ETV Bharat / state

ಇಂದು ದಸರಾ ಜಂಬೂ ಸವಾರಿ ವೈಭವ: ಅಂಬಾರಿ ಹೊರಡುವ ಮಾರ್ಗದಲ್ಲಿ ಭಾರಿ ಭದ್ರತೆ

author img

By ETV Bharat Karnataka Team

Published : Oct 23, 2023, 6:08 PM IST

Updated : Oct 24, 2023, 9:19 AM IST

All preparations for Mysore Jambu Savari
ನಾಳೆ ನಡೆಯುವ ಸಾಂಪ್ರದಾಯಿಕ ಜಂಬೂ ಸವಾರಿಗೆ ಸಕಲ ಸಿದ್ಧತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಇಂದು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮೈಸೂರು: ವಿಶ್ವವಿಖ್ಯಾತ ಸಾಂಪ್ರದಾಯಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಚಿನ್ನದ ಅಂಬಾರಿಯಲ್ಲಿ ಆಸೀನಳಾಗುವ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ವೈಭವದ ಜಂಬೂ ಸವಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.

All preparations for Mysore Jambu Savari
ಜಂಬೂ ಸವಾರಿಗೆ ಸಕಲ ಸಿದ್ಧತೆ

ಜಂಬೂಸವಾರಿ ಮೆರವಣಿಗೆಗೆ 47 ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳು ಸಿದ್ಧವಾಗಿವೆ. ಮಧ್ಯಾಹ್ನ 1.46 ರಿಂದ 2.08 ರ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಈ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಆ ನಂತರ ಸ್ತಬ್ಧಚಿತ್ರಗಳು, ಕಲಾತಂಡಗಳು ನಿಶಾನೆ ಆನೆಗಳು ಮೆರವಣಿಗೆ ಹೊರಡಲಿವೆ.

ಸಂಜೆ 4.40 ರಿಂದ 5 ವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಅಭಿಮನ್ಯು ಆನೆ ಹೊತ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡುವರು. ಈ ಮೂಲಕ ಮೆರವಣಿಗೆ ಪ್ರಾರಂಭವಾಗಲಿದ್ದು, ಸುಮಾರು 5 ಕಿ.ಮೀ ದೂರ ರಾಜಪಥದಲ್ಲಿ ಸಾಗಲಿದೆ. ನಂತರ ಈ ಮೆರವಣಿಗೆ ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ. ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.

All preparations for Mysore Jambu Savari
ಜಂಬೂ ಸವಾರಿ

ಪೊಲೀಸ್ ಭದ್ರತೆ: ಸುಮಾರು 6,000ಕ್ಕೂ ಹೆಚ್ಚು ಪೊಲೀಸರನ್ನು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಒಬ್ಬರು ಡಿಐಜಿ, 8 ಮಂದಿ ಎಸ್​ಪಿಗಳು, 10 ಮಂದಿ ಅಡಿಷನಲ್ ಎಸ್​ಪಿಗಳು, ಸಿಸಿಟಿವಿ ಕ್ಯಾಮರಾಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ.

ಬನ್ನಿಮಂಟಪದ ಮೈದಾನದಲ್ಲಿ ರಾತ್ರಿ 7.30ಕ್ಕೆ ಆಕರ್ಷಕ ಪಂಜಿನ ಕವಾಯತು ನಡೆಯಲಿದೆ. ಇದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ.

ಅಂಬಾರಿ ಸುತ್ತ ಭದ್ರತೆ: ಅಂಬಾರಿ ಹೊರಡುವ ಮಾರ್ಗದಲ್ಲಿ ಭಾರಿ ಭದ್ರತೆಯ ಜತೆಗೆ ಅಂಬಾರಿ ಆನೆಯ ಸುತ್ತಲೂ ಭದ್ರತೆ ಹಾಕಲಾಗಿದೆ. ವಿಶೇಷ ಪೊಲೀಸ್ ಘಟಕ ನಿಯೋಜನೆ ಮಾಡಲಾಗಿದೆ. ಬಾಂಬ್ ಪತ್ತೆ ಹಾಗೂ ನಿಗ್ರಹದಳ, ಶ್ವಾನದಳ ಸೇರಿದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಿವಿಲ್ ಪೊಲೀಸ್, ಕೆಎಸ್ಆರ್‌ಪಿ, ಸಿಎಆರ್, ಡಿಎಆರ್ ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಈಟಿವಿ ಭಾರತ್‌ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ಅರಮನೆಯ ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ ಒಂದೇ! ಏನಿದರ ಗುಟ್ಟು?- ವಿಡಿಯೋ ನೋಡಿ

Last Updated :Oct 24, 2023, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.