ETV Bharat / state

ತಾಯಿ-ಪತ್ನಿ ಇಬ್ಬರ ಹೆಸರೂ ಒಂದೇ: ನಕಲಿ ದಾಖಲೆ ನೀಡಿ ಸಾಲ ಪಡೆದು ವಂಚಿಸಿದ ವ್ಯಕ್ತಿ ಸಹೋದರನಿಂದ ಸಿಕ್ಕಿಬಿದ್ದ!

author img

By

Published : Oct 5, 2021, 8:50 AM IST

ತಾಯಿ ಹಾಗೂ ಪತ್ನಿಯ ಹೆಸರು ಒಂದೇ ಆಗಿದ್ದರಿಂದ ವ್ಯಕ್ತಿಯೊಬ್ಬ ತಾಯಿ ಮೃತಪಟ್ಟ ಬಳಿಕ ಆಕೆಯ ಹೆಸರಿನಲ್ಲಿ ಸಹಕಾರ ಸಂಘದಿಂದ ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.

complaint-registered-against-couples-who-cheated-cooperative-society-in-name-of-deceased-mother
ಮೃತಪಟ್ಟ ತಾಯಿ ಹೆಸರಲ್ಲಿ ಸಾಲ ಪಡೆಯುತ್ತಿದ್ದ ಪುತ್ರ

ಮೈಸೂರು: ಮೃತಪಟ್ಟಿದ್ದ ತಾಯಿಯ ಹೆಸರಿನಲ್ಲಿ‌ ನಕಲಿ ದಾಖಲೆಗಳನ್ನು ಸೃಷ್ಟಿಸಿ 12 ವರ್ಷಗಳಿಂದ ಸಾಲ ಸೌಲಭ್ಯ ಪಡೆದು ವಂಚಿಸಿದ್ದ ಪುತ್ರ ಸಿಕ್ಕಿಬಿದ್ದಿದ್ದಾನೆ. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿನಗೊಂಡನಹಳ್ಳಿಯ ಪಿ.ಡಿ.ಲಿಂಗರಾಜೇಗೌಡ-ಲಕ್ಷ್ಮಮ್ಮ ದಂಪತಿ ಆರೋಪಿಗಳಾಗಿದ್ದು, ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ.

ತಾಲೂಕಿನ ರತ್ನಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾಯಿ ಹೆಸರಲ್ಲಿ ಸಾಲ ಪಡೆದಿರುವ ಜೊತೆಗೆ, ಸರ್ಕಾರಿ ಸಾಲ ಮಂಜೂರಾತಿ, ಬಡ್ಡಿ ಮಂಜೂರಾತಿಯಂತಹ ಸೌಲಭ್ಯವನ್ನೂ ಆರೋಪಿ ಪಡೆದಿದ್ದಾನೆ.

ಆರೋಪಿ ಲಿಂಗರಾಜೇಗೌಡನ ತಾಯಿ ಹಾಗೂ ಪತ್ನಿಯ ಹೆಸರು ಒಂದೇ ಆಗಿತ್ತು. ಈ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆತ ಸಾಲ ಪಡೆದಿದ್ದ. ಉಯಿಗೊಂಡನಹಳ್ಳಿಯ ದೇಶೇಗೌಡ-ಲಕ್ಷ್ಮಮ್ಮ ದಂಪತಿಗೆ 5 ಗಂಡು, 3 ಹೆಣ್ಣು ಮಕ್ಕಳಿದ್ದು, ತಾಯಿ ಲಕ್ಷ್ಮಮ್ಮ 1986ರಲ್ಲಿ ಮೃತಪಟ್ಟಿದ್ದರು. ತಾಯಿ ಲಕ್ಷ್ಮಮ್ಮ ತಮ್ಮ ಹೆಸರಿನಲ್ಲಿ ಉಯಿಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 38/117ರಲ್ಲಿ 1.05 ಎಕರೆ ಭೂಮಿ ಹೊಂದಿದ್ದರು. ಪಿ.ಡಿ.ಲಿಂಗರಾಜೇಗೌಡರ ಪತ್ನಿಯ ಹೆಸರೂ ಲಕ್ಷ್ಮಮ್ಮ ಆಗಿದ್ದು, 2006ರಲ್ಲಿ ರತ್ನಪುರಿಯ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಪತ್ನಿ ಲಕ್ಷ್ಮಮ್ಮರನ್ನು ತೋರಿಸಿ ಇವರೇ ತಾಯಿ ಲಕ್ಷ್ಮಮ್ಮ ಎಂದು ಸದಸ್ಯತ್ವ ಪಡೆದಿದ್ದ.

ಪತ್ನಿಯಿಂದ ಹೆಬ್ಬೆಟ್ಟು ಹಾಕಿಸಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಕುಟುಂಬಕ್ಕೆ ಸೇರಿದ್ದ ಜಮೀನನ್ನು ಅಡಮಾನವಿಟ್ಟು ಸತತ 12 ವರ್ಷಗಳ ಕಾಲ ಸಾಲ ಸೌಲಭ್ಯ ಹಾಗೂ 2007ರಲ್ಲಿ 10 ಸಾವಿರ, 2013ರಲ್ಲಿ 21 ಸಾವಿರ ಮತ್ತು 2018ರಲ್ಲಿ 49 ಸಾವಿರ ರೂ.ಸಾಲ ಮನ್ನಾದ ಸೌಲಭ್ಯವನ್ನು ಪಡೆದುಕೊಂಡಿದ್ದು ಗೊತ್ತಾಗಿದೆ. ಅಣ್ಣನಿಗೆ ಸಾಲಸೌಲಭ್ಯ ಸಿಗುತ್ತಿರುವುದನ್ನು ಕಂಡು ಅನುಮಾನಗೊಂಡ ಸಹೋದರ ಮೊಗಣ್ಣೇಗೌಡ ಸಹಕಾರ ಸಂಘದಲ್ಲಿ ವಿಚಾರಿಸಿದಾಗ ವಂಚನೆಯ ಬಗ್ಗೆ ತಿಳಿದುಬಂದಿತ್ತು.

ಆಧಾರ್ ಕಾರ್ಡ್​​ನಿಂದ ವಂಚನೆ ಬಯಲು

2020ರಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮೊಗಣ್ಣೇಗೌಡರು ನೀಡಿದ್ದ ದೂರಿನನ್ವಯ ತನಿಖೆ ನಡೆಸಿದ ಅಧಿಕಾರಿಗಳು ಆಧಾರ್‌ ಕಾರ್ಡ್ ಪರಿಶೀಲಿಸಿದಾಗ ಆಧಾರ್​​ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿ ಲಕ್ಷ್ಮಮ್ಮ ಕೋಂ ಲಿಂಗರಾಜೇಗೌಡ ಎಂದು ನಮೂದಾಗಿರುವುದು ಸ್ಪಷ್ಟವಾಗಿದೆ.

ಸಾಲ ನೀಡುವಾಗ ಸಂಘದ ಸಿಇಓ ದಾಖಲಾತಿಗಳನ್ನು ನಿಖರವಾಗಿ ಪರಿಶೀಲಿಸದೆ ಸಾಲ ಮಂಜೂರು ಮಾಡಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಸಾಲಮನ್ನಾ, ಬಡ್ಡಿಮನ್ನಾ ಯೋಜನೆ ಮಂಜೂರಾತಿಯನ್ನು ಬಡ್ಡಿಸಮೇತ ಆರೋಪಿಯಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಇದಲ್ಲದೇ, ಸಂಘಕ್ಕೆ ನಕಲಿ ದಾಖಲೆಗಳನ್ನು ನೀಡಿ ಮೋಸ ಮಾಡಿರುವ ಲಕ್ಷ್ಮಮ್ಮ-ಲಿಂಗರಾಜೇಗೌಡ ದಂಪತಿ ವಿರುದ್ಧ ಲೋಕಾಯುಕ್ತ ನಿರ್ದೇಶನದಂತೆ ಸಹಕಾರ ಸಂಘದ ಸಿಇಓ ರಮೇಶ್​ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದಿಯುತ್ತಿದ್ದ ಖದೀಮರು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.