ETV Bharat / state

ಶಿವಮೊಗ್ಗದಲ್ಲಿ ದಿಗ್ಗಜ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

author img

By

Published : Apr 17, 2023, 10:41 PM IST

ಶಿವಮೊಗ್ಗದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

Submission of nomination papers
ನಾಮಪತ್ರ ಸಲ್ಲಿಕೆ

ಶಿವಮೊಗ್ಗ : ಇಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಸಹೋದರ ಸವಾಲ್‌ಗೆ ಆಖಾಡವಾದ ಸೊರಬದಲ್ಲಿ ಬಂಗಾರಪ್ಪ ಸಹೋದರರು ಅಪಾರ ಬೆಂಬಲಿಗರೊಂದಿಗೆ ಅಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಕುಮಾರ ಬಂಗಾರಪ್ಪ ಬೆಳಗ್ಗೆ ಸೊರಬ ಪಟ್ಟಣದ ಪ್ರಸಿದ್ದ ದೇವಾಲಯವಾದ ರಂಗನಾಥ ದೇವಾಲಯದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ದೇವಾಲಯದಿಂದ ಪ್ರಮುಖ ರಸ್ತೆಯಲ್ಲಿ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಸುಮಾರು 5 ಸಾವಿರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇತರರು ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಕುಮಾರ ಬಂಗಾರಪ್ಪ, ನಾವು ನಮ್ಮ ಅಭಿವೃದ್ದಿಯ ಮೇಲೆ ಮತಯಾಚನೆ ಮಾಡುತ್ತೇವೆ. ಇದರಿಂದ ಸೊರಬ ಅಲ್ಲದೇ ಜಿಲ್ಲೆಯ ಏಳು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿದ್ದವರು ಯಾರೂ ತೇಲಿ ದಡ ಸೇರಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ಇವರು ಸಹ ರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೂಂದಿಗೆ ದೇವಾಲಯದಿಂದ ಬಸ್ ನಿಲ್ದಾಣವರೆಗೂ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಕಚೇರಿವರೆಗೂ ನಡೆದುಕೊಂಡು ಆಗಮಿಸಿ ನಾಮಪತ್ರ ಸಲ್ಲಿಸಿದರು. ಮಧು ಬಂಗಾರಪ್ಪನವರ ಸಹೋದರಿ ಗೀತಾ ಶಿವರಾಜ ಕುಮಾರ್ ಸಾಥ್ ನೀಡಿದರು.

ನಂತರ ಮಾತನಾಡಿದ ಮಧು ಬಂಗಾರಪ್ಪ, ಇಂದು ನನ್ನ ನಾಮಪತ್ರ ಸಲ್ಲಿಕೆಗೆ ಇಷ್ಟೊಂದು ಜನ ನಮ್ಮ ತಂದೆ ಬಂಗಾರಪ್ಪನವರ ರೂಪದಲ್ಲಿ ಬಂದು ಆಶೀರ್ವಾದ ಮಾಡಿದ್ದಾರೆ. ನಾನು ಈ ಬಾರಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡುತ್ತಿರುವುದು ಸಂತೋಷ ತಂದಿದೆ. ಬೆಳಗಾವಿ, ಹುಬ್ಬಳ್ಳಿಯಲ್ಲಿ ಏನಾಗುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಇದು ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯ ಫಲ ಎಂದರು‌.

ನಂತರ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಮಧು ಪರ ನಾನು ಪ್ರಚಾರ ಮಾಡುತ್ತೇನೆ. ಮಧು ನಮ್ಮ ಕುಟುಂಬದ ಪ್ರೀತಿ ಪಾತ್ರರು. ಏನೇ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುತ್ತಾರೆ. ನನ್ನ ಪತಿಗೂ ಮಧು ಎಂದರೆ ಅಚ್ಚುಮೆಚ್ಚು. ಮಧು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾನೆ. ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಮಧು ಬಂಗಾರಪ್ಪ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿ.ವೈ.ವಿಜಯೇಂದ್ರ ನಾಮಪತ್ರ: ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ತಮ್ಮ ಪತ್ನಿ ಹಾಗೂ ಕೆಲವು ಬೆಂಬಲಿಗರೂಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಶುಭಗಳಿಗೆ ಇದ್ದ ಕಾರಣ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಏಪ್ರಿಲ್ 19 ರಂದು ತಮ್ಮ ತಂದೆ ಸೇರಿದಂತೆ ಅಪಾರ ಬೆಂಬಲಿಗರೂಂದಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಶಿಕಾರಿಪುರದಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ನಾಗರಾಜ ಗೌಡ ತಮ್ಮ ಅಪಾರ ಬೆಂಬಲಿಗರೂಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮಗೆ ಕಾಂಗ್ರೆಸ್ ಪಕ್ಷ ದ್ರೋಹ ಬಗೆದಿದೆ. ಇದರಿಂದ ನಾನು ಅಭಿಮಾನಿಗಳ ಹಾಗೂ ಮತದಾರ ಒತ್ತಾಸೆಗೆ ಸ್ಪರ್ಧೆಗೆ ಇಳಿದಿದ್ದೇನೆ. ಗೆಲುವು ನಮ್ಮದೇ ಎಂದರು.

ಸಾಗರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಾಗರದ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಎಸಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಥ್ ನೀಡಿದ್ದರು.

ಅದೇ ರೀತಿ ತೀರ್ಥಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜರಾಮ ಯಡೂರು ತಮ್ಮ ಬೆಂಬಲಿಗರೂಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.‌ ಶಿವಮೊಗ್ಗದ ಆಪ್ ಪಕ್ಷದ ನೇತ್ರಾವತಿ ನಾಮಪತ್ರ ಸಲ್ಲಿಸಿದರು. ಕೆ.ಆರ್.ಪಿ ಪಕ್ಷದಿಂದ ನಾಮಪತ್ರ ಸಲ್ಲಿಸಲಾಗಿದೆ. ಭದ್ರಾವತಿಯಿಂದ ಪಕ್ಷೇತರರಾಗಿ ಬಿ.ಎನ್.ರಾಜು ರವರು ನಾಮಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ ಇಂದು ಸಲ್ಲಿಕೆಯಾದ ನಾಮಪತ್ರಗಳು: ಭದ್ರಾವತಿ -2, ಶಿಕಾರಿಪುರ-4, ಸಾಗರ-4, ಸೊರಬ-2, ತೀರ್ಥಹಳ್ಳಿ-2, ಶಿವಮೊಗ್ಗ ನಗರ-1.

ಇದನ್ನೂ ಓದಿ : ಬೆಳಗಾವಿಯಲ್ಲಿ ಅಭ್ಯರ್ಥಿಗಳ ನಾಮಪತ್ರ ಭರಾಟೆ: ಶಿಷ್ಯನಿಗೆ ಸಾಥ್ ಕೊಟ್ಟ ರಮೇಶ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.