ETV Bharat / state

ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ 1,600 ಕ್ವಿಂಟಾಲ್ ಅಕ್ಕಿ ನಾಪತ್ತೆ!

author img

By ETV Bharat Karnataka Team

Published : Nov 25, 2023, 12:20 PM IST

Updated : Nov 27, 2023, 5:01 PM IST

rice missing
ಅಕ್ಕಿ ನಾಪತ್ತೆ

Annabhagya scheme fraud: ಚನ್ನಪಟ್ಟಣ ತಾಲೂಕಿನಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ ಕ್ವಿಂಟಾಲ್ ಕ್ವಿಂಟಾಲ್ ಅಕ್ಕಿ ಮಾಯವಾಗಿದ್ದು, ಮೇಲ್ವಿಚಾರಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಆಹಾರ ಶಾಖೆಯ ಡಿಡಿ ರಮ್ಯ

ರಾಮನಗರ: ಚನ್ನಪಟ್ಟಣ ತಾಲೂಕು ಸಾತನೂರು ಸರ್ಕಲ್ ಬಳಿ ಇರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ 1,600 ಕ್ವಿಂಟಾಲ್ (3000 ಮೂಟೆ 50 ಲಕ್ಷ ರೂ ಅಂದಾಜು ಮೌಲ್ಯ) ಅಕ್ಕಿ ಗೋಲ್ ಮಾಲ್ ಆಗಿದೆ ಎಂದು ಜಿಲ್ಲಾ ಆಹಾರ ಇಲಾಖೆಯ ನಿರ್ದೇಶಕರು ಪರಿಶೀಲನೆ ಮಾಡಿದ ವೇಳೆ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಗೋದಾಮಿನ ಮೇಲ್ವಿಚಾರಕರಾಗಿದ್ದ ಚಂದ್ರು ಅವರ ವಿರುದ್ಧ ದೂರು ದಾಖಲಾಗಿದ್ದು ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ತಾಲೂಕಿನ 67 ಪಡಿತರ ಕೇಂದ್ರಗಳಿಗೆ ಪಡಿತರ ಆಹಾರ ವಿತರಣೆ ಮಾಡುವ ಅನುಮತಿ ಪಡೆದಿರುವ ಟಿಎಪಿಸಿಎಂಎಸ್​, ಪ್ರತಿ ತಿಂಗಳು ಅಕ್ಕಿಯನ್ನು ಸಾತನೂರು ಸರ್ಕಲ್‍ನ ಟಿಎಪಿಸಿಎಂಎಸ್ ಗೋದಾಮಿನಿಂದಲೇ ಪಡಿತರ ಕೇಂದ್ರಗಳಿಗೆ ಕಳಿಸಲಾಗುತಿತ್ತು. ಆಹಾರ ಇಲಾಖೆಯಿಂದ ಒಂದು ತಿಂಗಳ ಮುನ್ನವೇ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗೋದಾಮಿನಲ್ಲಿ ಅಕ್ಕಿಯನ್ನು ಸಂಗ್ರಹ ಮಾಡಲಾಗುತ್ತಿದೆ.

ಅಲ್ಲದೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕಳಿಸುವ ಮುನ್ನ, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯದೆ ಉಳಿದಿರುವ ದಾಸ್ತಾನನ್ನು ಕಡಿತ ಮಾಡಿ ನ್ಯಾಯಬೆಲೆ ಅಂಗಡಿಗೆ ಬಾಕಿ ಪಡಿತರ ಅಕ್ಕಿ ವಿತರಣೆ ಮಾಡಬೇಕಿರುತ್ತದೆ. ಈ ಬಗ್ಗೆ ತಾಲೂಕಿನ ಆಹಾರ ನಿರೀಕ್ಷರು ಹಾಗೂ ಶಿರೇಸ್ತೆದಾರ ಅವರು ಗೋದಾಮಿನ ಕಂಪ್ಯೂಟರ್​ನಲ್ಲಿ ಆಪ್‍ಗೆ ಹೆಬ್ಬೆಟು ಸಹಿ ನೀಡಬೇಕು, ಜೊತೆಗೆ ಬಾಕಿ ಸ್ಟಾಕ್ ಪರಿಶೀಲನೆ ಮಾಡಿ ಜಿಲ್ಲಾ ಆಹಾರ ಶಾಖೆಗೆ ಮಾಹಿತಿಯನ್ನು ನೀಡಬೇಕಿದೆ.

ಆದರೆ ಇಲ್ಲಿ ಜಿಲ್ಲಾ ಆಹಾರ ಶಾಖೆಗೆ ನೀಡಿರುವ ಮಾಹಿತಿಯಲ್ಲಿ ಎಲ್ಲಾ ದಾಖಲೆಗಳು ಮತ್ತು ಸ್ಟಾಕ್‍ನ ಮಾಹಿತಿಗಳು ಸಮರ್ಪಕವಾಗಿದೆ ಹೊರತು ಗೋದಾಮಿನಲ್ಲಿ ಸ್ಟಾಕ್‍ನಂತೆ ಅಕ್ಕಿ ಇಲ್ಲದಿರುವ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವುದೇ ಇಷ್ಟೊಂದು ಪ್ರಮಾಣದಲ್ಲಿ ಅಕ್ಕಿ ನಾಪತ್ತೆ ಆಗಲು ಕಾರಣವಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆಯಿಂದಲೇ ಕಂಡು ಬಂದಿದೆ.

ಟಿಎಪಿಸಿಎಂಎಸ್‍ನ ಗೋದಾಮಿನ ಮೇಲ್ವಿಚಾರಕರಾದ ಚಂದ್ರು ಅವರು ಗೋದಾಮಿನ ಮೇಲ್ವಿಚಾರಣೆ ಪಡೆದ ಆರಂಭದಿಂದಲೂ ಈ ರೀತಿ ಸ್ಟಾಕ್ ಅಕ್ಕಿಯಲ್ಲಿ ವ್ಯತ್ಯಾಸವಾಗುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕರು ಮತ್ತು ಜಿಲ್ಲಾ ಆಹಾರ ಶಾಖೆಯ ಡಿಡಿ ರಮ್ಯ ಅವರು ಈ ಪ್ರಕರಣದಲ್ಲಿ ಗೋದಾಮಿನ ಮೇಲ್ವಿಚಾರಕ ಚಂದ್ರು ವಿರುದ್ಧ ದೂರು ನೀಡಿದ್ದು, ಗೋದಾಮಿಗೆ ಬೀಗ ಮುದ್ರೆ ಹಾಕಿದ್ದಾರೆ.

ಆಡಳಿತ ಮಂಡಳಿ ನಿರ್ಲಕ್ಷವೇ ಕಾರಣವೇ?: ಗೋದಾಮಿನಲ್ಲಿ 1,600 ಕ್ವಿಂಟಾಲ್​​ ಅಕ್ಕಿ ದುರ್ಬಳಕೆ ಆಗಿರುವ ಬಗ್ಗೆ ತಾಲೂಕು ಆಹಾರ ಶಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಮತ್ತೊಂದೆಡೆ ಟಿಎಪಿಸಿಎಂಎಸ್‍ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೂ ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಗೋದಾಮಿನಲ್ಲಿ ಇರಬೇಕಾದ ಸ್ಟಾಕ್‍ನ ಬಗ್ಗೆ ಆಹಾರ ವೆಬ್‍ನಲ್ಲಿನ ಮಾಹಿತಿಯನ್ನು ಪರಿಶೀಲನೆ ಮಾಡಲಾಗಿದ್ದು ಅದರ ಪ್ರಕಾರ ಗೋದಾಮಿನಲ್ಲಿ ಇರುವ ಸ್ಟಾಕ್‍ನಲ್ಲಿ 1600 ಕ್ವಿಂಟಾಲ್ ಅಕ್ಕಿ ದುರ್ಬಳಕೆ ಆಗಿದೆ. ಇದಲ್ಲದೆ ಗೋದಾಮಿನಿಂದ ತಾಲೂಕಿನ 68 ನ್ಯಾಯ ಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ಪಡಿತರ ವಿತರಣೆ ಮಾಡಲಾಗಿದೆ. ಈ ಗೋದಾಮಿನ ವ್ಯಾಪ್ತಿಗೆ ಬರುವ 68 ನ್ಯಾಯಬೆಲೆ ಅಂಗಡಿಯಲ್ಲಿ ಸಹ ಈವರೆಗೆ ಪಡಿತರ ವಿತರಣೆಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಮುಂದಿನ ದಿನದಲ್ಲೂ ಯಾವುದೇ ತೊಂದರೆ ಆಗದಂತೆ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿ ರಮ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಅಜ್ಜನ ಮರಣ ಪ್ರಮಾಣ ಪತ್ರ ಪಡೆಯಲು 13 ಸಾವಿರ ಲಂಚ ಸ್ವೀಕಾರ: ಚೇಳ್ಯಾರು ಗ್ರಾಮಾಡಳಿತ ಅಧಿಕಾರಿ ಲೋಕಾಯುಕ್ತ ಬಲೆಗೆ

Last Updated :Nov 27, 2023, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.