024ರ ಚುನಾವಣೆಯ ನಂತರ ಬಿಜೆಪಿಯಲ್ಲಿ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪುನರ್‌ರಚನೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದೆ ಯಡಿಯೂರಪ್ಪನವರದ್ದು ಕೆಜೆಪಿ 1, ಈಗ ಕೆಜೆಪಿ 2 ಅವರ ಮಗ ವಿಜಯೇಂದ್ರನದ್ದು, ಮುಂದೆ ಅವರ ಮೊಮ್ಮಗನದ್ದು ಕೆಜೆಪಿ 3 ಆಗುತ್ತದೆ. ಸದ್ಯ ಇದರ ಆಯುಷ್ಯ 2024ರ ಲೋಕಸಭಾ ಚುನಾವಣೆವರೆಗೆ ಮಾತ್ರ. 28 ಸ್ಥಾನ ತರುತ್ತೇನೆ ಎಂದು ಹೇಳಿದ್ದಾರೆ. ಒಂದು ಸ್ಥಾನ ಕಡಿಮೆಯಾದರೂ ಅವರ ಸ್ಥಾನ ತೆರವಾಗುತ್ತದೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

2024ರ ನಂತರ ಹೊಸ ತಿರುವಾಗುತ್ತದೆ. ಸಾರ್ವಜನಿಕ ಕೆಲಸ ಮಾಡಲು, ಕ್ರಾಂತಿ ಮಾಡಲು ಅಧಿಕಾರ ಬೇಕಾಗಿಲ್ಲ ಮತ್ತು ಇದು ಕೊನೆಯಲ್ಲ. 2028ಕ್ಕೆ ಮತ್ತೆ ಕ್ಷೇತ್ರ ಮರು ವಿಂಗಡನೆ ಆಗಲಿದೆ. ವಿಜಯಪುರದ ಲೋಕಸಭಾ ಸ್ಥಾನ ಮೂರು ಆಗಲಿದ್ದು, ದೇಶದ ಒಟ್ಟು ಲೋಕಸಭೆಯ ಸ್ಥಾನ 900 ಆಗಲಿದೆ. ಕರ್ನಾಟಕ ವಿಧಾನಸಭೆ 290 ಸ್ಥಾನಕ್ಕೆ ಏರಿಕೆ ಆಗಲಿದೆ. ಆಗ ಏನೇನು ಆಗುತ್ತದೆ ಎಂಬುದನ್ನು ನೋಡೋಣ. ನಾನು ಸಿಎಂ ಆಗುವುದಿದ್ದರೆ ಯಾರೂ ತಪ್ಪಿಸಲು ಸಾಧ್ಯವಿಲ್ಲ. ಸಿಎಂ ಆಗದೇ ಇದ್ದರೂ ನಾನು ಹತಾಶನಾಗುವುದಿಲ್ಲ ಎಂದು ಹೇಳಿದರು.

ಸಿಎಂ ಅದವರು ಎಲ್ಲಿದ್ದಾರೆ ಈಗ? ಮಾಜಿ ಮುಖ್ಯಮಂತ್ರಿಗಳನ್ನು ಯಾರಾದರೂ ಕೇಳುತ್ತಾರಾ?. ಅವರಿಗೆ 100 ಜನರನ್ನು ಸೇರಿಸಲು ಹೇಳಿ. ಹಣ ಕೊಟ್ಟು ಕೊಟ್ಟು ತಮ್ಮ ಜಿಲ್ಲೆಯಲ್ಲಿ ಜನರನ್ನು ಸೇರಿಸುವ ಪರಿಸ್ಥಿತಿ ಬಂದಿದೆ. ನನ್ನ ಮಗನನ್ನು ಉದ್ಧಾರ ಮಾಡದೇ ಇದ್ದರೆ ನಾವು ಲೋಕಸಭೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅವರು ಹಾಳಾಗಿ ಹೋಗಲಿ ಅಂತಾ ಕೊಟ್ಟು ಬಿಟ್ಟಿದ್ದಾರೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಟಿದ್ದಾರೆ. ಆ ಬೀಗ 2024ರವರೆಗೆ ಮಾತ್ರ. 28 ಸೀಟ್ ಬರಲಿಲ್ಲ ಅಂದರೆ ಬೀಗ ಕಸಿದುಕೊಳ್ಳುತ್ತಾರೆ ಅಷ್ಟೇ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಟೀಕಿಸಿದರು.

ಇದನ್ನೂ ಓದಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಅವರಿಂದ ಏನೂ ನಿರೀಕ್ಷಿಸಲಾಗದು: ಬಿ‌.ಕೆ‌.ಹರಿಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.