ETV Bharat / state

'ಕಮಲ ಕೆರೆಯಲ್ಲಿದ್ರೆ ಚಂದ, ತೆನೆ ಹೊಲದಲ್ಲಿದ್ರೆ ಚಂದ': ಡಿ.ಕೆ.ಶಿವಕುಮಾರ್

author img

By

Published : Feb 12, 2023, 7:20 AM IST

Updated : Feb 12, 2023, 7:58 AM IST

ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್​ ಸಾಕಷ್ಟು ಕಸರತ್ತು ನಡೆಸುತ್ತಿದೆ. ಪಕ್ಷದ ಹಿರಿಯ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿಕೆಶಿ​ ಪ್ರಜಾಧ್ವನಿ ಯಾತ್ರೆಯ ಮೂಲಕ ಮತಬೇಟೆಯಲ್ಲಿ ನಿರತರಾಗಿದ್ದಾರೆ.

maddur
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಮದ್ದೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ

ಮದ್ದೂರು (ಮಂಡ್ಯ): "ರಾಜ್ಯ ಮತ್ತು ರಾಷ್ಟ್ರವನ್ನು ಕಾಪಾಡಲು ಕಾಂಗ್ರೆಸ್​ ಪಕ್ಷದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಅವರದ್ದೇ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ. ಇನ್ನು ಜೆಡಿಎಸ್​ ಅಧಿಕಾರಕ್ಕೆ ಬರುವುದಿಲ್ಲ. ಯಾವತ್ತಿದ್ದರೂ ಕಮಲ ಕೆರೆಯಲ್ಲಿದ್ರೆ ಚಂದ, ತೆನೆ ಹೊಲದಲ್ಲಿದ್ರೆ ಚಂದ, ದಾನ ಧರ್ಮ ಮಾಡಿರುವ ಕೈ ಅಧಿಕಾರಕ್ಕೆ ಬಂದ್ರೇನೆ ಚಂದ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ಮಂಡ್ಯದ ಮದ್ದೂರಿನಲ್ಲಿ ಶನಿವಾರ 'ಪ್ರಜಾಧ್ವನಿ ಯಾತ್ರೆ' ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿಗೆ ಭ್ರಷ್ಟ ಸರ್ಕಾರವೆಂಬ ಹೆಸರಿದೆ. ಅವರು ಅವರದ್ದೇ ಆದ ಸಿದ್ಧಾಂತವನ್ನು ರಾಜಕೀಯದಲ್ಲಿ ಪಾಲಿಸುತ್ತಾರೆ. ಹೀಗಾಗಿ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವುದಿಲ್ಲ. ಅಲ್ಲದೇ ರಾಜ್ಯ ಮತ್ತು ರಾಷ್ಟ್ರವನ್ನು ಕಾಪಾಡಬೇಕಾದರೆ ಅದು ಕಾಂಗ್ರೆಸ್​ ಪಕ್ಷದಿಂದ ಮಾತ್ರ ಸಾಧ್ಯ" ಎಂದು ಮನವಿ ಮಾಡಿದರು.

"ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದಾಯ ಮಾತ್ರ ಹಾಗೆಯೇ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು ಮನೆಯೊಡತಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಕೊಡುವ ತೀರ್ಮಾನ ಮಾಡಿದ್ದೇವೆ. 200 ಯೂನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಈ ಬಗ್ಗೆ ನಾನು ಮತ್ತು ಸಿದ್ದರಾಮಯ್ಯ ಗ್ಯಾರಂಟಿ ಚೆಕ್​ಗೂ ಸಹಿ ಮಾಡಿದ್ದೇವೆ. ನಾವು ಹೇಳಿದಂತೆ ನಡೆಯದೇ ಇದ್ದಲ್ಲಿ ಮುಂದೆ ನಿಮ್ಮ ಮನೆಗೆ ಮತ ಕೇಳಿಕೊಂಡು ಬರುವುದಿಲ್ಲ" ಎಂದರು.

"ಸಮುದ್ರ ಪಾಲಾಗುವ ಕಾವೇರಿ ನೀರನ್ನು ಉಳಿಸಲು ಮೇಕೆದಾಟು ಯೋಜನೆಯ ಅವಶ್ಯಕತೆ ಇದೆ. ಈ ಬಗ್ಗೆ ತಾಂತ್ರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಯೋಜನೆ ಪೂರ್ಣ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಜನರ ಕಷ್ಟ ಸುಖ ಕೇಳಲೆಂದೇ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದೇವೆ. ಜನರಿಗಾಗಿ ಏನೆಲ್ಲಾ ಕೆಲಸಗಳು ಮಾಡಬಹುದು ಎಂಬುದನ್ನು ಈ ಮೂಲಕ ತಿಳಿಯುತ್ತಿದ್ದೇವೆ. ರೈತರ ಬದುಕಿನಲ್ಲಿ ಬದಲಾವಣೆ ತರುವ ಶಕ್ತಿ ಕಾಂಗ್ರೆಸ್‌ಗಿದೆ" ಎಂದು ನುಡಿದರು.

ಮಹಿಳೆಯರಿಗೂ ಅಧಿಕಾರ ಕೊಟ್ಟ ಜಿಲ್ಲೆ ಮಂಡ್ಯ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಗೆಲುವು ಸಾಧಿಸಿದ ಮಹಿಳೆಯರ ಪಟ್ಟಿ ನೀಡಿದ ಅವರು ರಮ್ಯಾ, ಸುಮಲತಾ ಸೇರಿದಂತೆ ಹಿರಿಯ ನಾಯಕಿಯರ ಹೆಸರು ಪ್ರಸ್ತಾಪ ಮಾಡಿದರು. "ಮದ್ದೂರಿನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗೆ ಡಿಕೆಶಿ ಅಂದುಕೊಂಡು ಮತ ನೀಡಿ. ನಿಮ್ಮ ಮಗನಾದ ನನ್ನ ಕೈ ಬಲಪಡಿಸಿ, ನಿಮ್ಮ ಮಗನ ಆಡಳಿತ ನೀವು ನೋಡಬೇಕು. ನಿಮ್ಮ ಮನೆ ಮಗನಿಗೆ ಬೆಂಬಲ ನೀಡಿ" ಎಂದು ವಿನಂತಿಸಿಕೊಂಡರು.

ಇದನ್ನೂ ಓದಿ: ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲು ಸಿದ್ದರಾಮಯ್ಯ ನಿರ್ಧಾರ

Last Updated : Feb 12, 2023, 7:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.