ETV Bharat / state

ಶಿವಮೊಗ್ಗ: ಹೆತ್ತ ಅಮ್ಮನನ್ನೇ ಕೊಂದನಾ ಕುಡುಕ ಮಗ?

author img

By ETV Bharat Karnataka Team

Published : Aug 29, 2023, 9:14 AM IST

Shivamogga crime: ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೆರೆ ಕಾಲೋನಿ ‌ನಿವಾಸಿ ಸುಲೋಚನಮ್ಮ ಎಂಬುವವರು ತನ್ನ ಮಗನಿಂದಲೇ ಕೊಲೆಯಾಗಿದ್ದಾರೆ ಎನ್ನಲಾಗಿದೆ.

Shivamogga
ಶಿವಮೊಗ್ಗ

ಕೊಲೆ ಪ್ರಕರಣ.. ಸ್ಥಳೀಯರ ಪ್ರತಿಕ್ರಿಯೆ..

ಶಿವಮೊಗ್ಗ: ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಕರೆಯುತ್ತಾರೆ. ಆದರೆ, ಇಂತಹ ದೇವರನ್ನೇ ಹೆತ್ತ ಮಗನೊಬ್ಬ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಾವಿನಕೆರೆ ಕಾಲೋನಿ ‌ನಿವಾಸಿ ಸುಲೋಚನಮ್ಮ ಮೃತರು. ಆಕೆಯ ಮಗ ಸಂತೋಷ್​ ಕೊಲೆ ಆರೋಪಿ. ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ಸಂತೋಷ್​ ತನ್ನ ತಾಯಿಯನ್ನು ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತೋಟದಲ್ಲಿ ಮಲಗಿ ಕೊಂಡಿದ್ದಾನೆ ಎಂಬುವುದು ಸ್ಥಳೀಯರ ಆರೋಪ.

ಸುಲೋಚನಮ್ಮ ಅವರಿಗೆ ಇಬ್ಬರು ಮಕ್ಕಳು. ಇನ್ನೊಬ್ಬ ಮಗ ತಾಯಿಯಿಂದ ಬೇರೆ ವಾಸ ಮಾಡುತ್ತಿದ್ದಾರೆ. ಸಂತೋಷ್​ ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಣ ನೀಡದೇ ಕುಡಿದುಕೊಂಡು ಬರುತ್ತಿದ್ದನಂತೆ. ಮದುವೆಯಾಗಿ ಮಕ್ಕಳಿದ್ದರೂ ದುಡಿದು ಸಂಸಾರ ನಡೆಸದೇ ದುಡಿದ ಎಲ್ಲ ಹಣವನ್ನು ವ್ಯರ್ಥ ಮಾಡುತ್ತಿದ್ದನಂತೆ. ಇದರಿಂದ ಸಂತೋಷ್​ ಹೆಂಡತಿ ತನ್ನ ಮಕ್ಕಳ ಜತೆ ಎಂ.ಸಿ ಹಳ್ಳಿಗೆ ಹೋಗಿ ನೆಲೆಸಿದ್ದಾರೆ. ಅಲ್ಲಿಗೂ ಹೋಗಿ ಆರೋಪಿ ಕಿರಿಕಿರಿಯನ್ನುಂಟು ಮಾಡುತ್ತಿದ್ದನಂತೆ. ಹಗಲು ರಾತ್ರಿ ಎನ್ನದೇ ಕುಡಿದು ಅಲೆಯುತ್ತಿದ್ದ ಆತ ಭಾನುವಾರ ರಾತ್ರಿ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಕೇಳಿದ್ದಾನೆ. ಈ ವಿಚಾರಕ್ಕೆ ತಾಯಿ ಮಗನ ನಡುವೆ ಜಗಳ ನಡೆದಿದೆ. ಕುಡಿಯಲು ಹಣ ಸಿಗದ ಕಾರಣ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Honor Killing: ಪ್ರಿಯಕರನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿ.. ಕುಟುಂಬಸ್ಥರಿಂದ ಮರ್ಯಾದಾ ಹತ್ಯೆ

ಊಟ ಕೂಡಲು ಬಂದವರಿಂದ ಪ್ರಕರಣ ಬೆಳಕಿಗೆ: ನಿತ್ಯ ಸುಲೋಚನಮ್ಮ ಬೆಳಗ್ಗೆಯೇ ಎದ್ದು ಅಕ್ಕ ಪಕ್ಕದವರ ಬಳಿ ಮಾತನಾಡುತ್ತಿದ್ದರು. ವಯಸ್ಸಾದ ಕಾರಣ ಅಡುಗೆ ಮಾಡಲು ಕೆಲವೊಮ್ಮೆ ಆಗುತ್ತಿರಲಿಲ್ಲ. ಇದರಿಂದ ನೆರೆಹೊರೆಯವರು ಊಟ - ತಿಂಡಿ ನೀಡುತ್ತಿದ್ದರು. ನಿನ್ನೆ (ಸೋಮವಾರ) ಬೆಳಗ್ಗೆಯಾದರು ಎದ್ದು ಹೊರಬಾರದ ಸುಲೋಚನಮ್ಮ ಅವರನ್ನು ನೋಡಲು ನೆರೆಯವರು ಬಂದು ಮನೆಯ ಕಿಟಿಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಸುಲೋಚನಮ್ಮ ಮಲಗಿದಂತೆ ಕಂಡಿದೆ. ಇದರಿಂದ ಅವರು ವಾಪಸ್ ಆಗಿದ್ದಾರೆ.

ಬಳಿಕ ಮಧ್ಯಾಹ್ನ ಆದರೂ ಸಹ ಅವರು ಹೊರಬಾರದೇ ಹೋದಾಗ ಗುಂಡಮ್ಮ ಎಂಬುವರು ಮತ್ತೆ ಹೋಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ, ಆರೋಪಿ ಮಗ ಕುಡಿದು ರಸ್ತೆ ಬದಿ ಬಿದ್ದಿದ್ದನು. ಸುಲೋಚನಮ್ಮ ಅವರನ್ನು ಆಕೆಯ ಮಗನೇ ಕುಡಿಯುವ ಹಣಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ‌.

ಆರೋಪಿ ಸಂತೋಷ್ ಕುಡಿತದ ನಶೆಯಲ್ಲಿ ಇರುವುದರಿಂದ ಆತನನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಈ ಸಂಬಂಧ ಹೊಸಮನೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.