'ಭವಾನಿ ರೇವಣ್ಣ ಅನಿವಾರ್ಯತೆ ಹಾಸನ ಕ್ಷೇತ್ರಕ್ಕಿದ್ದಿದ್ದರೆ ನಾನೇ ಸ್ಪರ್ಧಿಸುವಂತೆ ಹೇಳುತ್ತಿದ್ದೆ': ಹೆಚ್​ಡಿಕೆ

author img

By

Published : Jan 26, 2023, 9:22 AM IST

hd kumaraswamy

ರಾಯಚೂರು ಜಿಲ್ಲೆಯ ಗಾಣಧಾಳ ಗ್ರಾಮದಲ್ಲಿ ನಡೆದ ಪಂಚರತ್ನ ಯಾತ್ರೆಯ ವೇಳೆ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಪರವಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿದರು.

ರಾಯಚೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ರಾಯಚೂರು: ಪ್ರತಿಯೊಬ್ಬರಿಗೂ ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಇರುವುದು ಸಹಜ. ಭವಾನಿ ರೇವಣ್ಣ ಅವರ ಅನಿವಾರ್ಯತೆ ಹಾಸನ ಕ್ಷೇತ್ರದಲ್ಲಿ ಇದ್ದಿದ್ದರೆ ನಾನೇ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಪರವಾಗಿ ಅವರು ಪ್ರಚಾರ ನಡೆಸಿದರು.

ಬಳಿಕ ಪಂಚರತ್ನ ಯಾತ್ರೆಯ ವೇಳೆ ಗಾಣಧಾಳ ಗ್ರಾಮದಲ್ಲಿ ಮಾತನಾಡಿದ ಅವರು, "ಭವಾನಿ ರೇವಣ್ಣ ಅವರು ಅಭ್ಯರ್ಥಿಯಾಗಬೇಕು ಎನ್ನುವ ಅನಿವಾರ್ಯತೆ ಇದ್ದಿದ್ದರೆ ನಾನೇ ನಿಲ್ಲಿಸುತ್ತಿದ್ದೆ. ಆದರೆ, ಹಾಸನದಲ್ಲಿ ಇವತ್ತು ಅಂತಹ ಅನಿವಾರ್ಯತೆ ಇಲ್ಲ. ಅಲ್ಲಿ ಈಗಾಗಲೇ ಒಬ್ಬ ಸಮರ್ಥ ಅಭ್ಯರ್ಥಿ ಇದ್ದಾರೆ. ಹಿಂದೆ ನಾನು ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಲು ಕಾರಣ, 2008ರ ಉಪ ಚುನಾವಣೆಯಲ್ಲಿ ಇಂದಿನ ಮಾಜಿ ಶಾಸಕರಾದ ವೀರಭದ್ರಯ್ಯ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಅಭ್ಯರ್ಥಿ ಮಾಡಿದ್ದರು."

"ಆದರೆ, ಆಗ ಸರ್ಕಾರಿ ನೌಕರಿಯಲ್ಲಿ ಇದ್ದ ವೀರಭದ್ರಯ್ಯ ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಆಗ ಮಧುಗಿರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ. ಈ ವೇಳೆ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಆಪರೇಶನ್ ಕಮಲ ನಡೆಸಿತ್ತು. ಕೆಲವು ಕ್ಷೇತ್ರಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ನಮಗೆ ಇತ್ತು, ಆ ಕಾರಣಕ್ಕೆ ನಾನು ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿದೆ" ಎಂದರು.

"2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಶಾಸಕರಾಗಿದ್ದರು. ಆಗ ಅನಿತಾ ಅವರ ಬದಲಾಗಿ ವೀರಭದ್ರಯ್ಯ ಅವರಿಗೆ ಟಿಕೆಟ್ ಕೊಡಲಾಗಿತ್ತು. ಇದನ್ನು ರಾಜ್ಯದ ಜನರ ಗಮನಕ್ಕೆ ತಂದೆ ಅಷ್ಟೇ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಕುಟುಂಬದಲ್ಲಿ ಏನೋ ಸಂಘರ್ಷ, ತಳಮಳ ನಡೆಯುತ್ತಿದೆ ಎಂಬ ಪ್ರಶ್ನೆಯೇ ಇಲ್ಲ. ಈ ಪಕ್ಷ ಕಟ್ಟಿತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಬೆಲೆ ಕೊಡಬೇಕಾಗಿರುವುದು ನನ್ನ ಜವಾಬ್ದಾರಿ, ಇವರೇ ನನ್ನ ಕುಟುಂಬ" ಎಂದು ಹೇಳಿದರು.

"ಚನ್ನಪಟ್ಟಣ ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳಿಂದ ನಾವು ಗೆಲ್ಲಲಿಕ್ಕೆ ಆಗಿರಲಿಲ್ಲ. ನಾನು ಮಧುಗಿರಿಯಲ್ಲಿ ನಿಲ್ಲಬೇಡಿ ಎಂದು ಹೇಳಿದ ಮೇಲೆಯೂ ಕಾರ್ಯಕರ್ತರು ಒತ್ತಡ ಹಾಕಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಆದರೆ, 3000 ಮತಗಳ ಅಂತರದಲ್ಲಿ ಅವರು ಸೋತರು. ಇಲ್ಲಿರುವ ವ್ಯತ್ಯಾಸವನ್ನು ನಾನಿಲ್ಲಿ ಹೇಳುತ್ತಿದ್ದೇನೆ. ಭವಾನಿ ಅವರಿಗೆ ನಿಲ್ಲಬೇಕು ಎಂದು ಆಸೆ ಇದ್ದರೂ ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಸಮರ್ಥ ಅಭ್ಯರ್ಥಿ ಇಲ್ಲದ್ದಿದ್ದರೆ ಅವರನ್ನೇ ನಿಲ್ಲುವಂತೆ ನಾನೇ ಭವಾನಿ ರೇವಣ್ಣ ಅವರಿಗೆ ಹೇಳುತ್ತಿದ್ದೆ. ಇಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಇಲ್ಲ. ಯಾವುದಾದರೂ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಇಲ್ಲದಿದ್ದಾಗ ನಮ್ಮ ಕುಟುಂಬ ತಲೆ ಕೊಟ್ಟಿದೆ."

"ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ನಾನು ಸ್ಪರ್ಧೆ ಮಾಡಿದ್ದೆ, ಕಾರ್ಯಕರ್ತರು ನೊಂದಿದ್ದರು. ಅವರನ್ನು ಉಳಿಸಿಕೊಳ್ಳಬೇಕಿತ್ತು. ಕೊನೆಗೆ ನಾನೇ ಹೋಗಿ ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಂತೆ , ರಾಮನಗರದಲ್ಲಿ ಕೂಡ ನಿಲ್ಲಬೇಕಾಯಿತು. ಕಾರ್ಯಕರ್ತರು ನೊಂದಿದ್ದಾಗ ನಾವು ತಲೆ ಕೊಟ್ಟಿದ್ದೇವೆ. ಆದರೆ, ಹಾಸನದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕುಟುಂಬದಲ್ಲಿ ಸಂಘರ್ಷವಿಲ್ಲದೆ ಗೊಂದಲ ಬಗೆಹರಿಸುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ: ಡೊಳ್ಳು ಹಾರ, ಜೋಳದ ರೊಟ್ಟಿ ಹಾರ ಹಾಕಿ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.