Triple Murder Case.. ಆರೋಪಿ ಹೆಡೆಮುರಿ ಕಟ್ಟಿದ ರಾಯಚೂರು ಪೊಲೀಸರು

author img

By

Published : Oct 2, 2021, 4:43 PM IST

Updated : Oct 2, 2021, 5:00 PM IST

man arrested in triple murder case of raichur

ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಮೂವರನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಯಚೂರು: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣ(Triple Murder Case)ಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಹೊರವಲಯದ ಯರಮರಸ್ ಕ್ಯಾಂಪಿನಲ್ಲಿ ಕೌಟುಂಬಿಕ ಕಲಹದಿಂದಾಗಿ ಸಂತೋಷಿ, ವೈಷ್ಣವಿ, ಆರತಿ ಎಂಬುವರನ್ನು ಕಳೆದ ಸೆ. 29ರ ಮಧ್ಯರಾತ್ರಿ‌ ವೇಳೆ ಚಾಕುವಿನಿಂದ ಹತ್ಯೆ ಮಾಡಲಾಗಿತ್ತು. ಹೈದರಾಬಾದ್ ಮೂಲದ ಸೌರಬ್ ಅಲಿಯಾಸ್ ಸಾಯಿ ಕೊಲೆ ಮಾಡಿರುವ ಆರೋಪಿ. ಈ ಪ್ರಕರಣದಲ್ಲಿ ಸಾಯಿಯ ಸ್ನೇಹಿತರಿಬ್ಬರು ಶಾಮೀಲಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ.

ತ್ರಿಪಲ್ ಮರ್ಡರ್ ಕೇಸ್​ನ ಆರೋಪಿ ಬಂಧನ ಕುರಿತು ಎಸ್​​​ಪಿ ಮಾಹಿತಿ

ಹತ್ಯೆಯ ಆರೋಪಿ ಸಾಯಿ ಕಳೆದ ಆರು ತಿಂಗಳ ಹಿಂದೆ ಸಂತೋಷಿಯವರ ಮಗಳಾದ ವೈಷ್ಣವಿಯನ್ನು ವಿವಾಹವಾಗಿದ್ದ. ಆದ್ರೆ ಕೌಟುಂಬಿಕ ಕಲಹ ಉಂಟಾಗಿ ವೈಷ್ಣವಿ ಗಂಡನನ್ನು ಬಿಟ್ಟು ತನ್ನ ತಾಯಿಯಿರುವ ಯರಮರಸ್ ಕ್ಯಾಂಪಿಗೆ ಬಂದು ನೆಲೆಸಿದ್ದಳು. ಹೀಗಾಗಿ ಕಳೆದ ಸೆ.29ರಂದು ಹೈದರಾಬಾದ್​ನಿಂದ ಪತ್ನಿ ವೈಷ್ಣವಿಯನ್ನು ಮರಳಿ ಕರೆದುಕೊಂಡು ಹೋಗಲು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡುವ ವೇಳೆ ಮಾತಿನ ಚಕಮಕಿ ನಡೆದು ಅವರಿಗೆ ಚಾಕುವಿನಿಂದ ಇರಿದು ಸಾಯಿ ಹಾಗೂ ಆತನ ಇಬ್ಬರು ಸ್ನೇಹಿತರು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಯಚೂರು ಗ್ರಾಮೀಣ ಪೊಲೀಸರು, ಎಸ್ಪಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವನಗೌಡ ಹಾಗೂ ಸಿಪಿಐ ಹನುಮರೆಡ್ಡಿ ನೇತೃತ್ವದಲ್ಲಿ ಎರಡು ತಂಡಗಳನ್ನ ರಚಿಸಿಕೊಂಡು ಹೈದರಾಬಾದ್‌ಗೆ ತೆರಳಿ‌ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

ಸದ್ಯ ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ದೊರೆಯಲಿದೆ, ಜತೆಗೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ಪ್ರಕಾಶ್ ನಿಕ್ಕಂ ಮಾಹಿತಿ ನೀಡಿದ್ದಾರೆ.

Last Updated :Oct 2, 2021, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.