ETV Bharat / state

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್.ಯತೀಶ್ ಅಧಿಕಾರ ಸ್ವೀಕಾರ

author img

By

Published : Oct 31, 2021, 9:33 AM IST

Updated : Oct 31, 2021, 12:39 PM IST

N Yatheesh appointed as mandya SP
ಮಂಡ್ಯ ಎಸ್​ಪಿ ಎನ್ ಯತೀಶ್

ಮಂಡ್ಯ ನೂತನ ಎಸ್ಪಿಯಾಗಿ ಎನ್. ಯತೀಶ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಮಂಡ್ಯ: ಹತ್ತು ದಿನಗಳ ಬಳಿಕ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಎನ್.ಯತೀಶ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಗೊಂದಲಗಳಿಗೆ ತೆರೆ ಎಳೆದಿದೆ. ಇಂದು ಮಂಡ್ಯ ನೂತನ ಎಸ್ಪಿಯಾಗಿ ಎನ್. ಯತೀಶ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಎಸ್​ಪಿ

2016ರ ಕರ್ನಾಟಕ ಕೆಡರ್‌ನ ಐಪಿಎಸ್ ಅಧಿಕಾರಿ ಎನ್.ಯತೀಶ್ ಮೂಲತಃ ತುಮಕೂರು ಜಿಲ್ಲೆಯವರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಿರ್ದೇಶಕರಾಗಿದ್ದರು. ಬಳಿಕ ಗದಗ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.

ಡಾ. ಸುಮನ್ ಡಿ. ಪನ್ನೇಕರ್ ಉತ್ತರ ಕನ್ನಡಕ್ಕೆ

ವಿವಾದಗಳ ಸುಳಿಗೆ ಸಿಲುಕಿ ವರ್ಗಾವಣೆಗೊಂಡ ಡಾ.ಎಂ.ಅಶ್ವಿನಿ ಬಳಿಕ ತೆರವಾದ ಸ್ಥಾನಕ್ಕೆ ಮೈಸೂರು ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕಿಯಾಗಿದ್ದ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಸರ್ಕಾರ ಆ. 20ರಂದು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶ ಹೊರಬಿದ್ದ ಕೆಲವೇ ಸಮಯದಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಎರಡು ದಿನ ಕಾದು ನೋಡುವಂತೆ ಮೌಖಿಕ ಸೂಚನೆಯನ್ನು ಡಾ. ಸುಮನ್‌ ಡಿ. ಪನ್ನೇಕರ್‌ ಅವರಿಗೆ ನೀಡಲಾಗಿತ್ತು. ಇದೀಗ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಮಂಡ್ಯ ಕಡೆ ಮುಖ ಮಾಡಲೇ ಇಲ್ಲ ಡಾ. ಸುಮನ್ ಡಿ. ಪನ್ನೇಕರ್‌ :

ಮಂಡ್ಯದಲ್ಲಿ ಎಸ್‌ಪಿ ಆಗಿದ್ದ ಡಾ.ಎಂ.ಅಶ್ವಿನಿ ಅವರನ್ನು ರಾಜ್ಯ ಸರ್ಕಾರ ಅ. 20ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅ.21ರಂದು ಎಸ್‌ಪಿ ಡಾ.ಎಂ.ಅಶ್ವಿನಿ ಎಎಸ್ಪಿ ಡಾ.ಧನಂಜಯ ಅವರಿಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದ್ದರು. ಮಂಡ್ಯಕ್ಕೆ ವರ್ಗವಾಗಿದ್ದ ಡಾ.ಸುಮನ್ ಡಿ.ಪನ್ನೇಕರ್‌ ಮಂಡ್ಯ ಕಡೆ ಮುಖ ಮಾಡಲೇ ಇಲ್ಲ.

ಅವರು ಬರದಂತೆ ಸರ್ಕಾರದ ಮಟ್ಟದಲ್ಲಿ ಪ್ರಭಾವಿಗಳು ತಡೆಹಿಡಿದಿದ್ದಾರೆಂಬ ಆರೋಪಗಳು ಬಲವಾಗಿ ಕೇಳಿಬಂದಿದ್ದವು. ಇದೀಗ ರಾಜ್ಯ ಸರ್ಕಾರ ಅವರ ಬದಲಿಗೆ ಎನ್ . ಯತೀಶ್‌ ನೇಮಕ ಮಾಡಿರುವುದು ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

N Yatheesh appointed as mandya SP
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್. ಯತೀಶ್ ನೇಮಕ

ಈ ನಡುವೆ ಅ.28ಕ್ಕೆ ಎಸ್‌ಪಿ ಹುದ್ದೆಗೆ ಬಡ್ತಿ ಪಡೆದಿರುವ ಡಾ.ವಿ.ಜೆ.ಶೋಭಾರಾಣಿ ಅವರು ಮಂಡ್ಯಕ್ಕೆ ವರ್ಗಾವಣೆಯಾಗುವರೆಂಬ ವದಂತಿಗಳು ಹರಡಿದ್ದವು. ಅವರು ಈ ಹಿಂದೆ ಮಂಡ್ಯದಲ್ಲಿ ಡಿವೈಎಸ್ಪಿ, ಎಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದರು. ಒಂದು ವಾರದಿಂದಲೂ ಈ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಬಂದಿತ್ತಾದರೂ ಅಂತಿಮವಾಗಿ ಎನ್.ಯತೀಶ್ ಎಸ್‌ಪಿ ಹುದ್ದೆಗೆ ನೇಮಕಗೊಂಡು ಗೊಂದಲಗಳು, ವಿವಾದ, ವದಂತಿಗಳಿಗೆಲ್ಲ ತೆರೆ ಬಿದ್ದಿದೆ.

ಅಧಿಕಾರ ಸ್ವೀಕಾರ:

ಮಂಡ್ಯ ನೂತನ ಎಸ್ಪಿಯಾಗಿ ಎನ್. ಯತೀಶ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ, ರಾಷ್ಟ್ರೀಯ ಏಕತಾ ದಿನ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ನೂತನ ಎಸ್ಪಿ ಯತೀಶ್. ಎನ್ ಪ್ರತಿಜ್ಞಾವಿಧಿ ಬೋಧಿಸಿದರು.

ಇದನ್ನೂ ಓದಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ನೇಮಕ ಅನುಮಾನ: ಖಡಕ್​ ಅಧಿಕಾರಿಗಳಿಗೆ ಹೆದರಿದರಾ ಮಂಡ್ಯ ರಾಜಕಾರಣಿಗಳು!?

Last Updated :Oct 31, 2021, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.