ETV Bharat / state

2023ರಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

author img

By ETV Bharat Karnataka Team

Published : Dec 30, 2023, 8:24 PM IST

Updated : Dec 30, 2023, 8:52 PM IST

important-incidents-in-mysuru-in-2023
2023ರಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

2023ರಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳಿಗೆ ಹಿನ್ನೋಟ ಇಲ್ಲಿದೆ.

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2023ರಲ್ಲಿ ಹಲವು ಪ್ರಮುಖ ಘಟನಾವಳಿಗಳು ನಡೆದಿವೆ. ಪ್ರಮುಖವಾಗಿ ಈ ವರ್ಷ ಸಾಹಸಸಿಂಹ ವಿಷ್ಣುವರ್ಧನ್​ ಸ್ಮಾರಕ ಲೋಕಾರ್ಪಣೆ, ವಿಶ್ವ ವಿಖ್ಯಾತ ಮೈಸೂರು ದಸರಾ, ಮಾಜಿ ಸಂಸದ ಧ್ರುವ ನಾರಾಯಣ್​ ನಿಧನ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಚಿರತೆ - ಹುಲಿ - ಕಾಡಾನೆ ದಾಳಿ ಸೇರಿದಂತೆ ಹಲವು ಘಟನೆಗಳು ಜರುಗಿವೆ. ಈ ವರ್ಷ ನಡೆದ ಘಟನಾವಳಿಗಳ ಹಿನ್ನೋಟ ಇಲ್ಲಿದೆ.

ಜನವರಿ -2023 : 2023ರ ಜನವರಿಯಲ್ಲಿ ಹಲವು ಪ್ರಮುಖ ಘಟನೆಗಳಿಗೆ ಮೈಸೂರು ಜಿಲ್ಲೆ ಸಾಕ್ಷಿಯಾಯಿತು. ಇದರಲ್ಲಿ ಪ್ರಮುಖವಾಗಿ ಸಿಎಫ್​ಟಿಆರ್​ಐನಲ್ಲಿ ಚಿರತೆ ಪ್ರತ್ಯಕ್ಷವಾಗಿ ಮೈಸೂರಿನ ಜನರು ಭಯಭೀತರಾಗಿದ್ದರು. ಚಾಮುಂಡಿ ಬೆಟ್ಟದ ದೇವಿಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆದಿದೆ. ಹೆಚ್ ಡಿ ಕೋಟೆ ಬಳಿ ಕಾಡಾನೆ ದಾಳಿಗೆ ಓರ್ವ ಬಲಿ, ಹುಲಿ ದಾಳಿಗೆ ಯುವಕನೋರ್ವ ಬಲಿಯಾಗಿದ್ದನು. ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸಿದ ಪ್ರಕರಣವೊಂದರ ಆರೋಪಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತ್​ನಲ್ಲಿ ಬಂಧಿಸಿದ್ದರು. ಹಾಲಾಳುವಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿತ್ತು.

important-incidents-in-mysuru-in-2023
ಮೈಸೂರು ದಸರಾ ಆಚರಣೆ

ಫೆಬ್ರವರಿ -2023 : ವಿಧಾನಸಭೆ ಚುನಾವಣೆ ಹಿನ್ನೆಲೆ ಫೆಬ್ರವರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ ಟಿ ದೇವೇಗೌಡ ಅವರು ಮಹಾಶಕ್ತಿ ಪ್ರದರ್ಶನ ಮಾಡಿದ್ದರು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ದರೋಡೆ ನಡೆದಿತ್ತು.

ಮಾರ್ಚ್ -2023: ಮಾರ್ಚ್ ತಿಂಗಳಲ್ಲಿ ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನರಾಗಿದ್ದು, ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳು ಹಾಕಿದ ಬೆಂಕಿಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿತ್ತು. ಸುಯೇಜ್ ಫಾರಂ ಸೇರಿ ಐದು ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದೇ ತಿಂಗಳಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯೂ ಪ್ರಾರಂಭವಾಗಿತ್ತು.

important-incidents-in-mysuru-in-2023
ಮೈಸೂರು ಅರಮನೆ

ಏಪ್ರಿಲ್ - 2023: ಎಪ್ರಿಲ್​ನಲ್ಲಿ ನಂಜನಗೂಡಿನಲ್ಲಿ ಪ್ರಸಿದ್ಧ ಪಂಚ ಮಹಾರಥೋತ್ಸವ ಜರುಗಿತ್ತು. ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಮತ್ತು ಇನ್ಫೋಸಿಸ್ ಫೌಂಡೇಶನ್​ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ನಾಲ್ವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು. ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡಿದ್ದರು. ಈ ವೇಳೆ 50ನೇ ಹುಲಿ ಸಂರಕ್ಷಿತ ಪ್ರದೇಶಗಳ ವಾರ್ಷಿಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಮೈಸೂರಿನ ರಾಜಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ವಿ. ಸೋಮಣ್ಣ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಎರಡು ಕಡೆ ಸ್ಫರ್ಧೆ ಮಾಡಿ ಸೋತಿದ್ದರು. ಹೂಟಗಳ್ಳಿ ಬಳಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ನಡೆದಿತ್ತು.

important-incidents-in-mysuru-in-2023
ಬೆಂಗಳೂರು - ಮೈಸೂರು ಹೆದ್ದಾರಿ

ಮೇ - 2023: ಮೇ ತಿಂಗಳಲ್ಲಿ ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅಸ್ವಸ್ಥಗೊಂಡು ಅಸುನೀಗಿತ್ತು. ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಿದ್ದರು. ವರುಣಾದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಟರು ಭಾಗವಹಿಸಿದ್ದರು. ನಂಜನಗೂಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆ ಚುನಾವಣಾ ಪ್ರಚಾರ ನಡೆಸಿದ್ದರು. ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದರು. ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ತಿ.ನರಸೀಪುರದ ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬಳ್ಳಾರಿ ಮೂಲದ 10 ಮಂದಿ ಸಾವನ್ನಪ್ಪಿದ್ದರು.

ಜೂನ್ -2023 : ಈ ತಿಂಗಳಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಿದ್ಧಾರ್ಥ ಲೇಔಟ್​​ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ನಡೆದಿತ್ತು. ದೇವಿಯನ್ನು ನೋಡಲು ಬೆಟ್ಟದಲ್ಲಿ ಜನಸಾಗರವೇ ನೆರೆದಿತ್ತು.

ಜುಲೈ - 2023: ಈ ತಿಂಗಳಲ್ಲಿ ಮೈಸೂರು ಸಾಹಿತ್ಯೋತ್ಸವಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದ್ದರು. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. ಟಿ.ನರಸೀಪುರ ತಾಲ್ಲೂಕಿನ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿತ್ತು. ಮೈಸೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು.

ಆಗಸ್ಟ್ - 2023: ದಸರಾ ಉದ್ಘಾಟನೆಗೆ ಹಂಸಲೇಖ ಅವರನ್ನು ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿದರು. ಮೈಸೂರಿನಲ್ಲಿ ಅಗ್ನಿ ವೀರರ ಸೇನಾ ನೇಮಕಾತಿ ನಡೆದಿತ್ತು. ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ್ದರು. ಸಹಕಾರ ಕೃಷಿ ಪದ್ಧತಿ ಜಾರಿಯಾಯಿತು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಒಂದೇ ರಾತ್ರಿ ಎರಡು ಕಡೆ ದರೋಡೆ ನಡೆದಿತ್ತು.

ಸೆಪ್ಟೆಂಬರ್ -2023 : ಸಾಂಪ್ರದಾಯಿಕ ಪೂಜೆಯೊಂದಿಗೆ ದಸರಾ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಅರಮನೆಯ ಅಂಗಳಕ್ಕೆ ಗಜಪಡೆ ಬಂದಿಳಿದಿತ್ತು. ಸೋಮನಾಥಪುರ ಸೇರಿದಂತೆ ರಾಜ್ಯದ ಮೂರು ಹೊಯ್ಸಳರ ದೇವಾಲಯಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಲಾಯಿತು.

ಅಕ್ಟೋಬರ್ -2023 : ಅಕ್ಟೋಬರ್ ತಿಂಗಳಿನಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಯುವ ಸಂಭ್ರಮಕ್ಕೆ ತಾರೆಯರಾದ ವಸಿಷ್ಠ ಸಿಂಹ ದಂಪತಿ ಚಾಲನೆ ನೀಡಿದ್ದರು. ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಿಸಲಾಗಿತ್ತು. ಮೈಸೂರಿನ ಸಿಎಂ ಸಿದ್ದರಾಮಯ್ಯ ಮನೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಮನೆಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿತ್ತು.

ಮೈಸೂರು ದಸರಾಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಉದ್ಘಾಟಕರಾದ ಹಂಸಲೇಖ ಸೇರಿದಂತೆ ಹಲವು ಗಣ್ಯರಿಗೆ ಜಿಲ್ಲಾಡಳಿತ ಆಹ್ವಾನ ನೀಡಿತ್ತು. ಇನ್ನೊಂದೆಡೆ ಮಹಿಷಾ ದಸರಾ ಅದ್ಧೂರಿಯಾಗಿ ನಡೆಯಿತು. ನಾಡಹಬ್ಬ ದಸರಾಗೆ ನಾದಬ್ರಹ್ಮ ಹಂಸಲೇಖ ಅವರು ವಿದ್ಯುಕ್ತ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ. ಪಿ ಎಸ್ ಶಂಕರ್, ಕೆ ಬಿ ಗಣಪತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ದಸರಾ ವೇಳೆ ಅದ್ಧೂರಿಯಾಗಿ ಜಂಬೂಸವಾರಿ ನಡೆಯಿತು. ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಸೇರಿದ್ದರು. ರೋಮಾಂಚನಕಾರಿ ಸಾಹಸಗಳೊಂದಿಗೆ ಪಂಜಿನ ಕವಾಯತು ಮುಕ್ತಾಯಗೊಂಡಿತು. ಲಾಲ್ ಬಾಗ್ ಮಾದರಿ ಮೈಸೂರಿನಲ್ಲಿ ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟ ಮಾಡುವುದಾಗಿ ಸಿಎಂ ಘೋಷಣೆ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಹೆಚ್ ಡಿ ಕೋಟೆ ಬಳಿ ಕಾಡಾನೆ ದಾಳಿಗೆ ಯುವಕ ಬಲಿಯಾಗಿದ್ದನು.

ನವೆಂಬರ್ -2023 : ಮೈಸೂರಿನ ಲಲಿತ್ ಮಹಲ್ ಅರಮನೆಯನ್ನು ನವೀಕರಣ ಮಾಡಲಾಯಿತು. ಮೈಸೂರಿನಲ್ಲಿ 600ಕ್ಕೂ ಹೆಚ್ಚು ಭ್ರೂಣ ಹತ್ಯೆ ಸಂಬಂಧ ಚೆನ್ನೈನ ವೈದ್ಯ ಸೇರಿದಂತೆ 9 ಮಂದಿ ಬಂಧನ ಮಾಡಲಾಯಿತು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಯಿತು. ಕುವೆಂಪು ನಗರದಲ್ಲಿ ಹಾಡಹಗಲೇ ಸರ್ಕಾರಿ ಅಧಿಕಾರಿಯ ಪತ್ನಿ ಹತ್ಯೆ ಮಾಡಿದ ಘಟನೆ ನಡೆದಿತ್ತು.

ಡಿಸೆಂಬರ್ -2023: ಡಿಸೆಂಬರ್ ತಿಂಗಳ ಆರಂಭದಲ್ಲೇ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ಕಾದಾಟದಲ್ಲಿ ಮೃತಪಟ್ಟಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅರ್ಜುನ ಆನೆಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಲೋಕಸಭೆ ಅಧಿವೇಶನದ ವೇಳೆ ಸ್ಮೋಕ್ ಗ್ಯಾಸ್ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮನೋರಂಜನ್, ಸಾಗರ್ ಶರ್ಮಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿತ್ತು.

ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಅರಮನೆಯ ಆವರಣದ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ವೇಳೆ ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯರಿಂದ ಪ್ರಸ್ತಾಪ ಮಾಡಿದ್ದರು. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಪರಿಸರ ಪ್ರೇಮಿಗಳು, ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಮತ್ತು ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಖರ್ಗೆ ಬದಲು ರಾಹುಲ್ ಪಿಎಂ ಆಗಲಿ ಎಂದಿರುವ ಸಿದ್ದರಾಮಯ್ಯರದ್ದು ಸಂಕುಚಿತ ಮನೋಭಾವ : ಹೆಚ್​​ಡಿಕೆ

Last Updated :Dec 30, 2023, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.