ದೆಹಲಿಯ ಗಣರಾಜ್ಯೋತ್ಸವ ಪರೇಡ್​: ನಾರಿಶಕ್ತಿ ಟ್ಯಾಬ್ಲೋಗೆ ಸಾಥ್​ ನೀಡಲಿರುವ ಉತ್ತರ ಕನ್ನಡದ ಸುಗ್ಗಿ ತಂಡ

author img

By

Published : Jan 24, 2023, 10:44 PM IST

performance of the famous halakki harvest dance

ಜ. 26ರಂದು ಗಣರಾಜ್ಯೋತ್ಸವ - ದೆಹಲಿಯಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನ - ಪಥಸಂಚಲನಕ್ಕೆ ಕಾರವಾರದ ಕೆ ಚರ್ಚಿಲ್ ಆಯ್ಕೆ

ಕಾರವಾರ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜೊತೆಗೆ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನಕ್ಕೂ ಕೂಡ ಅವಕಾಶ ದೊರೆತಿದೆ. 74ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯಪಥದಲ್ಲಿ ನಡೆಯಲಿರುವ ಪರೇಡ್ ಪಥಸಂಚಲನದಲ್ಲಿ ವಿದ್ಯಾಭ್ಯಾಸ ಇಲ್ಲದೆ ಇದ್ದರೂ ನಾಡಿಗೆ ಅಪ್ರತಿಮ ಕೊಡುಗೆ ನೀಡಿದ ಪದ್ಮಶ್ರೀ ಪುರಷ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಪ್ರದರ್ಶನ ನಡೆಯಲಿದೆ.

ದೆಹಲಿಗೆ ತೆರಲಿರುವ ಕಲಾತಂಡ: ಇದರ ಜೊತೆಗೆ ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣತ ಕೂಡ ನಾರಿಶಕ್ತಿ ಟ್ಯಾಬ್ಲೋ ಜೊತೆ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಕಲಾವಿದ ಪುರುಷೋತ್ತಮ ಗೌಡ ಅವರ ನೇತೃತ್ವದಲ್ಲಿ ಸುಮಾರು 25 ಮಂದಿಯ ತಂಡ ದೆಹಲಿಗೆ ತೆರಳಿದೆ. ಅಲ್ಲದೆ ಕಳೆದ ಒಂದು ವಾರದಿಂದ ಅಭ್ಯಾಸದಲ್ಲಿ ತೊಡಗಿಕೊಂಡು ಜ.23 ರಂದು ಅಂತಿಮ ಹಂತದ ಅಭ್ಯಾಸದ ಪರೇಡ್ ಕೂಡ ನಡೆಸಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಕಡಿಮೆ ಅವಧಿಯಲ್ಲಿ ಟ್ಯಾಬ್ಲೊ ಸಿದ್ದ: ಪಥಸಂಚಲನದಲ್ಲಿ ನಾರಿಶಕ್ತಿ ಟ್ಯಾಬ್ಲೋಗೆ ಕೊನೆ ಹಂತದಲ್ಲಿ ಅನುಮತಿ ದೊರೆತರೂ ಕೂಡ ಖ್ಯಾತ ವಿನ್ಯಾಸಕಾರ ಶಶಿಧರ ಅಡಪ ನೇತೃತ್ವದ ತಂಡ ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ಟ್ಯಾಬ್ಲೋ ರಚನೆ ಮಾಡಿ ದೇಶದ ಗಮನ ಸೆಳೆಯುತ್ತಿದೆ. ಅದೆ ರೀತಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತಕ್ಕೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಖುಷಿಯಾಗಿದೆ ಎಂದು ತಂಡದ ನೇತೃತ್ವವಹಿಸಿರುವ ಕಲಾವಿದ ಪುರುಷೋತ್ತಮ ಗೌಡ ಸಂತಸ ವ್ಯಕ್ತಪಡಿಸಿದರು.

ಜನಮನ ಗೆದ್ದ ಪ್ರದರ್ಶನ: ತಂಡದಲ್ಲಿ 12 ಹೆಣ್ಣು ಮಕ್ಕಳು ಹಾಗೂ 13 ಮಂದಿ ಪುರುಷರು ಇದ್ದು ಜ.16 ರಂದು ದೆಹಲಿಗೆ ಆಗಮಿಸಿ ಕೊರೆಯುವ ಚಳಿ ನಡುವೆಯೂ ನಿರಂತರ ಅಭ್ಯಾಸ ನಡೆಸಿ ಇದೀಗ ಅಂತಿಮ ಪರೇಡ್‌ಗೆ ಸಜ್ಜಾಗಿದ್ದೇವೆ. ಅಲ್ಲದೆ ಈಗಾಗಲೇ ದೆಹಲಿಯ ಆರ್ಮಿ ಕ್ಯಾಂಪ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲಿಯೂ ಪಾಲ್ಗೊಂಡು ತಂಡ ಉತ್ತಮ ಪ್ರದರ್ಶನ ನೀಡಿ ಜನಮನ ಗೆದ್ದಿದೆ ಎಂದು ಪುರುಷೋತ್ತಮ ಗೌಡ ತಿಳಿಸಿದರು.

ಹೋಳಿ ವೇಳೆ ನಡೆಯುವ ಸುಗ್ಗಿ ಕುಣಿತ: ಬುಡಕಟ್ಟು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಪ್ರತಿ ವರ್ಷ ಹೋಳಿ ವೇಳೆ ಸುಗ್ಗಿ ಕುಣಿತ ಆಡುತ್ತಾರೆ. ಜಿಲ್ಲೆಯ ಕರಾವಳಿಯ ತಾಲ್ಲೂಕುಗಳಲ್ಲಿ ಕಂಡುಬರುವ ಈ ವಿಶಿಷ್ಟ ಸುಗ್ಗಿ ಕುಣಿತದಲ್ಲಿ ಹಾರ, ತುರಾಯಿ, ಕುಂಚ, ಗುಮ್ಮಟೆ ವಾದ್ಯ, ಅವರ ವೇಶ ಭೂಷಣಗಳೆ ಪ್ರಮುಖ ಆಕರ್ಷಣೆಯಾಗಿರಲಿದೆ. ಕೃಷಿಯನ್ನೆ ಮೂಲಕ ಕಸುಬನ್ನಾಗಿಸಿಕೊಂಡಿರುವ ಹಾಲಕ್ಕಿ ಸಮುದಾಯದವರು ಕೃಷಿ ಚಟುವಟಿಕೆಗಳು ಮುಗಿದ ಬಳಿಕ ಬರುವ ಹೋಳಿ ವೇಳೆ ಮನೆ ಮನೆಗೆ ತೆರಳಿ ಸುಗ್ಗಿ ಆಡುವುದು ವಾಡಿಕೆ. ಇಂತಹ ಕಲೆಯನ್ನು ಕಾರವಾರದ ಅಮದಳ್ಳಿ ಬಂಟದೇವ ಯುವಕ ಸಂಘವೂ ರಾಜ್ಯದ ನಾನಾ ಭಾಗಗಳಲ್ಲಿ ಪ್ರದರ್ಶಿಸುವ ಮೂಲಕ ಗಮನ ಸಳೆಯುತ್ತಿದೆ.

K Churchill of Karwar
ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿರುವ ಕಾರವಾರದ ಕೆ.ಚರ್ಚಿಲ್

ಗಣರಾಜ್ಯೋತ್ಸವ ಪರೇಡ್‌ಗೆ ಕಾರವಾರದ ಕೆ.ಚರ್ಚಿಲ್ ಆಯ್ಕೆ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನಕ್ಕೆ ನಗರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಕೆಡೆಟ್ ಕೆ.ಚರ್ಚಿಲ್ ಆಯ್ಕೆಯಾಗಿದ್ದಾರೆ. ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಕೆ ಚರ್ಚಿಲ್ ಎನ್‌ಸಿಸಿ ನೆವಲ್ ಕೆಡೆಟ್ ಆಗಿದ್ದಾರೆ. ಜನವರಿ 26 ರಂದು ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ಕಾಲೇಜಿನ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎನ್‌ಸಿಸಿ ಆಫೀಸರ್ ಸಬ್ ಲೆಪ್ಟಿನೆಂಟ್ ಗೀತಾ ತಳವಾರ್ ಶುಭ ಕೋರಿದ್ದಾರೆ. ಕಾರವಾರದ ನಿವಾಸಿಯಾಗಿರುವ ಜಾನ್ ಬೆಲ್ ಹಾಗೂ ಯಶೋಧ ಅವರ ಪುತ್ರರಾಗಿದ್ದಾರೆ.

ಇದನ್ನೂ ಓದಿ:74ನೇ ಗಣರಾಜ್ಯೋತ್ಸವ ಪಥಸಂಚಲನ ಕವಾಯತ್​ಗೆ ಎನ್​​ಸಿಸಿ 148 ಮಹಿಳಾ ಕೆಡೆಟ್​ಗಳು....

ETV Bharat Logo

Copyright © 2024 Ushodaya Enterprises Pvt. Ltd., All Rights Reserved.