ETV Bharat / state

ನೌಕರನಿಗೆ ವಯೋ ನಿವೃತ್ತಿ.. ಸರ್ಕಾರಿ ವಾಹನದಲ್ಲೇ ಮನೆಗೆ ಡ್ರಾಪ್ ಮಾಡಿ ಬೀಳ್ಕೊಟ್ಟ ಸಾಗರದ ಉಪವಿಭಾಗಾಧಿಕಾರಿ

author img

By

Published : Aug 1, 2023, 7:25 AM IST

Updated : Aug 1, 2023, 5:18 PM IST

ನಿವೃತ್ತ ಕೃಷ್ಣಪ್ಪ ಜೊತೆಗೆ ಉಪವಿಭಾಗಾಧಿಕಾರಿ ಕಛೇರಿ ಸಿಬ್ಬಂದಿಗಳು
ನಿವೃತ್ತ ಕೃಷ್ಣಪ್ಪ ಜೊತೆಗೆ ಉಪವಿಭಾಗಾಧಿಕಾರಿ ಕಛೇರಿ ಸಿಬ್ಬಂದಿಗಳು

ಸಾಗರದ ಉಪ ವಿಭಾಗಧಿಕಾರಿ ತಮ್ಮ ಕಚೇರಿಯ ಗುಮಾಸ್ತನನ್ನು ಸರ್ಕಾರಿ ವಾಹನದಲ್ಲಿ ಮನೆಗೆ ಡ್ರಾಪ್​ ಮಾಡುವ ಮೂಲಕ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.

ನೌಕರನಿಗೆ ವಯೋ ನಿವೃತ್ತಿ.. ಸರ್ಕಾರಿ ವಾಹನದಲ್ಲೇ ಮನೆಗೆ ಡ್ರಾಪ್ ಮಾಡಿ ಬೀಳ್ಕೊಟ್ಟ ಸಾಗರದ ಉಪವಿಭಾಗಾಧಿಕಾರಿ

ಶಿವಮೊಗ್ಗ: ತಮ್ಮ ಕಚೇರಿಯ ಗುಮಾಸ್ತರೊಬ್ಬರು ವಯೋ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಅವರನ್ನು ಬೀಳ್ಕೊಟ್ಟು, ಎಲ್ಲರಿಗೂ ಮಾದರಿಯಾಗಿದ್ದಾರೆ. ಸಾಗರದ ಉಪ ವಿಭಾಗಧಿಕಾರಿಯಾದ ಪಲ್ಲವಿ ಸಾತೇನಹಳ್ಳಿ ಅವರು ತಮ್ಮ ಕಚೇರಿಯಲ್ಲಿ ಡಿ ಗ್ರೂಪ್​ ನೌಕರರಾಗಿ ನಿವೃತ್ತಿಯಾದ ಕೃಷ್ಣಪ್ಪ ಅವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಮನೆಗೆ ಡ್ರಾಪ್‌ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.

ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರ ವಯೋನಿವೃತ್ತಿ ಹೊಂದಿದರು. ನಿವೃತ್ತರಾದ ಪ್ರಯುಕ್ತ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿಗಳೆಲ್ಲ ಸೇರಿ ಕೃಷ್ಣಪ್ಪ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಕೃಷ್ಣಪ್ಪ ಅವರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್​ ನೌಕರರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಇವರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರನ್ನು ಒಳಗೆ ಬಿಡುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಉಪವಿಭಾಗಾಧಿಕಾರಿಗಳ ಕಚೇರಿ ಒಳಗೆ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ನಡುವೆ ಸೇತುವೆಯಾಗಿ ಕೃಷ್ಣಪ್ಪ ಕಾರ್ಯ ನಿರ್ವಹಿಸುತ್ತಿದ್ದರು.

ಕೃಷ್ಣಪ್ಪ ಅವರ ವಯೋ ನಿವೃತ್ತಿಯಾಗಿರುವುದರಿಂದ ಅವರ ಸೇವೆಯನ್ನು ಗುರುತಿಸಿ ಉಪವಿಭಾಗಾಧಿಕಾರಿಗಳಾದ ಪಲ್ಲವಿ ಅವರು, ತಾವು ಓಡಾಡುವ ಸರ್ಕಾರಿ ವಾಹನದಲ್ಲಿ ಕೃಷ್ಣಪ್ಪ ಅವರನ್ನು ಮನೆಗೆ ತಲುಪಿಸಿ ವಿಶೇಷವಾಗಿ ಸೆಂಡ್​ ಅಪ್​ ಕೊಟ್ಟರು. ಡಿ ಗ್ರೂಪ್​ ಅಧಿಕಾರಿ ಎನ್ನುವ ಭೇದಭಾವ ತೋರದೇ ಇರುವ ಉಪವಿಭಾಗಾಧಿಕಾರಿಗಳ ಕಾರ್ಯ ಇತರರಿಗೆ ಮಾದರಿಯಾಗಿದ್ದು ಮಾತ್ರ ಸುಳ್ಳಲ್ಲ.

'ಕೃಷ್ಣಪ್ಪ ಅವರು ತಾವು ಈ ಹುದ್ದೆಗೆ ಬಂದಾಗಿನಿಂದ ಇವರ ಕೆಲಸದ ಬಗ್ಗೆ ಸಾರ್ವಜನಿಕರಾಗಲಿ, ಅಧಿಕಾರಿಗಳಾಗಲಿ ಒಂದೇ ಒಂದು ದೂರು ಹೇಳಿಲ್ಲ. ನಮ್ಮ ಕೆಲಸದ ಕಾರ್ಯಭಾರವನ್ನು‌ ನೋಡಿಕೊಂಡು, ಜನರನ್ನು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಸಮಭಾವದಿಂದಲೇ ಒಳಗೆ ಬಿಡುತ್ತಿದ್ದರು. ಇವರ ಸೌಜನ್ಯದ ನಡೆಯಿಂದ ನಮ್ಮ ಕಚೇರಿಯಲ್ಲಿ ಆರೋಗ್ಯದ ವಾತಾವರಣ ನಿರ್ಮಾಣವಾಗಿತ್ತು. ಇವರ ನಿವೃತ್ತಿಯಿಂದ ಆ ಜಾಗಕ್ಕೆ ಯಾರನ್ನು ತರಬೇಕೆಂದು ನಾವು ಯೋಚನೆ ಮಾಡುತ್ತಿದ್ದೇವೆ. ಕೃಷ್ಣಪ್ಪ ಅವರ ಸ್ಥಾನಕ್ಕೆ ಇನ್ನೂ ಯಾರು ಸಿಕ್ಕಿಲ್ಲ. ಕೃಷ್ಣಪ್ಪ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಕೃಷ್ಣಪ್ಪನವರು ಅತ್ಯಂತ ಸಂಕೋಚದಿಂದಲೇ ನಾನು ನನ್ನ ಸೇವೆ ಅತ್ಯಂತ ಪ್ರಮಾಣಿಕತೆಯಿಂದ ಮಾಡಿದ್ದೇನಷ್ಟೇ, ನಮ್ಮ ಸೇವೆಗೆ ಎಲ್ಲರ ಸಹಕಾರ ಇತ್ತು ಎಂದು ಸಾರ್ಥಕ ಭಾವದಿಂದಲೇ ಮಾತನಾಡಿದರು. ಮನೆವರೆಗೆ ಬಿಟ್ಟ ಅಧಿಕಾರಿಯನ್ನು ಕೃಷ್ಣಪ್ಪ ಹಾಗು ಅವರ ಮನೆಯವರು ಪ್ರೀತಿಯಿಂದ ಆಹ್ವಾನಿಸಿದಾಗ ಅಧಿಕಾರಿಯೆಂಬ ಯಾವುದೇ ಅಹಂಕಾರ ತೋರದೇ ಅದೇ ಪ್ರೀತಿಯಲ್ಲಿ ಹೋಗಿದ್ದು, ಕುಳಿತು ಮನೆಯವರನೆಲ್ಲ ವಿಚಾರಿಸಿದ್ದು ಪಲ್ಲವಿಯವರ ಸರಳತೆಗೆ ಬೇರೇನು ಹೇಳಬೇಕಾಗಿಲ್ಲ. ದರ್ಪ ತೋರುವ ಅಧಿಕಾರಿಗಳ ನಡುವೆ ಪಲ್ಲವಿ ಸಾತೇನಹಳ್ಳಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ: ಖಾಲಿ ಚೇರ್ ಕಂಡು ಗರಂ

Last Updated :Aug 1, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.