ETV Bharat / state

ರಾಹುಲ್ ಗಾಂಧಿ ಜೀವನ ಪಾಕೆಟ್ ಮನಿ ಮೇಲೆ ನಿಂತಿದೆ : ಅವರಿಂದ ಸ್ವಾವಲಂಬನೆ ಪಾಠ ಕಲಿಯೋದಾ? ಸಂಸದ ತೇಜಸ್ವಿ ಸೂರ್ಯ

author img

By

Published : Mar 21, 2023, 6:23 PM IST

MP Tejaswisurya
ಸಂಸದ ತೇಜಸ್ವಿಸೂರ್ಯ

ರಾಹುಲ್ ಜೀವನವೇ ಇನ್ನೊಬ್ಬರ ಮೇಲೆ ಅವಲಂಭಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ವಾವಲಂಬನೆ, ಸ್ವಾಭಿಮಾನಿ ಆಗಿಸುವ ಯೋಜನೆಗಳು ಸಾಧ್ಯವೇ ಎಂದು ಸಂಸದ ತೇಜಸ್ವಿಸೂರ್ಯ ಪ್ರಶ್ನಿಸಿದರು.

ಗಂಗಾವತಿ (ಕೊಪ್ಪಳ) : ರಾಹುಲ್ ಗಾಂಧಿಗೆ ಮಾಡಲು ಒಂದು ಸಣ್ಣ ಕೆಲಸವಿಲ್ಲ. ಹಾಗು ಹತ್ತು ರೂಪಾಯಿ ಸಂಪಾದಿಸುವ ಸಾಮರ್ಥ್ಯವಿಲ್ಲ. ಆದರೆ ಇಂದಿಗೂ ರಾಹುಲ್ ಗಾಂಧಿ ಅವರ ಜೀವನ ಅವರ ಅಮ್ಮ ಸೋನಿಯಾ ಗಾಂಧಿ ನೀಡುವ ಪಾಕೆಟ್ ಮನಿಯ ಮೇಲೆಯೇ ಜೀವನ ಅವಲಂಬಿಸಿದೆ. ಇಂಥವರಿಂದ ಯುವಕರಿಗೆ ಸ್ವಾವಲಂಬಿ ಪಾಠ ಕಲಿಯಲು ಹೇಗೆ ಸಾಧ್ಯ ಎಂದು ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿದ ಮಾತನಾಡಿದ ತೇಜಸ್ವಿ ಸೂರ್ಯ, ಸೋನಿಯಾ ಗಾಂಧಿ ನೀಡುವ ಪಾಕೆಟ್​ ಮನಿಯ ಮೇಲೆ ರಾಹುಲ್ ಜೀವನ ಅವಲಂಬಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ ಐಟಿಐ ಮತ್ತು ಪದವೀಧರರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡುತ್ತಿದೆ. ರಾಹುಲ್ ಜೀವನವೇ ಇನ್ನೊಬ್ಬರ ಮೇಲೆ ಅವಲಂಭಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ವಾವಲಂಬನೆ, ಸ್ವಾಭಿಮಾನಿಯನ್ನಾಗಿಸುವ ಯೋಜನೆಗಳು ಸಾಧ್ಯವೇ ಎಂದು ಪ್ರಶ್ನಿಸಿದರು.

ಯುವ ಸಬಲೀಕರಣದ ಯೋಜನೆ ನಿರೀಕ್ಷೆ ಹೇಗೆ ಸಾಧ್ಯ : ದೇಹದಲ್ಲಿ ಶಕ್ತಿ ಇದ್ದಾಗಲೂ ಕೂಡ ಯುವ ಸಮೂಹವನ್ನು ಪರವಲಂಬಿಯಾಗಿ ಪರಿಪರ್ತಿಸುವುದು ಕಾಂಗ್ರೆಸ್ ಆಡಳಿತದ ಮಾದರಿ. ಆದರೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಡುವುದು ಬಿಜೆಪಿಯ ಆಡಳಿತದ ಮಾದರಿ ಎಂದು ತೇಜಸ್ವಿ ಸೂರ್ಯ ಹೇಳಿದರು. ಯುವ ಶಕ್ತಿಗೆ ಪ್ರೇರಣೆ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು. ಆದರೆ ಕಾಂಗ್ರೆಸ್ ಅಗ್ಗದ ಯೋಜನೆಗಳನ್ನು ನೀಡುವ ಮೂಲಕ ಯುವ ಸಮೂಹದ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ.

ಇಂಥವರಿಂದ ಯುವ ಸಬಲೀಕರಣದ ಯೋಜನೆ ನಿರೀಕ್ಷೆ ಹೇಗೆ ಸಾಧ್ಯ ಎಂದರು. ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ನೀಡಿರುವ ಇಂಥಹ ಯೋಜನೆಗಳಿಂದಾಗಿಯೇ ಇಂದು ಮನೆ ಸೇರುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಇನ್ನು ಅವರು ನೀಡಿರುವ ಗ್ಯಾರಂಟಿಗಳು ನಿರುಪಯುಕ್ತವಾಗಲಿವೆ ಎಂದು ಸಂಸದ ತೇಜಸ್ವಿ ಹೇಳಿದರು.

ಅಂಬೇಡ್ಕರ್ ಆಶಯ ಈಡೇರಿಸಲು ಮೋದಿಯೇ ಬರಬೇಕಾಯಿತು : ಇದಕ್ಕೂ ಮೊದಲು ಮಾತನಾಡಿದ ಶಾಸಕ ಚಲುವಾದಿ ನಾರಾಯಣಸ್ವಾಮಿ, ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಅಧಿಕಾರ ನಡೆಸಿದ ಕಾಂಗ್ರೆಸ್ 70 ವರ್ಷದಿಂದ ದಲಿತನ್ನು ಶೋಷಿಸುತ್ತಲೆ ಬಂದಿದೆ. ನಮ್ಮ ಮೀಸಲಾತಿ ಹೆಚ್ಚಳಕ್ಕೆ ಮೋದಿ ಸರ್ಕಾರ ಬರಬೇಕಾಯಿತು. ಸಂವಿಧಾನದ ಅಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕಾಂಗ್ರೆಸ್ 70 ವರ್ಷದಲ್ಲಿ ಅದೆಷ್ಟು ಪ್ರಧಾನಿಗಳು ಜಮ್ಮು ಕಾಶ್ಮೀರಕ್ಕೆ ಹೋಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು. ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ಜಾರಿ ಮಾಡಿದ್ದರ ಬಗ್ಗೆ ಸ್ವತಃ ಅಂಬೇಡ್ಕರ್ ಬೇಸರಿಸಿಕೊಂಡಿದ್ದರು. ಅಂಬೇಡ್ಕರ್ ಆಶಯ ಈಡೇರಿಸಲು ಮತ್ತು ಜಮ್ಮು ಕಾಶ್ಮೀರದ ಜನರಿಗೆ ಮೀಸಲಾತಿ ಕಲ್ಪಿಸಲು ಮೋದಿಯೇ ಬರಬೇಕಾಯಿತು. ಹೀಗಾಗಿ ಅಧಿಕಾರಕ್ಕಾಗಿ ಸುಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ ಪಕ್ಷವನ್ನು ದಲಿತ ಸಮುದಾಯಗಳು ನಂಬಬಾರದು ಎಂದು ಕರೆ ನೀಡಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾದ ಯೋಜನೆಗಳನ್ನು ಸಮರ್ಪಕವಾಗಿ ಕ್ಷೇತ್ರಕ್ಕೆ ತರಲಾಗಿದೆ. ಈ ಬಾರಿ ಗಂಗಾವತಿಯಲ್ಲಿ ಮತ್ತೊಮ್ಮೆ ಕಮಲ ಅರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಈ ವೇಳೆ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್​, ಶಾಸಕ ಬಸವರಾಜ ದಢೇಸ್ಗೂರು, ರೈತನಗರ ಅಮೇಶ, ಲಂಕೇಶ ಗುಳದಾಳ, ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಈಶಪ್ಪ ಹಿರೇಮನಿ, ರಾಘವೇಂದ್ರ ಶೆಟ್ಟಿ, ನೆಕ್ಕಂಟಿ ಸೂರಿಬಾಬು, ಜಿ. ವೀರಪ್ಪ, ಸಿಂಗನಾಳ ವಿರೂಪಾಕ್ಷಪ್ಪ, ಚನ್ನಪ್ಪ ಮಳಗಿ ಇತರರಿದ್ದರು.

ಇದನ್ನೂ ಓದಿ :ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಸ್ಯೆ ಬಗ್ಗೆ ಸಿಎಂಗೆ ಸಂಸದರ ನಿಯೋಗದಿಂದ ಮನವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.