ಭಟ್ಕಳ: ನಗರದ ನೂತನ ಮಿನಿ ವಿಧಾನಸೌಧ ಹಾಗೂ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲು ನಾಳೆ ಕಂದಾಯ ಸಚಿವ ಆರ್. ಅಶೋಕ್ ಆಗಮಿಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಚಿವರಿಗೆ ನೀಡಬಹುದು ಎಂದು ಶಾಸಕ ಸುನೀಲ್ ನಾಯ್ಕ್ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಳಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಅಧಿಕಾರಿಗಳು ಉಪಸ್ಥಿತಿ ಇರಲಿದ್ದಾರೆ. ಸಮಾರಂಭದ ಬಳಿಕ ಜನರ ಅಹವಾಲು ಸ್ವೀಕರಿಸಲಿದ್ದಾರೆ. ಈ ವೇಳೆ ಜನರು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಳ್ಳಬಹುದು ಎಂದರು.
ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಗೊಂಡಿದ್ದು, ಈಗ 3.35 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸೌಧ ಉದ್ಘಾಟನೆಗೊಂಡ ತಕ್ಷಣ ಕಟ್ಟಡದೊಳಗಿನ ಕಚೇರಿಯ ಒಳವಿನ್ಯಾಸ, ಫರ್ನಿಚರ ಅಳವಡಿಕೆಗೆ ಕಾರ್ಯ ಆರಂಭಗೊಳ್ಳಲಿದೆ. ಇದಾದ ಕೆಲವೇ ತಿಂಗಳಲ್ಲಿ ಸಹಾಯಕ ಆಯುಕ್ತರ ಕಛೇರಿ, ತಹಶೀಲ್ದಾರ್ ಕಚೇರಿ ಹಾಗೂ ಶಾಸಕರ ಕಚೇರಿ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಪಾಶ್ವನಾಥ ಜೈನ್, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಮಾಜಿ ಮಂಡಲಾಧ್ಯಕ್ಷ ರಾಜೇಶ್ ನಾಯ್ಕ್, ಮುಖಂಡರಾದ ಗೋವರ್ಧನ ನಾಯ್ಕ್, ಶಿವಾನಿ ಶಾಂತಾರಾಮ ಮುಂತಾದವರು ಇದ್ದರು.