ETV Bharat / state

'ಹನಿಟ್ರ್ಯಾಪ್​' ಮೂಲಕ ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ

author img

By

Published : Mar 31, 2023, 2:17 PM IST

wild elephant
ತೀರ್ಥಹಳ್ಳಿಯಲ್ಲಿ ಕಾಡಾನೆ ಸೆರೆ

ಕಾಡಿನ ಮಧ್ಯೆ ಹೆಣ್ಣಾನೆಯನ್ನು ಕಟ್ಟಿ ಹಾಕಿ ಒಂಟಿ ಸಲಗವನ್ನು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ.

ತೀರ್ಥಹಳ್ಳಿಯಲ್ಲಿ ಕಾಡಾನೆ ಸೆರೆ

ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಜನರ ನೆಮ್ಮದಿಗೆಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ 4 ತಿಂಗಳ ಹಿಂದೆ ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಮೇಲಿನ ಕುರುವಳ್ಳಿ‌ ಭಾಗದ ಮನೆ, ತೋಟಕ್ಕೆ ನುಗ್ಗಿದ ಕಾಡಾನೆ ಹಾವಳಿ ನಡೆಸಿತ್ತು. ಹೀಗಾಗಿ, ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು‌. ಕೊನೆಗೂ ನಿನ್ನೆ ರಾತ್ರಿ ದೇವಂಗಿ ಬಳಿಯ ಮಳಲೂರಿನ ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ.

ಕಾಡಾನೆ ಸೆರೆ ಹಿಡಿಯುವಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯ ಇಲಾಖೆಗೆ ತಿಳಿಸಿದ್ದರು. ಬಳಿಕ, ರಾಜ್ಯ ಅರಣ್ಯ ಇಲಾಖೆಯು ತಂಡ ರಚನೆ ಮಾಡಿತ್ತು‌. ಈ ತಂಡದಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ವೈದ್ಯರಾದ ವಿನಯ್, ಚಾಮರಾಜನಗರದ ವೈದ್ಯರಾದ ವಾಸೀಮ್, ಬಂಡಿಪುರ ವೈದ್ಯರಾದ ಮುಜೀಬ್, ಹುಲಿ ಮತ್ತು ಸಿಂಹ ಧಾಮದ ವೈದ್ಯ ಮುರುಳಿ ಮೋಹನ್ ಅವರು ಡಿಎಫ್ಓ ಶಿವಶಂಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.

9 ದಿನದ ಕಾರ್ಯಾಚರಣೆ ಯಶಸ್ವಿ: ಕಾಡಾನೆ ಹಿಡಿಯಲು ಕಳೆದ 9 ದಿನದ ಹಿಂದೆ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಸಕ್ರೆಬೈಲು ಆನೆ ಬಿಡಾರದ ಸಾಗರ್, ಬಾಲಣ್ಣ, ಬಹದ್ದೂರ್ ಹಾಗೂ ಭಾನುಮತಿ ಆನೆಯನ್ನು ಕರೆದುಕೊಂಡು ಬರಲಾಗಿತ್ತು. ಆಗಾಗ ಒಂಟಿ ಸಲಗ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೂ ಸೆರೆಗೆ ಸಿಗುತ್ತಿರಲಿಲ್ಲ. ಇದಕ್ಕಾಗಿ ಕಾಡಿನಲ್ಲಿ ಭಾನುಮತಿ ಆನೆಯನ್ನು ಕಟ್ಟಿ ಹಾಕಿ, ಕಾಡಾನೆಯನ್ನ ಸೆಳೆಯುವ ಹನಿಟ್ರ್ಯಾಪ್ ತಂತ್ರವನ್ನು ಬಳಕೆ ಮಾಡಲಾಗಿತ್ತು. ಕಾಡಾನೆಯು ರಾತ್ರಿ ವೇಳೆ ಭಾನುಮತಿ ಬಳಿ ಬರುತ್ತಿತ್ತು. ಆದರೆ, ದೂರವೇ ನಿಲ್ಲುತ್ತಿತ್ತು. ಆದರೂ ಛಲ ಬಿಡದ ವೈದ್ಯರು ನಿನ್ನೆ ರಾತ್ರಿ ಸೆರೆ ಹಿಡಿದರು. ಕಾರ್ಯಾಚರಣೆಯಲ್ಲಿ ವೈದ್ಯರ ಜೊತೆ ಸಕ್ರೆಬೈಲು ಆನೆ ಬಿಡಾರದ 15 ಮಾವುತರ ಹಾಗೂ ಕಾವಾಡಿಗರು ಭಾಗಿಯಾಗಿದ್ದರು.

ಇದನ್ನೂ ಓದಿ: 3 ದಿನಗಳ ಸತತ ಕಾರ್ಯಾಚರಣೆ: ಕಡಬದಲ್ಲಿ ನರಹಂತಕ ಕಾಡಾನೆ ಸೆರೆ

ಈ ಕಾಡಾನೆಯು ಸುಮಾರು 9 ವರ್ಷದಾಗಿದ್ದು, ಅತ್ಯಂತ ಬಲಿಷ್ಟವಾಗಿದೆ. ಆನೆ ಸೆರೆ ಹಿಡಿಯುವುದು ಕಷ್ಟಕರವಾಗಿತ್ತು.ಆದರೂ ಸಹ ನಾವು ಪ್ರಯತ್ನ ಬಿಡದೆ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಕಾಡಾನೆಯನ್ನು ಸಕ್ರೆಬೈಲಿಗೆ ಕರೆ ತರಬೇಕಿತ್ತು. ಆದರೆ, ರಾಜ್ಯ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ನಾಗರಹೊಳೆಗೆ ರವಾನೆ ಮಾಡುತ್ತಿದ್ದೇವೆ ಎಂದು ಸಕ್ರೆಬೈಲು ವೈದ್ಯಧಿಕಾರಿಯಾದ ಡಾ.ವಿನಯ್ 'ಈಟಿವಿ‌ ಭಾರತ'ಕ್ಕೆ ದೂರವಾಣಿ ಸಂಪರ್ಕದ ಮೂಲಕ ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ: ಕಾಡಾನೆ ಸೆರೆ ಹಿಡಿದ ನಂತರ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ‌ ನೀಡಿ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಭಾಗದ ಜನರ ನಿದ್ದೆ ಗೆಡಿಸಿದ್ದ ಕಾಡಾನೆ ಸೆರೆಯಿಂದ ಜನ ಖುಷಿಯಾಗಿದ್ದಾರೆ. ರೈತರು ಸಹ ಸಂತಸ ಗೊಂಡಿದ್ದಾರೆ ಎಂದರು. ಇನ್ನು ಕಾಡಾನೆ ಸೆರೆ ಹಿಡಿಯಲು ಸಹಕಾರ ನೀಡಿದ ಆರಗ ಜ್ಞಾನೇಂದ್ರ ಹಾಗೂ ಅರಣ್ಯ ಇಲಾಖೆಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.