ETV Bharat / state

ಶಿವಮೊಗ್ಗದಿಂದ ತಿರುಪತಿ - ಹೈದರಾಬಾದ್- ಗೋವಾ ವಿಮಾನಯಾನ ಪ್ರಾರಂಭ

author img

By ETV Bharat Karnataka Team

Published : Nov 21, 2023, 5:30 PM IST

Updated : Nov 21, 2023, 5:52 PM IST

ಸಂಸದ ಬಿ ವೈ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಿದರು.

ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಿಂದ ಪ್ರಸಿದ್ಧ ಯಾತ್ರ ಸ್ಥಳವಾದ ತಿರುಪತಿ, ಮುತ್ತಿನನಗರಿ ಹೈದರಾಬಾದ್ ಹಾಗೂ ಪ್ರವಾಸಿ ತಾಣ ಗೋವಾಕ್ಕೆ ಇಂದಿನಿಂದ ಲೋಹದ ಹಕ್ಕಿಯ ಹಾರಾಟ ಅಧಿಕೃತವಾಗಿ ಪ್ರಾರಂಭವಾಗಿದೆ. ಇಂದು ಬೆಳಗ್ಗೆ 9:30 ಕ್ಕೆ ಹೈದರಾಬಾದ್​ನಿಂದ ಸ್ಟಾರ್ ಏರ್​ಲೈನ್ಸ್ ವಿಮಾನ ಸಂಸ್ಥೆಯ E 175 ವಿಮಾನ ಶಿವಮೊಗ್ಗಕ್ಕೆ 10:30 ಕ್ಕೆ ಆಗಮಿಸಿತು. ಈ ವಿಮಾನದಲ್ಲಿ ಇಂದು 25 ಪ್ರಯಾಣಿಕರು ಶಿವಮೊಗ್ಗಕ್ಕೆ ಆಗಮಿಸಿದರು. ಇಂದಿನಿಂದ ಪ್ರಾರಂಭವಾದ ವಿಮಾನಯಾನಕ್ಕೆ ಸ್ಟಾರ್ ಇಂಡಿಯಾದ ವತಿಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.

ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶಾಸಕ ಚನ್ನಬಸಪ್ಪ, ಡಿ ಎಸ್ ಅರುಣ್ ಸೇರಿದಂತೆ ಸ್ಟಾರ್ ಏರ್​ಲೈನ್ಸ್ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ವಿಮಾನ ಸಂಸ್ಥೆಯಿಂದ ಇಂದು ಮೊದಲು ಪ್ರಯಾಣಿಸುವ ಪ್ರಯಾಣಿಕರಿಂದ ಕೇಕ್ ಅನ್ನು ಕಟ್ ಮಾಡಿಸಿದರು. ನಂತರ ಫಸ್ಟ್ ಫ್ಲೈಟ್ ಟಿಕೆಟ್​ ಅನ್ನು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ಸಂಸದರು, ಇಂದಿನ ವಿಮಾನ ಸೇವೆಯು ಉಡಾನ್ ಯೋಜನೆಯಡಿಯಲ್ಲಿ ಪ್ರಾರಂಭ ಮಾಡಲಾಗುತ್ತಿದೆ. ಇಂದಿನ ಮೊದಲ ಪ್ರಯಾಣ ಬೆಳೆಸುತ್ತಿರುವವರಿಗೆ ಅಭಿನಂದನೆಗಳು ಎಂದರು. ಇಂದು ತಿರುಪತಿಗೆ 63 ಪ್ರಯಾಣಿಕರು ಹೊರಟಿದ್ದಾರೆ. ಹೈದರಾಬಾದ್​ನಿಂದ - 43 ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ 63 ಜನ ಹೊರಟಿದ್ದಾರೆ. ತಿರುಪತಿಯಿಂದ - 25 ಜನ ಆಗಮಿಸಿದ್ದಾರೆ. ಗೋವಾಕ್ಕೆ 55 ಜನ ಹೋಗುತ್ತಿದ್ದಾರೆ. ಗೋವಾದಿಂದ 33 ಜನ ಬರುತ್ತಿದ್ದಾರೆ. ಇದರಿಂದ ಒಟ್ಟು 400 ಜನ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇನ್ನು ಇಂಡಿಗೋ ವಿಮಾನದಲ್ಲೂ ಪ್ರತಿ ತಿಂಗಳು ಶೇ 80 ರಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸಿ ಹಾಗೂ ವ್ಯಾಪಾರಿಗಳಿಗೆ ಇದು ತುಂಬ ಅನುಕೂಲವಾಗಲಿದೆ ಎಂದು ಹೇಳಿದರು.

ಏರ್ ಇಂಡಿಯಾ ಶಿವಮೊಗ್ಗ- ದೆಹಲಿ ಸ್ಪೈಸ್ ಜೆಟ್ ಸಹ ಟೆಂಡರ್: ಶಿವಮೊಗ್ಗದಿಂದ ದೆಹಲಿಗೆ ಸಂಚಾರ ಮಾಡಲು ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್​ ವಿಮಾನಗಳು ಹಾರಾಟ ನಡೆಸಲು ಆಸಕ್ತಿ ತೋರಿವೆ. ಈ ಎರಡು ವಿಮಾನ ಸಂಸ್ಥೆಗಳ ಜೊತೆ ಅಗ್ರಿಮೆಂಟ್ ಆಗಿದೆ ಎಂದರು.

ವಿಮಾನ ನಿಲ್ದಾಣದ ಸಣ್ಣಪುಟ್ಟ ಸಮಸ್ಯೆಗೆ ಶೀಘ್ರ ಪರಿಹಾರ: ಚಳಿಗಾಲದಲ್ಲಿ ಮಂಜಿನ ಸಮಸ್ಯೆಯಿಂದ ವಿಮಾನ ಹಾರಾಟಕ್ಕೆ ಅಡ್ಡಿ ಉಂಟಾಗಿದೆ. ಇದನ್ನು ಡಿಸೆಂಬರ್ ಒಳಗೆ ಪರಿಹರಿಸಲಾಗುವುದು. ಬಾಂಬ್ ಥ್ರೆಟ್ ಕಂಟೆಸ್ಸರಿಗಾಗಿ ಇರುವ ಸಮಸ್ಯೆಯನ್ನು ಪರಿಹರಿಸಲು ಸಿಎಂ ಅವರನ್ನು ಭೇಟಿಯಾಗಿ ಮನವಿ ಮೇರೆಗೆ ನಿನ್ನೆ ಬಾಂಬ್ ಥ್ರೆಟ್​ ಪರಿಶೀಲನಾ ಟೀಂ ಬಂದಿದೆ. ಇನ್ನು ಇಂಧನದ ಸಮಸ್ಯೆಯ ಕುರಿತು ಇಲ್ಲೇ ಬಂಕ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅತಿ ಕಡಿಮೆ ದರದಲ್ಲಿ ಪ್ರಪಂಚ ಸುತ್ತುವ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಿ ಎಂದು ಸಂಸದರು ಕರೆ ನೀಡಿದರು.

ವಿಮಾನ ಹಾರಾಟದ ವಿವರ ಇಂತಿದೆ: E 175 ವಿಮಾನವು ಮಂಗಳವಾರ, ಗುರುವಾರ ಹಾಗೂ ಶನಿವಾರ ಹೈದರಾಬಾದ್ ನಿಂದ ಬೆಳಗ್ಗೆ 9:30ಕ್ಕೆ ಹೊರಟು ಶಿವಮೊಗ್ಗಕ್ಕೆ ಬೆಳಗ್ಗೆ 10:30 ಕ್ಕೆ ಬರಲಿದೆ. ಇದೇ ವಿಮಾನ ಬೆ. 11 ಗಂಟೆಗೆ ತಿರುಪತಿಗೆ ಹೊರಟು ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ. ಮಧ್ಯಾಹ್ನ 12:30ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 13:40 ಕ್ಕೆ ಶಿವಮೊಗ್ಗಕ್ಕೆ ಬರಲಿದೆ. ಈ ವಿಮಾನವು ಮಂಗಳವಾರ, ಗುರುವಾರ ಹಾಗೂ ಶನಿವಾರ ಹಾರಾಟ ನಡೆಸಲಿದೆ. ಶಿವಮೊಗ್ಗದಿಂದ ಇದೇ ವಿಮಾನವು 16:30ಕ್ಕೆ ಶಿವಮೊಗ್ಗದಿಂದ ಹೊರಟು 17:35 ಕ್ಕೆ ಹೈದರಾಬಾದ್​ಗೆ ವಿಮಾನ ತಲುಪಲಿದೆ.

ಶಿವಮೊಗ್ಗದಿಂದ ಗೋವಾಕ್ಕೆ: ಶಿವಮೊಗ್ಗದಿಂದ 13.55ಕ್ಕೆ ಹೊರಟು ಗೋವಾಕ್ಕೆ 14.45 ಕ್ಕೆ ಗೋವಾದಲ್ಲಿ ವಿಮಾನ ಇಳಿಯಲಿದೆ. ಶಿವಮೊಗ್ಗದಿಂದ ಗೋವಾಕ್ಕೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸ್ಟಾರ್ ಏರ್​ಲೈನ್ಸ್ ತನ್ನ ಸೇವೆಯನ್ನು ನೀಡಲಿದೆ.

ಇನ್ನು ಶಿವಮೊಗ್ಗದಿಂದ ತಿರುಪತಿಗೆ ಹೊರಟ ದಾವಣಗೆರೆ ಜಿಲ್ಲೆಯ ನಿವಾಸಿಯಾದ ರುದ್ರಮ್ಮ ಎಂಬುವರು ಮಾತನಾಡಿ, ನಾನು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ. ನನ್ನ ಮಕ್ಕಳು ನನಗೆ ತಿರುಪತಿಯಲ್ಲಿ ಶ್ರೀನಿವಾಸನ ದರ್ಶನ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದಾರೆ‌. ನನ್ನ ಮಕ್ಕಳು ಕಷ್ಟಪಟ್ಟು ದುಡಿದು ಹಣ ಸೇರಿಸಿಕೊಂಡು ನನ್ನನ್ನು ವಿಮಾನದಲ್ಲಿ ತಿರುಪತಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದು ನನಗೆ ತುಂಬ ಸಂತೋಷವಾಗಿದೆ ಎಂದರು. ಇದೇ ವೇಳೆ ಹೈದರಾಬಾದ್​ನಿಂದ ಶಿವಮೊಗ್ಗಕ್ಕೆ ಬಂದ ಪ್ರಯಾಣಿಕರು ಸಹ ಅತ್ಯಂತ ಸಂತೋಷವನ್ನು ವ್ಯಕ್ತಪಡಿಸಿದರು.

ಶೈಲಜಾ ನಾಗೇಶ್ ಎಂಬುವರು ಮಾತನಾಡಿ, ಪ್ರಯಾಣ ತುಂಬ ಖುಷಿ ತಂದಿದೆ. ಆದರೆ ವಿಮಾನದಲ್ಲಿ ಕನ್ನಡ ಬಳಸಬೇಕಿದೆ. ನಮಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದಿಲ್ಲ. ನಮ್ಮಂತವರಿಗೆ ಕನ್ನಡ ಬೇಕು ಎಂದರು. ಇದೇ ವೇಳೆ ಪ್ರಿನ್ಸಿ ಎಂಬ ಯುವತಿ ಮಾತನಾಡಿ, ನಾವು ಹೈದರಾಬಾದ್​ನಿಂದ ಇಲ್ಲಿಗೆ ಬರಬೇಕು ಎಂದ್ರೆ ಕನಿಷ್ಠ 14 ಗಂಟೆ ಸಮಯ ಬೇಕಾಗಿತ್ತು. ಈಗ ನನಗೆ ಆಶ್ಚರ್ಯ ಆಗುತ್ತಿದೆ. ಒಂದು ಗಂಟೆ ಹಿಂದೆ ನಾನು ಹೈದರಾಬಾದ್​ನಲ್ಲಿ ಇದ್ದೆ. ಈಗ ಶಿವಮೊಗ್ಗದಲ್ಲಿ ಇದ್ದೇನೆ ಎಂದು ಖುಷಿಯನ್ನು ಹಂಚಿಕೊಂಡರು.

ಇದನ್ನೂ ಓದಿ : ಶಿವಮೊಗ್ಗ.. ನಾಳೆಯಿಂದ ಅನ್ಯ ರಾಜ್ಯಗಳಿಗೆ ವಿಮಾನಯಾನ ಪ್ರಾರಂಭ: ಸ್ಟಾರ್ ಏರ್​ಲೈನ್ಸ್​ನಿಂದ ಸೇವೆ ಶುರು

Last Updated :Nov 21, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.