ETV Bharat / state

ಈಸೂರು ಗ್ರಾಮದಲ್ಲಿ ಆತ್ಮಬಲಿದಾನದ ಅಪರೂಪದ ಸೂರ್ಯಗ್ರಹಣ: ಕಲ್ಯಾಣ ಚಾಲುಕ್ಯರ ಶಾಸನ ಪತ್ತೆ

author img

By

Published : Apr 19, 2021, 3:03 PM IST

ಈಸೂರು ಗ್ರಾಮದ ಸೂಂಟಮುರುಕ ವೀರಭದ್ರ ಮೂರ್ತಿಯ ಬಳಿ ಅಪರೂಪದ ಸೂರ್ಯಗ್ರಹಣದ 176 ಸೆ.ಮೀ ಉದ್ದವಿರುವ ಶಾಸನ ಪತ್ತೆಯಾಗಿದೆ. ಅದೇ ರೀತಿ ಈಸೂರು ಗ್ರಾಮದ ಗಡಿ ಬಸವೇಶ್ವರ ದೇವಾಲಯದ ಹತ್ತಿರ 142 ಸೆ.ಮೀ ಉದ್ದ ಹಾಗೂ 48 ಸೆ.ಮೀ ಅಗಲದ ದಾನದ ಶಾಸನ ಪತ್ತೆಯಾಗಿದೆ.

ಶಿವಮೊಗ್ಗ: 12-13 ನೇ ಶತಮಾನದ ಆತ್ಮಬಲಿದಾನದ ಶಾಸನ ಪತ್ತೆಯಾಗಿದೆ. ಶಿಕಾರಿಪುರ ತಾಲೂಕು ಈಸೂರು ಗ್ರಾಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ‌ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ್ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಅಪರೂಪದ ಸೂರ್ಯ ಗ್ರಹಣದ ಆತ್ಮಬಲಿದಾನದ ಶಾಸನ ಪತ್ತೆಯಾಗಿದೆ.

ಈಸೂರು ಗ್ರಾಮದ ಸೂಂಟಮುರುಕ ವೀರಭದ್ರ ಮೂರ್ತಿಯ ಬಳಿ ಅಪರೂಪದ ಸೂರ್ಯಗ್ರಹಣದ 176 ಸೆ.ಮೀ ಉದ್ದವಿರುವ ಶಾಸನ ಪತ್ತೆಯಾಗಿದೆ. ಅದೇ ರೀತಿ ಈಸೂರು ಗ್ರಾಮದ ಗಡಿ ಬಸವೇಶ್ವರ ದೇವಾಲಯದ ಹತ್ತಿರ 142 ಸೆ.ಮೀ ಉದ್ದ ಹಾಗೂ 48 ಸೆ.ಮೀ ಅಗಲದ ದಾನದ ಶಾಸನವೂ ಪತ್ತೆಯಾಗಿದೆ.

rare inscription found in isur of shivamogga
ಅಪರೂಪದ ಶಾಸನ ಪತ್ತೆ

ಆತ್ಮಬಲಿದಾನ: ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ ಅಥವಾ ದೇಹತ್ಯಾಗ ಎನ್ನಬಹುದು. ಆತ್ಮಬಲಿದಾನವು ಆತ್ಮಹತ್ಯೆಗಿಂತ ವಿಶೇಷವಾಗಿದೆ. ಇದು ಸಮಾಜದ ಒಳಿತಿಗಾಗಿರುವಂತದ್ದು ಹಾಗೂ ಇದು ಪೂರ್ವ ನಿಯೋಜಿತವಾಗಿರುತ್ತದೆ.

ಭಾರತದಲ್ಲಿ ಆತ್ಮಬಲಿದಾನದ ತ್ಯಾಗವು ಪುರಾತನ ಕಾಲದಿಂದಲೂ ಬಂದಿರುವಂತಹದ್ದು. ಸೂರ್ಯಗ್ರಹಣದ ಆತ್ಮಬಲಿದಾನ ಮಾಡಿಕೊಳ್ಳುವುದು ವಿಶೇಷವಾಗಿದೆ. ಆತ್ಮಬಲಿದಾನ ಮಾಡಿಕೊಂಡವರು ಯುದ್ದದಲ್ಲಿ ಮರಣಹೊಂದಿದ ವೀರರಿಕ್ಕಿಂತ ಕಡಿಮೆ ಏನಿಲ್ಲ ಎನ್ನಬಹುದು.

ಹಿಂದೆ ಚಿತಾಪ್ರವೇಶ, ಜಲ ಪ್ರವೇಶ, ಊರ್ಧ್ವ ಪತನ ಇವುಗಳ ಮೂಲಕ ಸೂರ್ಯಗ್ರಹಣದಂದು ಆತ್ಮಬಲಿದಾನ ಮಾಡಿಕೊಳ್ಳುತ್ತಿದ್ದರು. ಚಿತಾ ಪ್ರವೇಶ ಅಂದ್ರ, ಬೆಂಕಿಗೆ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವುದು. ಜಲ ಪ್ರವೇಶ ಅಂದ್ರೆ, ನೀರಿನಲ್ಲಿ ಮುಳುಗಿ ಆತ್ಮಬಲಿದಾನ ಮಾಡಿಕೊಳ್ಳುವುದು ಹಾಗೂ ಊರ್ಧ್ವ ಬಲಿದಾನ ಅಂದ್ರೆ, ಬೆಟ್ಟ, ಮರ ಹಾಗೂ ದೇವಾಲಯಗಳ ಶಿಖರಗಳಿಂದ ಕೆಳಗೆ ಬಿದ್ದು ಅಥವಾ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಎನ್ನಬಹುದಾಗಿದೆ. ಈ ಆತ್ಮ ಬಲಿದಾನದಲ್ಲಿ ಸಹಗಮನ ಪದ್ದತಿ, ಗರುಡ ಪದ್ದತಿ ಹಾಗೂ ಜೈನರ ಸಮಾಧಿ ಮರಣಗಳು ಪ್ರಮುಖವಾಗಿವೆ.

rare inscription found in isur of shivamogga
ಅಪರೂಪದ ಶಾಸನ ಪತ್ತೆ

ಸೂರ್ಯಗ್ರಹಣ ಶಾಸನದ ಸಂಕೇತ: ಸೂರ್ಯಗ್ರಹಣದ ಸಂಕೇತವಾಗಿ ರಾಹು ಅಂದರೆ ಹಾವು ಸೂರ್ಯನನ್ನು ನುಂಗುತ್ತಿರುವುದನ್ನು ಶಿಲ್ಪದಲ್ಲಿ ಕೆತ್ತಿ ತೋರಿಸಲಾಗಿರುತ್ತದೆ. ಸೂರ್ಯನನ್ನು ರಾಹು ನುಂಗುವ ಸಂದರ್ಭ, ಆಗ ಸೂರ್ಯ ಸಂಕಟಪಡುತ್ತಿರುವಂತೆ ತೋರಿಸುವ ಸಹಾನುಭೂತಿಯ ದಿನದಂದು ಆತ್ಮಬಲಿದಾನ ಮಾಡಿಕೊಂಡರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಹಿಂದೂಗಳ ಭಾವನೆಯಾಗಿದೆ.

ಸಮಾಜಕ್ಕೆ ರಾಜ್ಯಕ್ಕೆ,‌ ರಾಜರಿಗೆ ಜನಸಾಮಾನ್ಯರಿಗೆ ಒಳ್ಳೆಯದು ಅಗುತ್ತೆ ಎಂಬ ಕಲ್ಪನೆಯಾಗಿದ್ದು, ಈ‌ ದಿನದಂದು ಆತ್ಮಬಲಿದಾನ ಮಾಡಿಕೊಳ್ಳುತ್ತಿದ್ದರು ಎನ್ನಬಹುದು. ಈ ಶಾಸನದಲ್ಲಿ ಸೂರ್ಯಗ್ರಹಣ‌ದ ಉಲ್ಲೇಖವಿದೆ.

ಸೂರ್ಯಗ್ರಹಣದ ಶಿಲ್ಪವು ಚಚೌಕಾರದಲ್ಲಿದ್ದು, ಕೆಳಭಾಗದಲ್ಲಿ ಅಗ್ನಿ ಜ್ವಾಲೆಯಿದ್ದು, ಇದು ದೀಪದ‌ ರೀತಿಯಿದೆ. ಜ್ವಾಲೆಯ ಮೇಲೆ ವೀರ ಕೈಮುಗಿದು ನಿಂತಿರುವುದು, ಇದರ ಪಕ್ಕದಲ್ಲಿ ಪೂಜೆ ಮಾಡಿ ನಿಲ್ಲಿಸಿದ ಕೋಲು ಇದರ ಮೇಲೆ ಶಾಸನವಿರುವುದು ಮತ್ತೆ ಇದರ ಮೇಲೆ ವೀರ ಕುಳಿತಿರುವುದು ಅಕ್ಕಪಕ್ಕದಲ್ಲಿ ಚಾಮರಧಾರಣೆಯರು ಮೇಲ್ಭಾಗದಲ್ಲಿ ಸೂರ್ಯನನ್ನು ಹಾವು ನುಂಗುತ್ತಿರುವುದು ಕಂಡುಬರುತ್ತಿದೆ. ಬಲಭಾಗದಲ್ಲಿ ಚಂದ್ರನಿದ್ದಾನೆ.

ಈ ರೀತಿ ಸೂರ್ಯಗ್ರಹಣ ಭದ್ರಾವತಿ ತಾಲೂಕಿನಲ್ಲಿ ಹೂಯ್ಸಳರ ಕಾಲದಲ್ಲಿ ಎರಡು ಆತ್ಮಬಲಿದಾನದ ಸೂರ್ಯಗ್ರಹಣ ಶಾಸನ ಹಿಂದೆ ಪತ್ತೆಯಾಗಿವೆ.‌

ಈಸೂರಿನ ಗಡಿ ಬಸವೇಶ್ವರ ದೇವಾಲಯದ ಹತ್ತಿರದ ಶಾಸನ: ಈ ಶಾಸನ ತೃಟಿತವಾಗಿದ್ದು, 49 ಸಾಲಿನ ದಾನದ ಶಾಸನವಾಗಿದೆ. ಕ್ರಿ.ಶ. 1162 ರ ಕಲ್ಯಾಣ ಕಾಲದ ಆರನೇ ವಿಕ್ರಮಾದಿತ್ಯನ ಕಾಲದ ಶಾಸನವಾಗಿದೆ. ಇದರಲ್ಲಿ ಈಸೂರನ್ನು ಈಸಪುರ ಎಂದು ಕರೆಯಲಾಗುತ್ತಿತ್ತು. ಮಲ್ಲಿಕಾರ್ಜುನ ದೇವಾಲಯಕ್ಕೆ ವಡ್ಡರಾವುಳ ಸುಂಕ, ಪೆರ್ಜುಂಕ ಸುಂಕ, ಎರಡು ಬಿಲ್ಕೊಡೆ ಸುಂಕ ಮೊದಲಾದವನ್ನು ದಾನವಾಗಿ ಬಿಟ್ಟಿರುವುದು‌ ತಿಳಿದುಬರುತ್ತದೆ.

ಸರ್ಕಾರಿ ಪ್ರೌಢಶಾಲೆ ಹತ್ತಿರದ ದಾನ ಶಾಸನ: ಇದು 11-12 ನೇ ಶತಮಾನದ ಶಾಸನವಾಗಿದೆ. ಇದು ತುಂಬಾ ತೃಟಿತವಾಗಿದೆ ಎಂದು ಆರ್. ಶೇಜೇಶ್ವರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.