ETV Bharat / state

ಭೀಕರ ಬರದ ಹಿನ್ನೆಲೆ ಈ ವರ್ಷ ರಾಯಚೂರು ವಿವಿ ಕೃಷಿ ಮೇಳ ರದ್ದು: ಕುಲಪತಿ ಡಾ ಎಂ ಹನುಮಂತಪ್ಪ

author img

By ETV Bharat Karnataka Team

Published : Jan 18, 2024, 8:27 PM IST

Updated : Jan 18, 2024, 10:02 PM IST

ರಾಜ್ಯದಲ್ಲಿ ಭೀಕರ ಬರ ಆವರಿಸಿ ರೈತ ಸಮುದಾಯ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯಚೂರು ಕೃಷಿ ವಿವಿಯಿಂದ ಕೃಷಿ ಮೇಳ ಮಾಡುವುದು ಸೂಕ್ತವಲ್ಲ ಎಂದು ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕುಲಪತಿ ಡಾ ಎಂ ಹನುಮಂತಪ್ಪ ಸ್ಪಷ್ಟ ಪಡಿಸಿದ್ದಾರೆ.

Raichur Agricultural University
ರಾಯಚೂರು ಕೃಷಿ ವಿವಿ

ಭೀಕರ ಬರದ ಹಿನ್ನೆಲೆ ಈ ವರ್ಷ ರಾಯಚೂರು ವಿವಿ ಕೃಷಿ ಮೇಳ ರದ್ದು: ಕುಲಪತಿ ಡಾ ಎಂ ಹನುಮಂತಪ್ಪ

ರಾಯಚೂರು: ಪ್ರತಿ‌ ವರ್ಷವೂ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಮೇಳವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿತ್ತು, ಆದರೆ ಈ ಬಾರಿ ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಹಿನ್ನೆಲೆ ಕೃಷಿ ಮೇಳ ಕೈ ಬಿಡಲಾಗಿದೆ ಎಂದು ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಗರದ ಹೊರವಲಯದಲ್ಲಿರುವ ರಾಯಚೂರು ಕೃಷಿ ವಿವಿಯಿಂದ ವರ್ಷಕೊಮ್ಮೆ ಕೃಷಿಮೇಳ ಆಯೋಜಿಸುತ್ತಿದ್ದೆವು. ಆದರೆ ರಾಜ್ಯದಲ್ಲಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದೆ. ಭೀಕರ ಬರಗಾಲ ಆವರಿಸಿ ರೈತ ಸಮುದಾಯ ಸಂಕಷ್ಟ ಎದುರಿಸುತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ಮೇಳ ಮಾಡುವುದು ಸೂಕ್ತವಲ್ಲ ಎಂದು ಆಡಳಿತ ಮಂಡಳಿ ಅಧಿಕಾರಿಗಳು, ಸದಸ್ಯರೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗಿದೆ. ಇದರ ಬದಲಾಗಿ ಕಾರ್ಯಾಗಾರ ಹಾಗೂ ಮತ್ಸ್ಯ ಮೇಳ, ಬೀಜ ಮೇಳ ಹಾಗೂ ರೈತರಿಗಾಗಿ ಕಾರ್ಯಾಗಾರವನ್ನು ಏರ್ಡಿಸಲು ಚಿಂತನೆ ನಡೆದಿದೆ‌‌ ಎಂದು ತಿಳಿಸಿದ್ದಾರೆ.

ಇನ್ಮುಂದೆ ರಾಯಚೂರು ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೊಂಡು 15 ವರ್ಷ ಕಳೆದಿವೆ. ಇದುವರೆಗೆ ಯಾರಿಗೂ ಗೌರವ ಡಾಕ್ಟರೇಟ್(ಗೌಡಾ) ಪ್ರದಾನ ಮಾಡಿಲ್ಲ. ಈ ಬಾರಿ ಗೌರವ ಡಾಕ್ಟರೇಟ್ ಪ್ರದಾನ ಮಾಡಬೇಕು ಎಂದು ಚರ್ಚೆ ನಡೆದಿದೆ. ಇದಕ್ಕೆ ಸಾಕಷ್ಟು ಸಮಯ ಅವಕಾಶ ಬೇಕಾಗುತ್ತದೆ.

ಮುಂದಿನ ದಿನಗಳಲ್ಲಿ ಬರುವ ವಿವಿ ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡುವ ಕುರಿತು ತೀರ್ಮಾನಿಸಲಾಗಿದೆ. ಇದಕ್ಕೆ ಹಲವು ನಿಯಮಗಳು ಇದ್ದು, ಇದರ ಅನುಸಾರ ಗೌರವ ಡಾಕ್ಟರೇಟ್ ನೀಡಬೇಕು ಎನ್ನುವ ಉದ್ದೇಶವಿದ್ದು ಯಾವುದೇ ತಿರ್ಮಾನವಾಗಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡುವುದಾಗಿ ಕುಲಪತಿ ಡಾ.ಎಂ.ಹನುಮಂತಪ್ಪ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇರುವ ಕೃಷಿ ವಿವಿಗಳು, ತೋಟಗಾರಿಕೆ ವಿವಿ ಸೇರಿದಂತೆ ವಿವಿಧ ವಿವಿಗಳಿಂದ ಗೌರವ ಡಾಕ್ಟರೇಟ್ ನೀಡುತ್ತಾ ಬರುತ್ತಿವೆ. ಆದರೆ ಇಲ್ಲಿಯ ವರೆಗೂ ರಾಯಚೂರು ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ನೀಡಿಲ್ಲ. ಆದರೆ ಕೃಷಿ ವಿವಿ ವ್ಯಾಪ್ತಿಗೆ ಬರುವ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ಶ್ರೇಷ್ಠ ಕೃಷಿ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿ ಮಹಿಳಾ ಪ್ರಶಸ್ತಿಯನ್ನು ಕೃಷಿ ಮೇಳದಲ್ಲಿ ನೀಡುತ್ತ ಬರಲಾಗುತ್ತಿದೆ.

ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಬೇಕು ಅಂದುಕೊಂಡಿದ್ದು, ಅದರ ಬಗ್ಗೆ ಚಿಂತನೆ ನಡೆದಿದೆ ಎಂದು ಡಾ.ಎಂ. ಹನುಮಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:ಒಳ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸಿಗೆ ತೀರ್ಮಾನ

Last Updated : Jan 18, 2024, 10:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.