ETV Bharat / state

2023ರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

author img

By ETV Bharat Karnataka Team

Published : Dec 31, 2023, 5:10 PM IST

2023ರಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ವಿವಿಧ ಘಟನಾವಳಿಗಳ ಹಿನ್ನೋಟ ಇಲ್ಲಿದೆ.

major-incidents-in-shivamogga-and-chikkamagaluru-in-2023
2023ರಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

ಶಿವಮೊಗ್ಗ : 2023ರಲ್ಲಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನಾವಳಿಗಳ ಹಿನ್ನೋಟ ಇಲ್ಲಿದೆ. ಒಂದು ರೀತಿಯಲ್ಲಿ ಈ ವರ್ಷ ಜಿಲ್ಲೆಗೆ ಹರುಷದ ವರ್ಷ ಎಂದು ಹೇಳಬಹುದು. 2023ರ ಫೆಬ್ರವರಿ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲೆಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಬಳಿಕ ಸೆಪ್ಟಂಬರ್​ನಲ್ಲಿ ವಿಮಾನ ನಿಲ್ದಾಣವು ಕಾರ್ಯಾರಂಭವಾಗಿತ್ತು.

ರಾಜಕೀಯ : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಹಿಡಿತ ಸಾಧಿಸಿ ಸತತ ಗೆಲುವು ಕಂಡಿದ್ದ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಹಾಗೂ ಕೆ ಎಸ್ ಈಶ್ವರಪ್ಪ ಅವರು ತಮ್ಮ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದರು.

ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಿವೃತ್ತಿ ನಂತರ ದ್ವಿತೀಯ ಪುತ್ರ ಬಿ ವೈ ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡಿ ಗೆದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ಸೊರಬದಿಂದ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ ಮಧು ಬಂಗಾರಪ್ಪ ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಗೆದ್ದು ಬೀಗಿದರು. ಜೊತೆಗೆ ಪ್ರಥಮ ಬಾರಿಗೆ ಸಚಿವರಾಗಿ ಆಯ್ಕೆಯಾದರು.

ಯಡಿಯೂರಪ್ಪಗೆ ಗೌರವ ಡಾಕ್ಟರೇಟ್‌ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ಹಾಗೂ ಮೀನುಗಾರಿಕ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಕಾಗೋಡು ತಿಮ್ಮಪ್ಪಗೆ ದೇವರಾಜ ಅರಸು ಪ್ರಶಸ್ತಿ : ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯ ಸರ್ಕಾರ ದೇವರಾಜ ಅರಸ್ ಪ್ರಶಸ್ತಿ ನೀಡಿ ಗೌರವಿಸಿತು.

ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ : ಕನ್ನಡ, ಸಂಸ್ಕೃತಿ ಹಾಗೂ ಕಲಾ ಸೇವೆ ಗುರುತಿಸಿ ರಾಜ್ಯ ಸರ್ಕಾರ ಈ ಬಾರಿ ಸಂಘ ಸಂಸ್ಥೆಗೆ ನೀಡುವ ಪ್ರಶಸ್ತಿಯನ್ನು ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ನೀಡಿತು. ಚಿದಾನಂದ ಜಂಬೆ ಅವರು ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಕೊಡುಗೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.

ಗಾಂಜಾ ಬೆಳೆದ ವಿದ್ಯಾರ್ಥಿಗಳು : ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಣದ ಆಸೆಗೆ ಮನೆಯಲ್ಲಿ ಕೃತಕ ಬೆಳಕಿನಲ್ಲಿ ಗಾಂಜಾ ಬೆಳೆದು ಸರಬರಾಜು ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಶಿವಮೊಗ್ಗ ಗ್ರಾಮಾಂತರ ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

ರಾಗಿಗುಡ್ಡದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಗಿಗುಡ್ಡದಲ್ಲಿ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಲ್ಲಿ ಹಲವು ಮನೆ, ವಾಹನಗಳು ಜಖಂ ಆಗಿದ್ದವು. ಕೆಲವರಿಗೆ ಗಂಭೀರ ಗಾಯಗಳಾಗಿದ್ದವು. ಸತತ 20 ದಿನ 144 ಸೆಕ್ಷನ್ ಜಾರಿಯಲ್ಲಿತ್ತು. ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ನೇತೃತ್ವದ ಸತ್ಯಶೋಧನ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು.

ಜಂಬೂ ಸವಾರಿಗೆ ಬಂದು ಮರಿ ಹಾಕಿದ ಆನೆ : ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾ ಹಬ್ಬದ ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆ ದಸರಾ ಹಬ್ಬದ ಸಂದರ್ಭದಲ್ಲಿಯೇ ಮರಿ ಹಾಕಿತ್ತು.

ರೈತ ಮಹಿಳೆಯನ್ನು ಬಲಿ ಪಡೆದ ಚಿರತೆ : ಶಿವಮೊಗ್ಗ ತಾಲೂಕು ಬಿಕ್ಕೂನಹಳ್ಳಿಯ ರೈತ ಮಹಿಳೆ ಯಶೋಧಮ್ಮ ಎಂಬವರನ್ನು ಚಿರತೆ ಕೊಂದು ಹಾಕಿತ್ತು. ಭದ್ರಾವತಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದರು.

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಘಟನೆ : ಭದ್ರಾವತಿ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಭದ್ರಾವತಿ ಬಿಇಓ ಶಾಲೆಗೆ ಭೇಟಿ ನೀಡಿ ಡಿಡಿಪಿಐಗೆ ವರದಿ ನೀಡಿದ್ದರು. ಬಳಿಕ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದರು.

ಕರಿಮರ ವಶಕ್ಕೆ ಪಡೆದ ಅರಣ್ಯ ಇಲಾಖೆ : ಅತಿ ವಿರಳವಾದ ಕರಿಮರವನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡಿದ್ದರು.

ಎರಡು ದಿನ ಕಾಡಿನಲ್ಲಿದ್ದ ಶಾರದಮ್ಮ : ಹೊಸನಗರ ತಾಲೂಕು ಸಾದಗಲ್ಲು ಗ್ರಾಮದ ಶಾರದಮ್ಮ ಎಂಬವರು ದನಗಳನ್ನು ಕರೆದುಕೊಂಡು ಬರಲು ಹೋಗಿ ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿಕೊಂಡಿದ್ದರು. ಎರಡು ದಿನ ಅನ್ನ ನೀರು ಇಲ್ಲದೆ ಕಾಡಿನಲ್ಲಿದ್ದು ಪವಾಡ ಸದೃಶ್ಯದಂತೆ ವಾಪಸ್​ ಆಗಿದ್ದರು.

ಚಿಕ್ಕಮಗಳೂರು ಜಿಲ್ಲೆಯ 2023ರ ಹಿನ್ನೋಟ : 2023ರಲ್ಲಿ ಕಾಫಿನಾಡಿನಲ್ಲಿ ಹಲವು ಸಿಹಿ ಮತ್ತು ಕಹಿ ಘಟನೆಗಳು ನಡೆದಿವೆ. ಜಿಲ್ಲೆಯು ರಾಜಕೀಯ ಬದಲಾವಣೆ, ಕಾಡುಪ್ರಾಣಿ - ಮಾನವಸಂಘರ್ಷದಿಂದ ಸಾವು ನೋವು, ಬರದ ಬವಣೆ ಮುಂತಾದ ಘಟನೆಗೆ ಸಾಕ್ಷಿಯಾಗಿದೆ.

2023ರ ಜ.18ರಂದು ಚಿಕ್ಕಮಗಳೂರು ಹಬ್ಬಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಜ್ಞಾನವೈಭವ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮಗಳು ನಡೆದಿದ್ದವು. ಜ.26ರಂದು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಧ್ವಜರೋಹಣ ನೆರವೇರಿಸಿದ್ದರು.

ಫೆ.4 ರಂದು ಅಂದಿನ ಕಂದಾಯ ಸಚಿವ ಆರ್ ಅಶೋಕ್, ನಗರದ ದಂಟರಮಕ್ಕಿಯಲ್ಲಿ 60 ಕೋಟಿ ರೂ. ವೆಚ್ಚದ ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಫೆ.5 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲಿಟ್ಟಿದ್ದರು.

ಆರ್.ಅಶೋಕ್, ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಫೆ.6ರಂದು ಗ್ರಾಮದ ಪರಿಶಿಷ್ಟ ಜಾತಿ ಕುಟುಂಬದವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ್ದರು.

ಫೆ.9ರಂದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೆ.ಎನ್. ಚಂದ್ರಯ್ಯ, ದಿನೇಶ್ ಪಟವರ್ಧನ್, ಪ್ರಭುಲಿಂಗ ಶಾಸ್ತ್ರಿ ಸೇರಿದಂತೆ ಆರು ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಗುಂಡಿನ ದಾಳಿಗೆ ಇಬ್ಬರು ಬಲಿ : ಇಲ್ಲಿನ ನರಸಿಂಹರಾಜಪುರ ತಾಲೂಕು ಬಿದಿರೆ ಗ್ರಾಮದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರು ಮೃತಪಟ್ಟಿದ್ದರು. ಪ್ರವೀಣ್ ಹಾಗೂ ಪ್ರಕಾಶ್ ಮೃತಪಟ್ಟವರು.

ಮಾರ್ಚ್ 5 ರಂದು ಬಾಳೆಹೊನ್ನೂರು ಶ್ರೀರಂಭಾಪುರಿ ಪೀಠದಲ್ಲಿ ಹಮ್ಮಿಕೊಂಡಿದ್ದ ಶ್ರೀರಂಭಾಪುರಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಈ ವೇಳೆ ಬಿ ಎಸ್ ಯಡಿಯೂರಪ್ಪ ಅವರಿಗೆ ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಏಪ್ರಿಲ್ 21ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ. 83.28ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯದಲ್ಲಿ ಆರನೇ ಸ್ಥಾನ ಪಡೆದುಕೊಂಡಿತ್ತು.

ಏಪ್ರಿಲ್ 2‌ರಂದು ಚಿಕ್ಕಮಗಳೂರು ನಗರಕ್ಕೆ ಕಾಂಗ್ರೆಸ್​ ನಾಯಕ ರಾಹುಲ್‍ಗಾಂಧಿ ಆಗಮಿಸಿ ಐದು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ, ರೋಡ್ ಶೋ ನಡೆಸಿದ್ದರು. ಕೊಪ್ಪ ತಾಲೂಕು ಲಾಲ್‍ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಏಪ್ರಿಲ್ 26ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಭೇಟಿ ನೀಡಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಿದರು. ಸಿ ಟಿ ರವಿ ವಿರುದ್ಧ ಅವರ ಆಪ್ತ ಹೆಚ್ ಡಿ ತಮ್ಮಯ್ಯ ಜಯ ಸಾಧಿಸಿದರು. ಕಡೂರಿನಲ್ಲಿ ಕೆ ಎಸ್​ ಆನಂದ್, ಮೂಡಿಗೆರೆಯಲ್ಲಿ ನಯನಾ ಮೋಟಮ್ಮ, ಶೃಂಗೇರಿಯಲ್ಲಿ ಟಿ ಡಿ ರಾಜೇಗೌಡ ಎರಡನೇ ಬಾರಿಗೆ ವಿಜಯದ ಮಾಲೆ ಧರಿಸಿದರು. ತರೀಕೆರೆ ಜಿ.ಎಚ್.ಶ್ರೀನಿವಾಸ್ ಜಯ ಗಳಿಸಿದರು.

ಮೇ 30 ರಂದು ಸ್ನೇಕ್ ನರೇಶ್ ನಾಗರಹಾವು ಕಚ್ಚಿ ಮೃತಪಟ್ಟರು. ಅರಣ್ಯ ಇಲಾಖೆ ಸಿಬ್ಬಂದಿ ಸ್ನೇಕ್‍ ನರೇಶ್ ಮನೆ ಪರಿಶೀಲನೆ ನಡೆಸಿದ ವೇಳೆ ಅಲ್ಲಿದ್ದ ಜೀವಂತ ನಾಗರಹಾವು, ಕೊಳಕ ಮಂಡಲ ಸೇರಿದಂತೆ ಹಲವು ಹಾವುಗಳನ್ನು ಕಂಡು ಬೆಚ್ಚಿಬಿದ್ದಿದ್ದರು.

ಜೂ.7 ರಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ ಜೆ ಜಾರ್ಜ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತು. ಜೂನ್​, ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿತು.

ಜುಲೈ 16ರಂದು ಆಂದ್ರಪ್ರದೇಶದ ಶ್ರೀಹರಿಕೋಟದಲ್ಲಿ ಇಸ್ರೋ ವಿಜ್ಞಾನಿಗಳ ತಂಡ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿತು. ಚಂದ್ರಯಾನ-3 ತಂಡದಲ್ಲಿ ಜಿಲ್ಲೆಯ ಬಾಳೆಹೊನ್ನೂರು ಮೂಲದ ಯುವತಿ ಡಾ ಕೆ. ನಂದಿನಿ ಕಾರ್ಯ ನಿರ್ವಹಿಸಿದ್ದರು.

ಆಗಸ್ಟ್ 12ರಂದು ಅಕ್ರಮವಾಗಿ ಸರ್ಕಾರಿ ಭೂಮಿ ಮಂಜೂರು ಆರೋಪದಡಿ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಉಮೇಶ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ಸೆಪ್ಪೆಂಬರ್ 9ರಂದು ಮೂಡಿಗೆರೆ ತಾಲೂಕಿನಲ್ಲಿ ಜಮೀನು ವಿವಾದ ಹಿನ್ನೆಲೆ ರೈತ ಸಂಘದ ದುಗ್ಗಪ್ಪಗೌಡ ಎಂಬವರು ಮನೆ ಮಹಡಿ ಮೇಲೆ ನಿಂತು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಸೆಪ್ಪೆಂಬರ್ 3ರಂದು ಕಾಡಾನೆ ದಾಳಿಗೆ ಕಂಚುಕಲ್ಲುದುರ್ಗಾ ಗ್ರಾಮದ ಕಿನ್ನಿ ಎಂಬುವರು ಮೃತಪಟ್ಟರು.

ಅಕ್ಟೋಬರ್ 25ರಂದು ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರಿ ಸದ್ದು ಮಾಡಿದ್ದು, ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಮಾರ್ಕಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚರನ್ನು ಬಂಧಿಸಲಾಗಿತ್ತು. ಕೊಪ್ಪ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಹುಲಿಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದರು.

ಅಕ್ಟೋಬರ್ 31ರಂದು ಜಿಲ್ಲೆಯ ಸೋಭಾನೆ, ಭಜನಪದ, ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿತು. ನವೆಂಬರ್ 2 ರಂದು ಚೀನಾದ ಹಾಂಗೌಜ್‍ನಲ್ಲಿ ನಡೆದ ಪ್ಯಾರಾ ಏಷ್ಯನ್​ ಗೇಮ್ಸ್​​ ನಲ್ಲಿ ಚಿನ್ನದ ಪದಕ ಗೆದ್ದ ಜಿಲ್ಲೆಯ ರಕ್ಷಿತಾ ರಾಜು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಿದರು.

ನವೆಂಬರ್ 5ರಂದು ಜಿಲ್ಲೆಯ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ಶ್ರೀರಾಮಸೇನೆ ಹಮ್ಮಿಕೊಂಡಿದ್ದ 20ನೇ ವರ್ಷದ ದತ್ತಮಾಲಾ ಅಭಿಯಾನ ಶಾಂತಿಯುತವಾಗಿ ತೆರೆಕಂಡಿತು. ನವೆಂಬರ್ 7 ರಂದು ಮಾಜಿ ಕೇಂದ್ರ ಸಚಿವ ಡಿ.ಬಿ ಚಂದ್ರೇಗೌಡ ವಿಧಿವಶರಾದರು. ಸಿಎಂ ಸಿದ್ದರಾಮಯ್ಯ ಪಾರ್ಥಿವ ಶರೀರದ ದರ್ಶನ ಪಡೆದರು. ನವೆಂಬರ್ 8ರಂದು ಆಲ್ದೂರು ಸಮೀಪದ ಹಡದಾಳು ಗ್ರಾಮದಲ್ಲಿ ವೀಣಾ ಎಂಬುವರು ಕಾಡಾನೆ ದಾಳಿಗೆ ಮೃತಪಟ್ಟರು.

ನವೆಂಬರ್ 10 ರಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಸ್ವಪಕ್ಷೀಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಯಿತು. ನವೆಂಬರ್ 12 ರಂದು ಸಾವಿರಾರು ಭಕ್ತರು ದೇವಿರಮ್ಮ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದರು. ನ.22 ರಂದು ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಕಾಟ ತೀರ್ವಗೊಂಡಿದ್ದು ಭೈರಾಪುರದಲ್ಲಿ ಕಾಡಾನೆ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಆನೆ ನಿಗ್ರಹ ಪಡೆಯ ಸಿಬ್ಬಂದಿ ಗೌಡಳ್ಳಿಯ ಕಾರ್ತಿಕ್‍ಗೌಡ ಮೃತಪಟ್ಟರು.

ಡಿ.1 ರಂದು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ವಕೀಲ ಪ್ರೀತಮ್‍ ಅವರನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಈ ಹಲ್ಲೆಯನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದ್ದರು. ಈ ಸಂಬಂಧ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಪೊಲೀಸರು ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು.

ಡಿ. 12ರಂದು ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಶ್ವೇತಾ ಎಂಬ ಮಹಿಳೆ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಕುಟುಂಬಸ್ಥರು ಇದು ಸಹಜ ಸಾವಲ್ಲ ವಿಷ ನೀಡಿ ಸಾಯಿಸಲಾಗಿದೆ ಆರೋಪಿಸಿದರು. ಈ ವೇಳೆ ಪತಿ ದರ್ಶನ್‍ನನ್ನು ವಿಚಾರಣೆಗೊಳಪಡಿಸಿದಾಗ ತಾನೇ ಸೈನೈಡ್ ನೀಡಿ ಸಾಯಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದ.

ಡಿ.24 ದತ್ತಜಯಂತಿ ಅಂಗವಾಗಿ ಮಹಿಳೆರು ಅನುಸೂಯ ಜಯಂತಿ ಆಚರಿಸಿದರು. 25ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಡಿ.26ರಂದು ಭಕ್ತರು ದತ್ತಪಾದುಕೆ ದರ್ಶನ ಪಡೆಯುವುದರೊಂದಿಗೆ ದತ್ತಜಯಂತಿ ಮುಕ್ತಾಯಗೊಂಡಿತು.

ಇದನ್ನೂ ಓದಿ : 2023ರಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.