ETV Bharat / state

40 ರೂ.ಗೆ 'ಕಾಟೇರ' ಲಿಂಕ್​ ಶೇರ್: ಪೈರಸಿ ಆರೋಪಿ ಅರೆಸ್ಟ್

author img

By ETV Bharat Karnataka Team

Published : Jan 4, 2024, 6:27 PM IST

Updated : Jan 4, 2024, 7:55 PM IST

ಕಾಟೇರ ಪೈರಸಿ ಮಾಡಿದ ಆರೋಪದ ಮೇಲೆ ಗಂಗಾನಾಯಕ ತಾಂಡದ ಯುವಕ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ.

Kaatera piracy
ಕಾಟೇರ ಪೈರಸಿ

ಸಿನಿಮಾ ವಿತರಕ ಗುರುದೇಶಪಾಂಡೆ ಮಾತನಾಡಿರುವುದು..

ರಾಯಚೂರು: ಕನ್ನಡ ಚಿತ್ರರಂಗದಲ್ಲೀಗ 'ಕಾಟೇರ'ನದ್ದೇ ಸದ್ದು. ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಟೇರನಿಗೆ ಪೈರಸಿ ಕಾಟ ಶುರುವಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾವನ್ನು ಪೈರಸಿ ಮಾಡಿದ ಆರೋಪಿ ವಿರುದ್ಧ ರಾಯಚೂರಿನ ಸದರ್​ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ ತಾಂಡದ ಯುವಕ ಮೌನೇಶ್ ಬಂಧಿತ ಆರೋಪಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಪೈರಸಿ ಮಾಡಿರುವ ಆರೋಪ ಈತನ ಮೇಲಿದೆ.

ಅನುಮಾನದ ಹಿನ್ನೆಲೆ ದೂರುದಾರರು ಪೈರಸಿ ಮಾಡುತ್ತಿದ್ದ ಮೌನೇಶ್ ಜೊತೆ ಸಿನಿಮೀಯ ರೀತಿಯಲ್ಲಿ ಚಾಟ್​ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮೌನೇಶನು ವಾಟ್ಸಪ್​ನಲ್ಲಿ ಅವರೊಂದಿಗೆ (ದೂರುದಾರ) ಚಾಟ್​ ಮಾಡುತ್ತಲೇ 40 ರೂ.ಗೆ ಕಾಟೇರ ಹಾಗೂ ಮತ್ತೊಂದು ಹೊಸ ಸಿನಿಮಾ ಇದೆ, ಈ ಸಿನಿಮಾದ ಲಿಂಕ್​ ಶೇರ್​ ಮಾಡಲು ಫೋನ್​ಪೇ ಮೂಲಕ ತನಗೆ ಹಣ ಕಳಿಸುವಂತೆ ತಿಳಿಸಿದ್ದನು. ಆ ಪ್ರಕಾರ ದೂರುದಾರರು ಆತನಿಗೆ 40 ರೂ. ಹಾಕಿದಾಗ ಮೌನೇಶನು ಟೆಲಿಗ್ರಾಮ್​ನಲ್ಲಿ ಕಾಟೇರ ಚಿತ್ರದ ಲಿಂಕ್​ ಕಳಿಸಿದ್ದನು.

''ಮೌನೇಶ್ ಎಂಬಾತ ಮೋಸ ಮಾಡುವ ಉದ್ದೇಶದಿಂದ ಹಣ ಪಡೆದು ಕನ್ನಡದ ಕಾಟೇರ ಚಿತ್ರವನ್ನು ಟೆಲಿಗ್ರಾಂ​ ಆ್ಯಪ್​ ಮೂಲಕ ಕಳಿಸಿರುವುದು ಕಂಡು ಬಂದಿದೆ. ಈ ಪ್ರಕರಣದಲ್ಲಿ ಈತನೊಂದಿಗೆ ಹಲವರು ಸೇರಿಕೊಂಡಿರುವ ಅನುಮಾನ ಇದೆ. ಪೈರಸಿ ಕೃತ್ಯದಿಂದ ಸಿನಿಮಾದ ನಿರ್ಮಾಪಕರಿಗೆ ಹಾಗೂ ಹಂಚಿಕೆದಾರರಿಗೆ ಆರ್ಥಿಕ ನಷ್ಟವಾಗುತ್ತಿದೆ. ಹಾಗಾಗಿ ಪೈರಸಿಯಲ್ಲಿ ತೊಡಗಿರುವ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ'' ದೂರುದಾರರು ಮನವಿ ಮಾಡಿಕೊಂಡಿದ್ದಾರೆ.

ಈ ಲಿಂಕ್‌ ಶೇರ್ ಮಾಡುತ್ತಿದ್ದ ಯುವಕನ ವಿರುದ್ಧ ಸದ್ಯ ಪ್ರಕರಣ ದಾಖಲಿಸಲಾಗಿದೆ. ಇದರ ಕಿಂಗ್ ಪಿನ್ ಉಪೇಂದ್ರ ಎನ್ನುವವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದ ಡಿಸ್ಟ್ರಿಬ್ಯೂಟರ್‌ಗಳಾದ ಗುರುದೇಶಪಾಂಡೆ ಹಾಗೂ ಜಗದೀಶ್‌ ಅವರಿಗೆ ಆರ್ಥಿಕ ನಷ್ಟವಾಗಿದೆ. ಡಿಸ್ಟ್ರಿಬ್ಯೂಟರ್ ಹಾಗೂ ನಿರ್ಮಾಪಕರ ಸೂಚನೆ ಮೇರೆಗೆ ವಾದಿರಾಜ ಎಂಬುವವರಿಂದ ಸದರ್ ಬಜಾರ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ. ವಾಟ್ಸ್​ಆ್ಯಪ್ ಚಾಟ್ ಬಳಿಕ 40 ರೂ. ಫೋನ್ ಪೇ ಮಾಡಿ, ಸಿನಿಮಾ ಲಿಂಕ್ ಪಡೆದುಕೊಂಡ ವಾದಿರಾಜ, ಕಾಪಿರೈಟ್ ಆ್ಯಕ್ಟ್ ಹಾಗೂ ಐಪಿಸಿ 420ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ನಿರ್ದೇಶಕ, ನಿರ್ಮಾಪಕ, ಈ ಚಿತ್ರದ ವಿತರಕರೂ ಆಗಿರುವ ಗುರುದೇಶಪಾಂಡೆ ಮಾತನಾಡಿ, ''ನಾವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಟೇರ ಸಿನಿಮಾದ ವಿತರಣೆಯ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ರಾಯಚೂರು ಜಿಲ್ಲೆಯಲ್ಲಿ ಮೌನೇಶ್ ಎಂಬ ಹುಡುಗ ನಮ್ಮ ಕಾಟೇರ ಸಿನಿಮಾವನ್ನು ಪೈರಸಿ ಮಾಡಿ, ಮಾರಾಟ ಮಾಡುತ್ತಿದ್ದಾನೆ. ಟೆಲಿಗ್ರಾಂ ಮೂಲಕ ಲಿಂಕ್​ ಶೇರ್ ಆಗುತ್ತಿದೆ. ಇದಕ್ಕೆ ಆತ 60-70 ರೂ. ಪಡೆಯುತ್ತಿದ್ದಾನೆ. ಹಾಗಾಗಿ ನಾವು ರಾಯಚೂರಿನಲ್ಲಿ ದೂರು ದಾಖಲಿಸಿದ್ದೇವೆ. ನಮ್ಮ ಮ್ಯಾನೇಜರ್​ ವಾದಿರಾಜ ಅವರ ಮೂಲಕ ದೂರು ಕೊಡಿಸಿದ್ದೇವೆ. ಆ ಯುವಕ ಅರೆಸ್ಟ್ ಆಗಿದ್ದಾನೆ''.

ಇದನ್ನೂ ಓದಿ: ರಾಜ್ಯಾದ್ಯಂತ 'ಕಾಟೇರ' ಅಬ್ಬರ: ಸೆಲೆಬ್ರಿಟಿಗಳೊಂದಿಗೆ ಚಾಲೆಂಜಿಂಗ್​ ಸ್ಟಾರ್ ಸಂಭ್ರಮ

''ನಮ್ಮ ಕಾಟೇರ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಯಶ ಕಾಣುತ್ತಿದೆ. ನಾವು ಕೂಡ ದೊಡ್ಡ ಮೊತ್ತ ಪಾವತಿಸಿ, ವಿತರಿಸಿಸುತ್ತಿದ್ದೇವೆ. ಈ ರೀತಿ ಪೈರಸಿ ಮಾಡೋದ್ರಿಂದ ನಮಗೆ, ಅದರಲ್ಲೂ ನನಗೆ ಬಹಳ ನಷ್ಟ ಉಂಟಾಗುತ್ತದೆ. ಹಾಗಾಗಿ ಸೂಕ್ತ ಕ್ರಮಕ್ಕೆ ಪೊಲೀಸರ ಬಳಿ ಮನವಿ ಮಾಡಿದ್ದೇವೆ. ದಯವಿಟ್ಟು ನೀವೆಲ್ಲರೂ ಈ ವಿಷಯಕ್ಕೆ ಸಪೋರ್ಟ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ'' ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ಆರೋಗ್ಯದಲ್ಲಿ​ ಏರುಪೇರು

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕಾಟೇರ ಸಕ್ಸಸ್ ಸೆಲೆಬ್ರೇಶನ್​ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭ ಮಾತನಾಡಿದ್ದ ನಾಯಕ ನಟ ದರ್ಶನ್​, ''ಯಾರು ನಮ್ಮ ಕಾಟೇರವನ್ನು ಪೈರಸಿ ಮಾಡುತ್ತಿದ್ದಾರೋ ಅಂಥವರಿಗೆ ನಮ್ಮ ಕಡೆಯಿಂದ ಸ್ಪೆಷಲ್​ ಟ್ರೀಟ್​ಮೆಂಟ್​ ಇದೆ'' ಎಂದು ತಿಳಿಸಿದ್ದರು.

Last Updated :Jan 4, 2024, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.