ETV Bharat / state

ಕಾವೇರಿ ಹೋರಾಟಕ್ಕೆ ಧುಮುಕಿದ ವಿವಿಧ ಸಂಘಟನೆಗಳು.. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ

author img

By ETV Bharat Karnataka Team

Published : Sep 28, 2023, 8:17 PM IST

Indefinite sit in by Raita Hitarakshana Samiti
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವುದು.

ಮಂಡ್ಯದ ಸರ್ ಎಂ ವಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಹಲವಾರು ಸಂಘಟನೆಗಳು ಕಾರ್ಯಕರ್ತರು ಬೆಂಬಲ ಸೂಚಿಸಿದರು. ಈ ವೇಳೆ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತ ಮಾಡಬೇಕೆಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕೈಗೊಂಡಿರುವ ನಿರಂತರ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಸಮಿತಿ ಸದಸ್ಯರ ಜತೆಗೂಡಿದ ಹಲವು ಸಂಘಟನೆಗಳ ಕಾರ್ಯಕರ್ತರು ನೆರೆ ರಾಜ್ಯ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಜಾತ್ಯಾತೀತ ದಳದ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಧರಣಿಯಲ್ಲಿ ಪಾಲ್ಗೊಂಡು ಕಾವೇರಿ ಹೋರಾಟಕ್ಕೆ ನಿರಂತರ ಬೆಂಬಲ ನೀಡುವುದಾಗಿ ತಿಳಿಸಿದರು.

ಬೆಂಗಳೂರಿನ ಗೌಡತಿಯರ ಸೇನೆ, ಗೌಡರ ಯುವಸೇನೆ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗ ಪದವೀಧರರ ವೇದಿಕೆ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸ ಸಂಶೋಧಕ ಡಾ. ತಲಕಾಡುಚಿಕ್ಕ ರಂಗೇಗೌಡ, ಸಾಹಿತಿ ಎಲ್ ಎನ್ ಮುಕುಂದರಾಜ್, ಟಿ ರೇಣುಕಾ ಭಕ್ತರಹಳ್ಳಿ, ಕೃಷ್ಣೆಗೌಡ, ಕೆ ಆರ್ ವೆಂಕಟೇಶ್ ಗೌಡ ನೇತೃತ್ವ ವಹಿಸಿದ್ದರು.

ಈದ್ ಮಿಲಾದ್ ಹಬ್ಬದ ದಿನವೂ ಮುಸ್ಲಿಂ ಸಮುದಾಯಎಸ್ ಡಿ ಪಿ ಐ ನೇತೃತ್ವದಲ್ಲಿ ಕಾವೇರಿ ಹೋರಾಟ ಬೆಂಬಲಿಸಿದರು. ಅಧ್ಯಕ್ಷ ಸಾದತ್, ಉಪಾಧ್ಯಕ್ಷ ಮುಕ್ತಿಯಾರ್, ಮುಬಾರಕ್ ಹುಸೇನ್, ಆಸ್ಕರ್ ಭಾಗವಹಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಾರ್ಯಕರ್ತರು ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ರೈತ ಹಿತರಕ್ಷಣಾ ಸಮಿತಿಯ ಹೋರಾಟ ಬೆಂಬಲಿಸಿದರು. ಕಾವೇರಿ ನಮ್ಮದು, ರಕ್ತ ಕೊಟ್ಟೆವು, ನೀರು ಬಿಡೆವು ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ, ಜಿಲ್ಲಾಧ್ಯಕ್ಷ ಹೇಮಂತ್, ಕುಮಾರ್ ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಇಂಡುವಾಳು ಮತ್ತು ಸಿದ್ದಯ್ಯನ ಕೊಪ್ಪಲು ಗ್ರಾಮದ ರೈತರು ಟ್ರಾಕ್ಟರ್ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿ ಬೆಂಬಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವ ವಹಿಸಿದ್ದರು.

ತಮಿಳುನಾಡಿನಿಂದ ದಿಕ್ಕು ತಪ್ಪಿಸುವ ಕೆಲಸ- ಡಾ ತಲಕಾಡು ಚಿಕ್ಕರಂಗೇಗೌಡ.. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ನಿರಂತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ತಿಳಿಸಿದರು.

ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಧರಣಿ ಸ್ಥಳದಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ಕರ್ನಾಟಕದ ಹಳೆ ಮೈಸೂರು ಭಾಗ, ಆಂಧ್ರಪ್ರದೇಶದ ದಕ್ಷಿಣ ಭಾಗ, ಕೇರಳ ಸೇರಿ ಐದು ಜಲಮೂಲಗಳಿವೆ. ಅದನ್ನು ಮರೆಮಾಚಿ ಪ್ರಾಧಿಕಾರದ ಎದುರು ಕರ್ನಾಟಕದ ಬಿಡಬೇಕಾದ ನೀರಿನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ ಎಂದರು.

ಮೂರನೇ ಒಂದರಷ್ಟು ಅರಣ್ಯ ಸಂರಕ್ಷಿಸದೇ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿದೆ. ಬೆಂಗಳೂರಿನ ಯಲಹಂಕ ಪ್ರದೇಶಕ್ಕೆ ಕಾವೇರಿ ನೀರು ನೀಡುವ ಯೋಜನೆಗೆ ಕಾವೇರಿ ವ್ಯಾಪ್ತಿಗೆ ಸದರಿ ಪ್ರದೇಶ ಬರುವುದಿಲ್ಲ ಎಂದು ಅಡ್ಡಗಾಲು ಹಾಕಿದ್ದರು. ಆದರೆ ಆಂಧ್ರಪ್ರದೇಶದಿಂದ ಚೆನ್ನೈಗೆ ಕೃಷ್ಣ ನೀರನ್ನು ಪಡೆದಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿ ನಿರ್ವಹಣೆಯನ್ನು ಕರ್ನಾಟಕ, ಕೇರಳ ಮಹಾರಾಷ್ಟ್ರ ರಾಜ್ಯಗಳು ಕೋಟ್ಯಂತರ ಹಣದಿಂದ ಮಾಡುತ್ತಿವೆ. ಆದರೆ ಏನು ಕೊಡುಗೆ ನೀಡದ ತಮಿಳುನಾಡು ಹೆಚ್ಚಿನ ನೀರನ್ನು ಪಡೆಯುತ್ತದೆ ಎಂದು ಕಿಡಿಕಾರಿದರು.

ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದು 1118 ವರ್ಷಗಳ ಹಿಂದೆ ಎಂಬ ಸತ್ಯ ತಿಳಿಯಬೇಕಿದೆ. 904 ಮತ್ತು 905ನೇ ಇಸವಿಯಲ್ಲಿ ಪಾಂಡವಪುರ ತಾಲೂಕಿನ ಸೀತಾಪುರದ ಬಳಿ ತಲಕಾಡು ಗಂಗರು ಕಾವೇರಿ ನದಿಗೆ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದ್ದರು. ತಮಿಳುನಾಡಿನಲ್ಲಿ ಅದಾಗಲೇ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿಕೊಂಡಿದ್ದ ಚೋಳರು ಇದಕ್ಕೆ ತಕರಾರು ಮಾಡಿದ್ದರು ಎಂದು ತಿಳಿಸಿದರು.

ತಲಕಾಡು ಗಂಗರ ನಂತರ ಟಿಪ್ಪು ಸುಲ್ತಾನ್ ಅಣೆಕಟ್ಟೆ ನಿರ್ಮಾಣ ಯೋಜನೆ ಮಾಡಿದರು. ಬಳಿಕ ಮೈಸೂರು ರಾಜ ಮನೆತನ ನಾಲ್ವಡಿ ಕೃಷ್ಣರಾಜ ಒಡೆಯರ್ ಜಲಾಶಯ ನಿರ್ಮಿಸಿದರು. ಇದಕ್ಕೆ ಒಡೆಯರ್ ಪತ್ನಿ ಪ್ರತಾಪಕುಮಾರಿ ಚಿನ್ನಾಭರಣಗಳನ್ನು ನೀಡುವ ಮೂಲಕ ಸಹಕರಿಸಿದ್ದರು ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಕಾನೂನಿನ ಮೂಲಕ ನ್ಯಾಯ ಸಿಗದು, ಪರ್ಯಾಯ ಮಾರ್ಗದ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕು, ಜಲಾಶಯಗಳ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಆಗಬೇಕು. ಆ ಹಿನ್ನೆಲೆಯಲ್ಲಿ ಹೊಸಕೆರೆಗಳ ನಿರ್ಮಾಣದ ಜೊತೆಗೆ ಕೆರೆಗಳ ಹೂಳೆತ್ತಿಸಬೇಕು, ಒತ್ತುವರಿ ತೆರವು ಮಾಡಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಕರ್ನಾಟಕದ ಪಾಲಿನ ನೀರು ಸದ್ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದರು.

ಇದನ್ನೂಓದಿ:ಕಾವೇರಿ ಜಲವಿವಾದ ಸಂಬಂಧ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿ: ಸಚಿವ ಸತೀಶ್​ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.