ETV Bharat / state

ಕುಮಾರಸ್ವಾಮಿ ಬಳಿ ಪೆನ್ ಡ್ರೈವ್ ಇರಬಹುದು, ಆದ್ರೆ ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ: ಸಚಿವ ಕೆಎನ್ ರಾಜಣ್ಣ

author img

By

Published : Jul 8, 2023, 5:44 PM IST

ಸಚಿವ ಕೆ ಎನ್ ರಾಜಣ್ಣ
ಸಚಿವ ಕೆ ಎನ್ ರಾಜಣ್ಣ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೆನ್ ಡ್ರೈವ್ ಇಟ್ಟುಕೊಂಡು ದಂಧೆ ಮಾಡುತ್ತಿದ್ದಾರೆಯೇ? ತಾಕತ್ತಿದ್ದರೆ ಅದರಲ್ಲೇನಿದೆ ಅಂತ ಬಹಿರಂಗ ಮಾಡಲಿ ಎಂದು ಸಚಿವ ಕೆ ಎನ್.ರಾಜಣ್ಣ ಸವಾಲು ಹಾಕಿದರು.

ಸಚಿವ ಕೆ ಎನ್ ರಾಜಣ್ಣ

ಮೈಸೂರು: ಪೆನ್ ಡ್ರೈವ್ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ದಂಧೆ ಮಾಡುತ್ತಿದ್ದಾರಾ? ತಾಕತ್ತಿದ್ದರೆ ಅದರಲ್ಲೇನಿದೆ ಅನ್ನೋದನ್ನು ತೋರಿಸಲಿ. ಅದನ್ನು ಬಿಟ್ಟು ವಿಳಂಬ ಮಾಡುತ್ತಿರುವ ಹಿಂದಿನ ಉದ್ದೇಶ ಏನು? ಎಂದು ಸಹಕಾರಿ ಸಚಿವ ಕೆ ಎನ್.ರಾಜಣ್ಣ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದಲ್ಲಿ ವರ್ಗಾವಣೆ ಆಗುತ್ತಿದೆ, ಆದರೆ ದಂಧೆ ಅಲ್ಲ. ಎಲ್ಲ ಸರ್ಕಾರದ ಕಾಲದಲ್ಲೂ ಇದು ನಡೆಯುತ್ತದೆ. ಈಗಲೂ ವರ್ಗಾವಣೆ ನಡೆಯುತ್ತಿದೆ. ಅದನ್ನು ದಂಧೆ ಎನ್ನುವುದು ತಪ್ಪು ಎಂದ ಸಚಿವರು, ಕುಮಾರಸ್ವಾಮಿ ಪೆನ್ ಡ್ರೈವ್ ಇಟ್ಟುಕೊಂಡು ದಂಧೆ ಮಾಡುತ್ತಿದ್ದಾರೆಯೇ? ತಾಕತ್ತಿದ್ದರೆ ಅದರಲ್ಲೇನಿದೆ ಅಂತ ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.

ಪೆನ್ ಡ್ರೈವ್ ವಿಚಾರದಲ್ಲಿ ನನಗೆ ಯಾವುದೇ ಕುತೂಹಲ ಇಲ್ಲ, ಜಾತ್ರೆಗಳಲ್ಲಿ ಬುಟ್ಟಿ ಇಟ್ಟುಕೊಂಡು ಹಾವಿದೆ ಹಾವಿದೆ ಎಂದು ಹೆದರಿಸುತ್ತಾರೆ. ಆದರೆ, ಬುಟ್ಟಿಯಲ್ಲಿ ಯಾವುದೇ ಹಾವು ಇರುವುದಿಲ್ಲ. ಆ ರೀತಿ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಪೆನ್ ಡ್ರೈವ್ ಇದೆ, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಸುಮ್ಮನೆ ಪೆನ್ ಡ್ರೈವ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅದರಲ್ಲಿ ಮಹತ್ವದ ದಾಖಲೆಗಳಿದ್ದರೆ ತೋರಿಸಲಿ. ಇದನ್ನು ನಾನು ಬ್ಲಾಕ್ ಮೇಲ್ ಎಂದು ಹೇಳುವುದಿಲ್ಲ, ಮುಂದೆ ಗೊತ್ತಾಗಲಿದೆ ಎಂದು ಅಸ್ಪಷ್ಟ ರೀತಿಯಲ್ಲಿ ಸಚಿವ ರಾಜಣ್ಣ ಹೇಳಿಕೆ ನೀಡಿದರು.

ಹಾಲು ಉತ್ಪಾದಕರಿಗೆ ಸಹಾಯ ಧನ ಏರಿಕೆ? ಹಾಲು ದರ ಏರಿಕೆ ಅಂದ ಕೂಡಲೇ ಜನ ಗಾಬರಿ ಆಗುತ್ತಾರೆ. ಆದರೆ, ಹಾಲಿನ ದರ ಏರಿಕೆಯಲ್ಲಿ ಎರಡು ರೀತಿ ಇದೆ. ಒಂದು ಉತ್ಪಾದಕರಿಗೆ, ಮತ್ತೊಂದು ಖರೀದಿದಾರರಿಗೆ ಹೆಚ್ಚಳ ಮಾಡುವುದಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಎರಡು ದರಗಳು ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಹಾಗಾಗಿ ಹಾಲು ಉತ್ಪಾದಕರಿಗೆ ಸಹಾಯ ಮಾಡಬೇಕಾಗಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಯಾರಿಗೂ ಹೊರೆಯಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುಲಾಗುವುದು ಎಂದರು.

ಅಮುಲ್ ಜೊತೆ ನಂದಿನಿ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ, ಅಮುಲ್ ಪ್ರತ್ಯೇಕವಾದ ಸಂಸ್ಥೆ, ನಂದಿನಿ ಪ್ರತ್ಯೇಕವಾದ ಸಂಸ್ಥೆ ಎರಡನ್ನು ವಿಲೀನ ಮಾಡುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ತೀರ್ಮಾನ: ನಾನು ಮಾಂಸ‌ ತಿನ್ನುತ್ತೇನೆ. ನೀವು ಬೇಡ ಎಂದರೆ ನಿಲ್ಲಿಸುವುದಿಲ್ಲ. ಹಾಗೆಯೇ ವೆಜ್ ತಿನ್ನುವವರಿಗೆ ಮಾಂಸ ತಿನ್ನಿ ಅನ್ನೊಕಾಗಲ್ಲ. ಅವರವರಿಗೆ ಬೇಕಾದದ್ದನ್ನ ಬಳಸುತ್ತಾರೆ. ಹಿಂದಿನಿಂದಲೂ ಏನು ನಡೆದುಕೊಂಡು ಬಂದಿದೆ ಅದು ನಡೆಯುತ್ತದೆ. ಅದನ್ನು ತಡೆಯುಕ್ಕಾಗುತ್ತಾ? ಗೋ ಹತ್ಯೆ ಅನ್ನೋದು ಅತ್ಯಂತ ಸೂಕ್ಷ್ಮ ವಿಚಾರ. ಹಸು ಕಡಿಯಬೇಕು ಎಂದು ಹೇಳುವುದಿಲ್ಲ, ಕಡಿಯ ಬಾರದು ಅಂತಲೂ ಹೇಳುವುದಿಲ್ಲ. ಆದರೆ, ರೈತರ ಅನುಕೂಲಕ್ಕೆ ಕಾಯ್ದೆ ಮಾಡಬೇಕಿದೆ. ಈ ವಿಚಾರದಲ್ಲಿ ಹಸು ಅಥವಾ ಮತ್ತೊಂದು ಎನ್ನುವ ಪ್ರಶ್ನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನೂ ಓದಿ: ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​

ಇದಕ್ಕೂ ಮುನ್ನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೈಸೂರು ಪ್ರಾಂತ್ಯದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಬ್ಯಾಂಕ್​ಗಳಲ್ಲಿ ಯಾವುದೇ ರೀತಿಯ ಹಣ ದುರುಪಯೋಗ ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ಮಾಡಿ ಸಾಲ ವಿತರಣೆ ಮಾಡಬೇಕು. ಎಲ್ಲ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಇರಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಸ್​ವರ್ಡ್​ಗಳು ದುರುಪಯೋಗ ಆಗಬಾರದು. ಯಾವುದೇ ಅಧಿಕಾರಿಗಳ ಮೇಲೆ ಹಣ ದುರುಪಯೋಗದ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ಹಣ ದುರುಪಯೋಗದ ಪ್ರಕರಣಗಳು ಇದ್ದರೆ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.