ETV Bharat / state

ಕಾರಿಗೆ ಡಿಕ್ಕಿ ಹೊಡೆದು ಬಸ್​ ಪಲ್ಟಿ: 30 ಕ್ಕೂ ಹೆಚ್ಚು ಜನರಿಗೆ ಗಾಯ

author img

By

Published : May 27, 2023, 8:47 AM IST

accident
ಅಪಘಾತ

ಉತ್ತರಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಕಾರು ಮತ್ತು ಬಸ್ ನಡುವೆ ಅಪಘಾತ ನಡೆದಿದೆ.

ಕಾರವಾರ(ಉತ್ತರಕನ್ನಡ): ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಪಲ್ಟಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಮಂಕಿ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಅಪಘಾತದಿಂದಾಗಿ ಕಾರು‌ ಹಾಗೂ ಬಸ್​ನಲ್ಲಿದ್ದವರು ಸೇರಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹೊನ್ನಾವರದ ಮಂಕಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ಸುಮಾರು 30 ಮಂದಿ ಬಸ್ ಪ್ರಯಾಣಿಕರು ಗಾಯಗೊಂಡಿದ್ದು, ಕಾರು ಚಾಲಕನ‌ ಸ್ಥಿತಿ ಗಂಭೀರವಾಗಿದೆ. ತಡರಾತ್ರಿ ಬ್ರೆಝಾ ಕಾರಿನಲ್ಲಿ ಸಾಗುತ್ತಿದ್ದ ಜಿ.ಪಂ.ನ ಗುತ್ತಿಗೆದಾರ ಮೋಹನ್ ನಾಯ್ಕ ಎಂಬುವವರು ಮಂಕಿಯ‌ಲ್ಲಿ ಒಳರಸ್ತೆಗೆ ಕಾರನ್ನು ಕ್ರಾಸ್​ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್, ಕಾರಿಗೆ ಗುದ್ದಿದೆ. ಬಸ್ ಚಾಲಕ ಅಪಘಾತ ತಡೆಯಲು ಯತ್ನಿಸಿದ್ದನಾದರೂ ಕಾರಿಗೆ ಡಿಕ್ಕಿಯಾದ ಪರಿಣಾಮ ಬಸ್ ಕೂಡ ಪಲ್ಟಿಯಾಗಿದೆ.

ಗಂಭೀರ ಗಾಯಗೊಂಡ ಕಾರು ಚಾಲಕ ಮೋಹನ್ ನಾಯ್ಕ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರ ಸಹಕಾರದಿಂದ ಗಾಯಗೊಂಡ ಬಸ್ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ನಿಂತಿದ್ದ ಬಸ್​ಗೆ ಟಿಟಿ ಡಿಕ್ಕಿ 2 ಸಾವು: ಮೇ 25 ರಂದು ರಸ್ತೆಯಲ್ಲಿ ನಿಂತಿದ್ದ ಬಸ್​ಗೆ ಟಿಟಿ ವಾಹನ ಡಿಕ್ಕಿ ಹೊಡೆದಿತ್ತು. ಈ ವೇಳೆ ವೀರೇಶ್ (30) ಶಶಿಕಲಾ (79) ಎಂಬುವವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಡಿ. ಹೊಸಹಳ್ಳಿ ಬಳಿ ನಡೆದಿದೆ. ಟಿಟಿ ವಾಹನದಲ್ಲಿ ಒಟ್ಟು 11 ಮಂದಿ ರಾಯಚೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರು. ಆದರೆ ಮಾರ್ಗಮಧ್ಯೆ ಅಪಘಾತ ನಡೆದಿದೆ.

ತುಮಕೂರಿನಲ್ಲಿ ಬೈಕ್ ಅಪಘಾತ, ಕಾಫಿನಾಡು ಕಮಾಂಡೊ ದೀಪಕ್ ಸಾವು: 2018ರಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಸೇರಿದ್ದ ದೀಪಕ್ ಇತ್ತೀಚೆಗೆ ಎನ್​ಎಸ್​ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕಗೊಂಡಿದ್ದರು. 2020ರಲ್ಲಿ ಮದುವೆಯಾಗಿ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗೆ ಒಂದು ತಿಂಗಳ ಮೇಲೆ ರಜೆಗೆ ಊರಿಗೆ ಬಂದಿದ್ದ ಇವರು ಇತ್ತೀಚೆಗೆ ತಾವು ಖರೀದಿಸಿದ್ದ ನೂತನ ಬೈಕಿನಲ್ಲಿ ರಜೆ ಮುಗಿಸಿ ಕೆಲಸಕ್ಕೆ ಹೋಗಲು ಬೆಂಗಳೂರಿಗೆ ಹೋಗುವಾಗ ಯಡಿಯೂರಿನ ಹೇಮಾವತಿ ಕ್ರಾಸ್ ಬಳಿ ಬೈಕ್ ಅಪಘಾತ ನಡೆದು ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್​ ಬೈಕ್​ ಮುಖಾಮುಖಿ - ಪಿಡಿಒ ಸಾವು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಭೀಕರವಾಗಿ ನಡೆದ ರಸ್ತೆ ಅಪಘಾತದಲ್ಲಿ ಪಿಡಿಓ ಮೃತಪಟ್ಟ ಘಟನೆ ಮೇ 24ಕ್ಕೆ ನಡೆದಿತ್ತು. ‌ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯಿತಿ ಪಿಡಿಒ ಶಿವಾನಂದ ಬಸಪ್ಪ ಹಡಪದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ ಯರಿಕೊಪ್ಪ ಕ್ರಾಸ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ.

ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್.. ಅಡುಗೆ ಮಾಡುತ್ತಿದ್ದ ಬಾಲಕಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.