ETV Bharat / state

ಕಾಂಗ್ರೆಸ್ ಟಿಕೆಟ್ ಘೋಷಣೆ ಚನ್ನಗಿರಿ ವಡ್ನಾಳ್ ರಾಜಣ್ಣ ಅಭಿಮಾನಿಗಳ ಅಸಮಾಧಾನ

author img

By

Published : Apr 7, 2023, 9:37 AM IST

ಕಾಂಗ್ರೆಸ್​ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರ ಕುಟುಂಬ ಸದಸ್ಯರಿಗೆ ಚನ್ನಗಿರಿ ವಿಧಾನಸಭ ಕ್ಷೇತ್ರದಿಂದ ಟಿಕಟ್​ ನೀಡದ್ದಕ್ಕೆ ರಾಜಣ್ಣ ಹಾಗೂ ಅವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ವಡ್ನಾಳ್ ರಾಜಣ್ಣ
ವಡ್ನಾಳ್ ರಾಜಣ್ಣ

ವಡ್ನಾಳ್ ರಾಜಣ್ಣ ಹೇಳಿಕೆ

ಶಿವಮೊಗ್ಗ: ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭ ಕ್ಷೇತ್ರಕ್ಕೆ ಕಾಂಗ್ರೆಸ್​ನ ಬಸವರಾಜ ಶಿವಗಂಗಾ ಅವರಿಗೆ ಟಿಕೆಟ್​ ಘೋಷಣೆ ಆಗುತ್ತಿದ್ದಂತಯೇ ಕಾಂಗ್ರೆಸ್​ನ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಚನ್ನಗಿರಿಯಲ್ಲಿ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದ ವಡ್ನಾಳ್ ರಾಜಣ್ಣ ಅವರ ಸಹೋದರನ ಪುತ್ರರಾರದ ವಡ್ನಾಳ್ ಅಶೋಕ್ ಅಥವಾ ವಡ್ನಾಳ್ ಜಗದೀಶ್ ಅವರಿಗೆ ಟಿಕೆಟ್ ಘೋಷಣೆ ಮಾಡದೇ, ಎರಡು ವರ್ಷಗಳಿಂದ ಚನ್ನಗಿರಿಗೆ ಬಂದು ಪಕ್ಷದ ಕೆಲಸ ಮಾಡುತ್ತಿರುವ ಬಸವರಾಜ ಶಿವಗಂಗಾ ಅವರಿಗೆ ಟಿಕೆಟ್ ನೀಡಿದೆ ಎಂದು ವಡ್ನಾಳ್ ರಾಜಣ್ಣ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್ ಘೋಷಣೆ ಆಗುತ್ತಿದ್ದಂತಯೇ ಬೆಳಗ್ಗೆಯೆ ಚನ್ನಗಿರಿಯಲ್ಲಿ ರಾಜಣ್ಣ ಅಭಿಮಾನಿಗಳು ಹೈಕಮಾಂಡ್ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಸ್ವತಃ ರಾಜಣ್ಣ ಅವರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಈ ಕುರಿತು ಶಿವಮೊಗ್ಗದ ಗಾಂಧಿನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಚನ್ನಗಿರಿ ಕ್ಷೇತ್ರದಿಂದ ನನ್ನ ಅಣ್ಣನ ಮಕ್ಕಳಾದ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ಮುಖಂಡರು​ ಒಪ್ಪಿಗೆ ಸೂಚಿಸಿದ್ದರು. ಚನ್ನಗಿರಿ ಕ್ಷೇತ್ರದ ಜನರು ಕೂಡ ನಿಮ್ಮ ಸಹೋದರನ ಇಬ್ಬರು ಪುತ್ರರ ಪೈಕಿ ಒಬ್ಬರಿಗೆ ಟಿಕೆಟ್​ ಕೊಡಿಸಿ ಎಂದು ನನಗೆ ಒತ್ತಾಯಿಸಿದ್ದರು. ಪಕ್ಷದ ಮುಖಂಡರು ಸಹ ರಾಜಣ್ಣ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್​ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದರು. ಸಿದ್ದರಾಮಯ್ಯ ಚನ್ನಗಿರಿ ಬಂದಂತಹ ಸಂದರ್ಭದಲ್ಲಿ ಇದನ್ನೇ ಹೇಳಿದ್ದರು.

ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಾಗಲೂ ಪಕ್ಷದ ಮುಖಂಡರ ನನ್ನ ಬಳಿಯೇ ಅಭ್ಯರ್ಥಿಗಳ ಹೆಸರನ್ನು ಕೇಳಿ ಪಡೆದಿದ್ದರು. ಈ ವೇಳೆ, ನನ್ನ ಅಣ್ಣನ ಮಕ್ಕಳ ಇಬ್ಬರ ಹೆಸರನ್ನೂ ಸೂಚಿಸಿದ್ದೆ. ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು, ಹಾಗೆಯೇ ದೆಹಲಿಗೆ ಎರಡು ಹೆಸರು ಮಾತ್ರ ಹೋಗಿತ್ತು. ಸುರ್ಜೇವಾಲರೊಂದಿಗೂ ಮಾತನಾಡಿದ್ದ ವೇಳೆ ಅವರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಹಾಗಾಗಿ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡಬಹುದು ಎಂಬ ವಿಶ್ವಾಸವಿತ್ತು. ಆದರೆ ಕೊನೆಯ ಘಳಿಗೆವರೆಗೂ ಗೌಪ್ಯವಾಗಿಟ್ಟು ನನ್ನ ಗಮನಕ್ಕೆ ತರದೇ ಬಸವರಾಜ ಶಿವಗಂಗಾ ಹೆಸರು ಘೋಷಿಸಿರುವುದು ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಕುರಿತು ಮುಂದೆ ನಿರ್ಧಾರವಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಬಳಿಕ ಮಾತನಾಡಿದ ಟಿಕೆಟ್​ ಆಕಾಂಕ್ಷಿಗಳಾದ ವಡ್ನಾಳ್ ಜಗದೀಶ್ ಹಾಗೂ ವಡ್ಮಾಳ್ ಅಶೋಕ್, ನಮಗೆ ಪಕ್ಷ ಮೋಸ ಮಾಡಿದೆ. ನಾವು ತಾಲೂಕಿನಲ್ಲಿ ಪಕ್ಷವನ್ನು ಕಟ್ಟಿದ್ದೆವೆ. ಕ್ಷೇತ್ರದ ಪ್ರತಿ ಹಳ್ಳಿಗೂ ಹೋಗಿದ್ದೆವೆ. ಆದರೆ, ಈಗ ನಮಗೆ ಟಿಕೆಟ್​ ನೀಡದೆ ಹೈ ಕಮಾಂಡ್ ಮೋಸ ಮಾಡಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋಕಾಕ್ ಕ್ಷೇತ್ರದಲ್ಲಿ‌ ಪಂಚಮಸಾಲಿ‌ ಸಮುದಾಯಕ್ಕೆ ಕಾಂಗ್ರೆಸ್ ಮಣೆ: ರಮೇಶ್​ ಜಾರಕಿಹೊಳಿ‌ ವಿರುದ್ಧ ಡಾ.ಮಹಾಂತೇಶ ಕಡಾಡಿ‌ ಕಣಕ್ಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.